ಗಜೇಂದ್ರಗಡ: ಹಂಡೇವಜೀರ ಸಮಾಜಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ೨ಎ ಜಾತಿ, ಆದಾಯ ಪ್ರಮಾಣಪತ್ರ ಹಾಗೂ ನವೀಕರಿಸಲು ಆಗ್ರಹಿಸಿ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ಪಾಲಕರಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಹೋರಾಟ ನಡೆಯಿತು.
ಈ ವೇಳೆ ಎಸ್ಎಫ್ಐ ಮುಖಂಡ ಗಣೇಶ ರಾಠೋಡ ಮಾತನಾಡಿ, ತಾಲೂಕಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳು ಹಂಡೇವಜೀರ ಎಂಬ ಹಿಂದೂ ಲಿಂಗಾಯತ/ ಲಿಂಗವಂತ ಜಾತಿಯ ಉಪಜಾತಿಗೆ ಸೇರಿದ ಕುಟುಂಬಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿವೆ. ಹೀಗಾಗಿ ರಾಜ್ಯ ಸರ್ಕಾರ ಹಂಡೇವಜೀರ ಉಪಜಾತಿಗೆ ಸೇರಿದ ಸಮುದಾಯದವರಿಗೆ ಪ್ರವರ್ಗ ೨ಎ ಎಂದು ವರ್ಗೀಕರಣ ಮಾಡಿ ಪ್ರಮಾಣಪತ್ರವನ್ನು ಒದಗಿಸುತ್ತಾ ಬಂದಿದ್ದು, ಸಮಾಜದ ವಿದ್ಯಾರ್ಥಿಗಳು ಮೀಸಲಾತಿ ಪಡೆದು ಶಿಕ್ಷಣ ಮತ್ತು ಉದ್ಯೋಗ ಪಡೆದಿದ್ದಾರೆ.ಅದರಂತೆ ಗಜೇಂದ್ರಗಡ ತಹಸೀಲ್ದಾರ್ ಅವರು ಸಹ ಕಳೆದ ೨ ವರ್ಷಗಳ ಹಿಂದೆ ಇದೇ ಪ್ರಮಾಣಪತ್ರ ನೀಡಿದ್ದಾರೆ. ಆದರೆ ಕ್ಷುಲ್ಲಕ ಕಾರಣಕ್ಕಾಗಿ ಇಡೀ ಸಮಾಜವನ್ನು ಗುರಿ ಮಾಡಿ ಜಾತಿ- ಆದಾಯ ಪ್ರಮಾಣ ಪತ್ರ ನೀಡದೆ, ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಆರೋಪಿಸಿದರು. ಎಸ್ಎಫ್ಐ ಮುಖಂಡ ಚಂದ್ರು ರಾಠೋಡ ಮಾತನಾಡಿ, ರಾಜ್ಯದಲ್ಲಿ ಹಿಂದು ಲಿಂಗಾಯತಗೆ ಸೇರಿದ ಕೆಲ ಉಪ ಜಾತಿಗಳಿಗೆ ೨ಎ ಮೀಸಲಾತಿ ಜಾತಿ ಪ್ರಮಾಣಪತ್ರವನ್ನು ಕಲ್ಪಿಸಲಾಗಿದೆ. ಪಕ್ಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಷ್ಟಗಿ ತಾಲೂಕಿನಲ್ಲಿರುವ ನಮ್ಮ ಸಂಬಂಧಿಕರು ಈ ಜಾತಿ- ಆದಾಯ ಪ್ರಮಾಣ ಪತ್ರ ಪಡೆಯುತಿದ್ದು, ಆದರೆ ನಮಗೆ ನಿರಾಕರಣೆ ಮಾಡಲಾಗುತ್ತಿದೆ ಎಂದರು.
೧೯೯೩ರ ನಂತರವೇ ಈ ಹಂಡೇವಜೀರ ಜಾತಿ ಕಾಲಂನಲ್ಲಿ ಹೆಚ್ಚು ಬಳಕೆಗೆ ಬಂದಿದೆ. ಇದಕ್ಕೂ ಮೊದಲು ಇವರು ಹಿಂದೂ ಲಿಂಗಾಯತ ಎಂದೆ ಜಾತಿ ಕಾಲಂನಲ್ಲಿ ಇರುವುದರಿಂದ ಇಂತಹ ಪ್ರಕರಣಗಳಲ್ಲಿ ಸ್ಥಾನಿಕ ಚೌಕಾಸಿ ಮಹಜರ್'''' ಮಾಡಿ ಜಾತಿ- ಆದಾಯ ಪ್ರಮಾಣ ಪತ್ರ ನೀಡಲು ಅವಕಾಶವಿದೆ. ಆದರೆ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿರುವುದು ಉದ್ದೇಶಪೂರ್ವಕವಾಗಿ ಈ ಸಮುದಾಯವನ್ನು ಗುರಿ ಮಾಡಲಾಗಿದೆ ಎಂದು ದೂರಿದರು.ಅಂದಪ್ಪ, ಚಂದ್ರು, ಶರಣಪ್ಪ, ಕಳಕನಗೌಡ ಸಮಾಜದ ಮುಖಂಡರು ಮತ್ತು ವಿದ್ಯಾರ್ಥಿಗಳು ಹೋರಾಟ ಉದ್ದೇಶಿಸಿ ಮಾತನಾಡಿದರು. ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ರೋಣ ತಹಸೀಲ್ದಾರ್ ನಾಗರಾಜ ಕೆ. ಮಾತನಾಡಿ, ಗಜೇಂದ್ರಗಡ ತಹಸೀಲ್ದಾರರು ರಜೆ ಇದ್ದಾರೆ. ಸರ್ಕಾರದ ಸುತ್ತೋಲೆ ಆದೇಶಗಳನ್ನು ಆಧರಿಸಿ ನಾವು ಪ್ರಮಾಣಪತ್ರ ನೀಡುತ್ತೇವೆ. ಸ್ಥಾನಿಕ ಚೌಕಾಸಿ ಮಹಜರ್ ಮಾಡಲು ಕೇಳಿದ್ದಿರಿ. ತಲಾಟಿ ಮತ್ತು ಆರ್ಐ ಅವರಿಗೆ ಸ್ಥಾನಿಕ ಚೌಕಾಸಿ ಮಹಜರ್ ಮಾಡಲು ಆದೇಶ ಮಾಡುತ್ತೇನೆ. ಅಲ್ಲದೆ ಮನವಿಯನ್ನು ಸಂಬಂಧಿಸಿದವರಿಗೆ ರವಾನಿಸುವ ಭರವಸೆ ನೀಡಿದ ಬಳಿಕ ಹೋರಾಟವನ್ನು ಹಿಂಪಡೆಯಲಾಯಿತು.ಈ ವೇಳೆ ಪಿಎಸ್ಐ ಪ್ರಕಾಶ ಡಿ., ಅಂದನಾಗೌಡ ಪಾಟೀಲ, ವೀರಭದ್ರಗೌಡರ ಪಾಟೀಲ, ನಿಂಗನಗೌಡರ ಪಾಟೀಲ, ಅನಿಲ್ ಆರ್., ಶರಣು ಮಾಟರಂಗಿ, ಗುರು ಕಿರಣ, ರಾಜು ಪಾಟೀಲ, ರೂಪಲೇಶ, ಚನ್ನಪ್ಪ, ಮೈಬು ಹವಾಲ್ದಾರ ಇದ್ದರು.