ಸಾರಾಂಶ
ಳೆದ ಐದು ತಿಂಗಳಿಂದ ಮೆಳೆಕೋಟೆ ಕಾಲೋನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವುಂಟಾಗಿದೆ. ಜೊತೆಗೆ ಕಾಲೋನಿಯ ನಾಲ್ಕು ಬೀದಿಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ ಕತ್ತಲಲ್ಲಿ ವಾಸಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಕನಕಪುರ
ಕಳೆದ ಐದಾರು ತಿಂಗಳಿನಿಂದ ಕುಡಿಯುವ ನೀರಿಲ್ಲದೇ ನಗರದ 31ನೇ ವಾರ್ಡ್ ಮೆಳೇಕೋಟೆ ಕಾಲೋನಿಯ ಜನತೆ ತತ್ತರಿಸಿದ್ದಾರೆ. ಕೂಡಲೇ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮಹಿಳೆಯರು ಖಾಲಿ ಕೊಡ ಹಿಡಿದು ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ನಗರಸಭೆ ಮುಂಭಾಗ ಜಮಾವಣೆಗೊಂಡ ಮಹಿಳೆಯರು ಮತ್ತು ನಿವಾಸಿಗಳು ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ನಿವಾಸಿಗಳಾದ ಶೋಭಾ, ಪವಿತ್ರ ಮತ್ತಿತರರು ಮಾತನಾಡಿ, ಕಳೆದ ಐದು ತಿಂಗಳಿಂದ ಮೆಳೆಕೋಟೆ ಕಾಲೋನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವುಂಟಾಗಿದೆ. ಜೊತೆಗೆ ಕಾಲೋನಿಯ ನಾಲ್ಕು ಬೀದಿಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ ಕತ್ತಲಲ್ಲಿ ವಾಸಿಸುವಂತಾಗಿದೆ. ಸ್ಥಳೀಯ ನಗರ ಸಭಾ ಸದಸ್ಯೆ ಶೋಭಾ ಪ್ರಕಾಶ್ ಹಾಗೂ ನಗರಸಭೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.ನಾಲ್ಕು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ, ಇದು ನಮಗೆ ಸಾಕಾಗುತ್ತಿಲ್ಲ. ನಗರಸಭೆ ಅಧಿಕಾರಿಗಳು ಕೂಡಲೇ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ ಕುಡಿಯುವ ನೀರು ಮತ್ತು ವಿದ್ಯುತ್ ದೀಪ ಗಳನ್ನು ಸಮರ್ಪಕವಾಗಿ ನೀಡದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಶೀಘ್ರವೇ ಪರಿಹಾರಸ್ಥಳಕ್ಕೆ ಆಗಮಿಸಿದ ನಗರಸಭಾ ಎಂಜಿನಿಯರ್ ಗಳಾದ ರಾಘವೇಂದ್ರ ಹಾಗೂ ವಿಜಯಕುಮಾರ್ ಮಹಿಳೆಯರನ್ನು ಸಮಾಧಾನಪಡಿಸಿ ಈಗಾಗಲೇ ನಿಮ್ಮ ಭಾಗದಲ್ಲಿ ಎರಡು ಬೋರ್ವೇಲ್ಗಳು ಸಂಪೂರ್ಣವಾಗಿ ಭತ್ತಿಹೋಗಿವೆ, ಪರ್ಯಾಯವಾಗಿ ಮತ್ತೊಂದು ಬೋರ್ವೆಲ್ ಕೊರಿಸಲಾಗಿದೆ. ಕೂಡಲೇ ಸ್ಥಳ ಪರಿಶೀಲಿಸಿ ನೀರು ಒದಗಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರಾಘವೇಂದ್ರ, ವಿಜಯಕುಮಾರ್, ಶೋಭಾ, ಪವಿತ್ರ, ಲಕ್ಷ್ಮೀದೇವಮ್ಮ, ಮುತ್ತಮ್ಮ, ಆಶಾ, ಪುಟ್ಟಮ್ಮ, ನಿರ್ಮಲ, ವೆಂಕಟ ಲಕ್ಷ್ಮಮ್ಮ ಭಾಗವಹಿಸಿದ್ದರು.