ಯಗಚಿ ಜಲಾಶಯ ನೀರು ಬೇರೆಡೆ: ವಿವಿಧ ಸಂಘಟನೆಗಳ ಪ್ರತಿಭಟನೆ

| Published : Apr 30 2024, 02:11 AM IST

ಸಾರಾಂಶ

ಯಗಚಿ ಜಲಾಶಯದಿಂದ‌ ಆಲೂರು ಮತ್ತು ಇನ್ನಿತರ ಭಾಗಗಳಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ಬೇಲೂರು ಯಗಚಿ ಜಲಾಶಯದ ಮುಂಭಾಗದಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಆಲೂರು ಸೇರಿ ಇತರ ಭಾಗಗಳಿಗೆ ನೀರು ಹರಿಸಲು ವಿರೋಧ । ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ

ಕನ್ನಡಪ್ರಭ ವಾರ್ತೆ ಬೇಲೂರು

ಯಗಚಿ ಜಲಾಶಯದಿಂದ‌ ಆಲೂರು ಮತ್ತು ಇನ್ನಿತರ ಭಾಗಗಳಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ಯಗಚಿ ಜಲಾಶಯದ ಮುಂಭಾಗದಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕರವೇ ಚಂದ್ರಶೇಖರ್, ಜಯಕರ್ನಾಟಕ ರಾಜು, ಡಾ ರಾಜ್ ಸಂಘದ ಅಧ್ಯಕ್ಷ ತೀರ್ಥಂಕರ್ ಹಾಗೂ ಕರವೆ ಕಾರ್ಯದರ್ಶಿ ಖಾದರ್ ಮಾತನಾಡಿ , ‘ಈಗಾಗಲೇ ತಾಲೂಕಿನಲ್ಲಿ ಯಗಚಿ ಜಲಾಶಯದಿಂದ ಪಟ್ಟಣ ಸೇರಿದಂತೆ ಹಾಸನ, ಹೊಳೆನರಸೀಪುರ, ಚಿಕ್ಕಮಗಳೂರು ತಾಲೂಕಿಗೆ ಕುಡಿಯಲು ನೀರು ನೀಡಲಾಗುತ್ತಿದೆ. ಮಳೆ ಇಲ್ಲದೆ ನಮ್ಮ ತಾಲೂಕಿನ ಜನರು ಹಾಗೂ ಪುರಸಭೆ ೨೩ ವಾರ್ಡ್‌ನ ಜನರು ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಎರಡು ಮೂರು ದಿನಗಳಿಗೊಮ್ಮೆ ಕುಡಿಯುವ ನೀರನ್ನು ನೀಡಲಾಗುತ್ತಿದೆ. ಇದೇ ರೀತಿ ಬೇರೆ ತಾಲೂಕುಗಳಿಗೆ ಇದೇ ರೀತಿ ಕದ್ದು ಮುಚ್ಚಿ ನೀರನ್ನು ಹರಿಸಿದರೆ ಕುಡಿಯಲು ಹಾಗೂ ತೊಳೆಯಲು ನೀರು ಸಿಗುವುದಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಚಾನಲ್ ಮೂಲಕ ಆಲೂರು ಪಟ್ಟಣಕ್ಕೆ ನೀರನ್ನು ಹರಿಸುತ್ತಿರುವುದನ್ನು ನಿಲ್ಲಿಸಬೇಕು. ೧೫ ದಿನಗಳ ಕಾಲ ನೀರನ್ನು ಬಿಡಲು ಅಧಿಕಾರಿಗಳು ನಿರ್ಧರಿಸಿದ್ದು ಇದರಿಂದ. ೦.೦೩೦ ಟಿಎಂಸಿ ನೀರನ್ನು ಹರಿಸಿದರೆ ಪಟ್ಟಣದ ಜನತೆಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಇನ್ನೆರಡು ದಿನಗಳಲ್ಲಿ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಅಹೋರಾತ್ರಿ ಧರಣಿ ನಡೆಸಲಾಗುವುದು. ಬೇಲೂರು ಬಂದ್ ಕರೆದು ಎಲ್ಲಾ ಸಂಘಟನೆಗಳ ಜತೆಯಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ನಂತರ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಯಗಚಿ ಜಲಾಶಯದ ಅಧಿಕಾರಿ ಪುನೀತ್ ಹಾಗೂ ಶಿವಕುಮಾರ್ ಮಾತನಾಡಿ, ‘ಯಗಚಿ ಜಲಾಶಯದಲ್ಲಿ ಈಗಾಗಲೇ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಶೇಕರಿಸಲಾಗಿದ್ದು ಸರ್ಕಾರದ ಆದೇಶದಂತೆ ಮೇಲಾಧಿಕಾರಿಗಳ ಸೂಚನೆಯಂತೆ ಆಲೂರು ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ೦.೦೩೦ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.‌‌ ನಮಗೆ ೨೪ ರಿಂದ ೮ ನೇ ತಾರೀಕಿನವರೆಗೂ ನೀರನ್ನು ಹರಿಸಲು ಆದೇಶ ನೀಡಿದ್ದಾರೆ’ ಎಂದು ಹೇಳಿದರು.

‘ನಮಗೆ ಇಲ್ಲಿ ೧.೦೧ ಟಿಎಂಸಿ ನೀರು ಕುಡಿಯಲು ಯೋಗ್ಯವಾಗಿದ್ದು ಇನ್ನು ಉಳಿದಿರುವ ೧.೦೫ ಟಿಎಂಸಿ ನೀರು ಡಸ್ಟ್ ಸ್ಟೋರೇಜ್‌ನಲ್ಲಿದೆ. ಇದರಿಂದ ನಮ್ಮ ತಾಲೂಕಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀರನ್ನು ಚಾನಲ್ ಮೂಲಕ ಆಲೂರು ಪಟ್ಟಣಕ್ಕೆ ಹರಿಸುತ್ತಿದ್ದೇವೆ. ರೈತರು ತಮ್ಮ ಬೆಳೆಗಳಿಗೆ ಚಾನಲ್ ಹಾಗೂ ನದಿಪಾತ್ರದಿಂದ ತಮ್ಮ ಜಮೀನುಗಳಿಗೆ ಹಾಯಿಸದಂತೆ ಸೂಚನೆ ನೀಡಲಾಗಿದೆ. ಬೇಲೂರು ಹಾಗೂ ಆಲೂರು ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿರುವುದರಿಂದ ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿದ್ದು ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದೇವೆ’ ಎಂದರು.

ಕರವೇ ಮುಖಂಡರಾದ ಮಾಳೆಗೆರೆ ತಾರನಾಥ್, ಅಶೋಕ್, ಮೋಹನ್, ಪ್ರಸನ್ನ, ಹನೀಫ್, ಆಟೋ ಚಾಲಕ ಸಂಘದ ಅಧ್ಯಕ್ಷ ದೀಪು, ಮಂಜು, ಪುಟ್ಟರಾಜು, ಸ್ವಾಮಿ ಹಾಗೂ ಪುರಸಭೆ ಸದಸ್ಯರು ಹಾಜರಿದ್ದರು.

ಪ್ರಗತಿಪರ ಸಂಘಟನೆಗಳ ವತಿಯಿಂದ ಬೇಲೂರಿನ ಯಗಚಿ ಜಲಾಶಯದ ಮುಂಭಾಗದಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.