ಸಾರಾಂಶ
ಕೆಸಿಎಸ್ಆರ್ ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಚೆನ್ನಪ್ಪಗೌಡರು ಎಚ್ಆರ್ಎ ಆಕರಣೆ ಮಾಡಿ ಸರ್ಕಾರಕ್ಕೆ ₹6 ರಿಂದ 7ಲಕ್ಷ ವಂಚಿಸಿದ್ದಾರೆ. ಸಿಸಿ ಟಿವಿ ಹಾಗೂ ಶಿಕ್ಷಕರ ಹೇಳಿಕೆಯಿಂದ ಇದು ದೃಢಪಟ್ಟಿದೆ. ಈ ಕುರಿತಾಗಿ ಶಿಕ್ಷಣ ಇಲಾಖೆಯಿಂದ ಅವರಿಗೆ ನೋಟಿಸ್ ನೀಡಿ ಎರಡು ತಿಂಗಳಾದರೂ ಅವರ ಮೇಲೆ ಕ್ರಮವಾಗುತ್ತಿಲ್ಲ ಎಂದು ಬೇಸರ.
ಧಾರವಾಡ: ಅಕ್ರಮವಾಗಿ ಎಚ್ಆರ್ಎ ಪಡೆದು ಸರ್ಕಾರಕ್ಕೆ ವಂಚಿಸಿದ ಹುಬ್ಬಳ್ಳಿಯ ಶಿಕ್ಷಣಾಧಿಕಾರಿ ಚನ್ನಪ್ಪಗೌಡರ ಮೇಲೆ ಕ್ರಮಕ್ಕೆ ಆಗ್ರಹಿಸಿ ಶನಿವಾರ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದರು.
ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಗ್ಗೆಯಿಂದ ಸಂಜೆ ವರೆಗೆ ಧರಣಿ ನಡೆಸಿದ ಸಂಘದ ಪದಾಧಿಕಾರಿಗಳು, ಆರೋಪ ಹೊತ್ತಿರುವ ಚನ್ನಪ್ಪಗೌಡರ ಹಾಗೂ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ್ ಗಡದಿನ್ನಿ, ಕೆಸಿಎಸ್ಆರ್ ನಿಯಮ ಉಲ್ಲಂಘಿಸಿ ಕಾನೂನು ಬಾಹಿರವಾಗಿ ಚೆನ್ನಪ್ಪಗೌಡರು ಎಚ್ಆರ್ಎ ಆಕರಣೆ ಮಾಡಿ ಸರ್ಕಾರಕ್ಕೆ ₹6 ರಿಂದ 7ಲಕ್ಷ ವಂಚಿಸಿದ್ದಾರೆ. ಸಿಸಿ ಟಿವಿ ಹಾಗೂ ಶಿಕ್ಷಕರ ಹೇಳಿಕೆಯಿಂದ ಇದು ದೃಢಪಟ್ಟಿದೆ. ಈ ಕುರಿತಾಗಿ ಶಿಕ್ಷಣ ಇಲಾಖೆಯಿಂದ ಅವರಿಗೆ ನೋಟಿಸ್ ನೀಡಿ ಎರಡು ತಿಂಗಳಾದರೂ ಅವರ ಮೇಲೆ ಕ್ರಮವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಆರ್. ರಂಜನ ಮಾತನಾಡಿ, ಚನ್ನಪ್ಪಗೌಡ ಶಿಕ್ಷಕ ವಿರೋಧಿ ಅಧಿಕಾರಿ. ಇದೀಗ ಜೂನ್ 30ರಂದು ನಿವೃತ್ತಿಯಾಗಲಿದ್ದು ಅಷ್ಟರೊಳಗೆ ಅವರ ಮೇಲೆ ಕ್ರಮವಾಗಬೇಕೆಂದು ಆಗ್ರಹಿಸಿದರು. ಸಂಘದ ಕಾರ್ಯಾಧ್ಯಕ್ಷ ಟಿ.ಎಚ್. ತಳವಾರ ಹಾಗೂ ಸದಸ್ಯರು ಇದ್ದರು.