ಉಪ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಹಾಗೂ ತಾಲೂಕಿನ ಎಲ್ಲಾ ಕೇಂದ್ರಗಳಲ್ಲಿ ಆರೋಗ್ಯ ಸುರಕ್ಷಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣದ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ಮಾಡಿ ನಂತರ ತಾಲೂಕು ಆರೋಗ್ಯ ಅಧಿಕಾರಿ ಡಾ. ಸತೀಶಗೆ ಮನವಿ ಸಲ್ಲಿಸಿದರು.

ಶಿಗ್ಗಾಂವಿ: ಗ್ರಾಮೀಣ ಪ್ರದೇಶದಲ್ಲಿರುವ ಉಪ ಆರೋಗ್ಯ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಹಾಗೂ ತಾಲೂಕಿನ ಎಲ್ಲಾ ಕೇಂದ್ರಗಳಲ್ಲಿ ಆರೋಗ್ಯ ಸುರಕ್ಷಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣದ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ಮಾಡಿ ನಂತರ ತಾಲೂಕು ಆರೋಗ್ಯ ಅಧಿಕಾರಿ ಡಾ. ಸತೀಶಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ ಕೇಂದ್ರ ಮತ್ತು ರಾಜ್ಯ ಸರಕಾರವು ಗ್ರಾಮೀಣ ಭಾಗದ ಜನರ ಪರಿಸ್ಥಿತಿಯನ್ನು ಅರಿತು ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಉಪ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿ ಆ ಕಟ್ಟಡಗಳಿಗೆ ಆರೋಗ್ಯ ಸುರಕ್ಷಾ ಅಧಿಕಾರಿಗಳನ್ನು ನೇಮಿಸಿ ಸದರಿ ಅಧಿಕಾರಿ ಆಯಾ ಕೇಂದ್ರಗಳಲ್ಲಿ ವಾಸ್ತವ್ಯವಿದ್ದು, ಗ್ರಾಮೀಣ ಪ್ರದೇಶ ಜನರ ಆರೋಗ್ಯ ಸುಧಾರಿಸಲು ಪ್ರಥಮ ಚಿಕಿತ್ಸೆ ನೀಡುವುದರ ಜೊತೆಗೆ ಗರ್ಭಿಣಿ ಬಾಣಂತಿಯರ ಆರೋಗ್ಯವನ್ನು ಕ್ಷಣ ಕ್ಷಣ ವಿಚಾರಿಸಲು ಸರ್ವ ರೀತಿಯ ವ್ಯವಸ್ಥೆ ಮಾಡಿರುವುದನ್ನು ತಮ್ಮ ಇಲಾಖೆಯ ಬಹಳಷ್ಟು ಜನ ಆರೋಗ್ಯ ಸುರಕ್ಷಾ ಅಧಿಕಾರಿಗಳು ಸರಿಯಾಗಿ ನಿರ್ವಹಿಸದೇ ಇರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕರವೇ ತಾಲೂಕು ಅಧ್ಯಕ್ಷ ಮಾಂತೇಶ ಶಿಗ್ಗಟ್ಟಿ ತಾಲೂಕಿನಲ್ಲಿ ೩೮ ಉಪ ಆರೋಗ್ಯ ಕೇಂದ್ರಗಳಿದ್ದು, ಅದರಲ್ಲಿ ಬೆರಳಣಿಕೆಯಷ್ಟು ಜನರನ್ನು ಹೊರತು ಪಡಿಸಿದರೆ ೯೦% ರಷ್ಟು ಜನ ಕೇಂದ್ರಗಳಲ್ಲಿ ವಾಸ್ತವ್ಯ ಇರದೇ ದೂರ ಊರುಗಳಿಂದ ಪ್ರತಿನಿತ್ಯ ಸಂಚರಿಸುತ್ತಾರೆ. ಸರಕಾರ ವಾಸ್ಥವ್ಯಕ್ಕೆ ಯೋಗ್ಯ ಇರದೇ ಇರುವ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವ ಆರೋಗ್ಯ ಸುರಕ್ಷಾ ಅಧಿಕಾರಿಗಳು ಖಾಸಗಿ ಕಟ್ಟಡಗಳಲ್ಲಿ ವಾಸ್ತವ್ಯವಿದ್ದು ಕಾರ್ಯ ನಿರ್ವಹಿಸುವಂತೆ ಪ್ರತಿ ತಿಂಗಳು ಬಾಡಿಗೆ ಹಣವನ್ನು ತಮ್ಮ ತಮ್ಮ ಖಾತೆಗೆ ಜಮಾ ಮಾಡುತ್ತದೆ. ಹೀಗಿದ್ದರೂ ಆರೋಗ್ಯ ಸುರಕ್ಷಾ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ವಾಸ್ತವ್ಯ ಇರದೇ ಇರುವುದನ್ನು ಹಿರಿಯ ಅಧಿಕಾರಿಗಳಾದ ತಾವು ಗಮನಿಸಿದ್ದರೂ ಮೌನವಹಿಸಿರುವುದು ಏಕೇ? ಕೂಡಲೇ ಸದರಿ ಆರೋಗ್ಯ ಸುರಕ್ಷಾ ಅಧಿಕಾರಿಗಳಿಂದ ಈ ಹಿಂದಿನ ಬಾಡಿಗೆ ಹಣವನ್ನು ಬಡ್ಡಿ ಸಮೇತ ಸರಕಾರಕ್ಕೆ ಹಿಂದುರುಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಇನ್ನುಮುಂದೆ ಆರೋಗ್ಯ ಸುರಕ್ಷಾ ಅಧಿಕಾರಿಗಳು ತಮ್ಮ ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ವಾಸ್ತವ್ಯವಿದ್ದು ಸಾರ್ವಜನಿಕರ ಸೇವೆಗೆ ಮುಂದಾಗಬೇಕು ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ತಮ್ಮ ಕಚೇರಿ ಮುಂದೆ ನಿರಂತರ ಧರಣಿ ಮಾಡುವದರ ಮೂಲಕ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪುಟ್ಟಪ್ಪ ಹಿತ್ತಲಮನಿ, ನೂರಅಹ್ಮದ ಲಕ್ಷ್ಮೇಶ್ವರ, ಮಾರುತಿ ಹಾಲಗಿ, ಮಾದೇವಪ್ಪ ಹೇಡಿಗೊಂಡ, ಅನಸೂಯಾ ಶಿದ್ದಪ್ಪಳವರ, ಖಲಂದರ ಎಲೆಹಳ್ಳಿ, ಧರ್ಮಣ್ಣ ಡಮ್ಮಳ್ಳಿ, ರಮೇಶ ದಾಸಪ್ಪನವರ, ಪವನ ವಡ್ಡರ, ಮೌಲಾಸಾಬ ನದಾಫ, ಶೇಖಪ್ಪ ದೀಪಾವಳಿ, ರಾಜಕುಮಾರ ದೊಡ್ಡಮನಿ, ಶಾರದಾ ಅರಬಗೊಂಡ, ರಾಜಣ್ಣ ಗೌಡರ, ಕೃಷ್ಣಪ್ಪ ನಾಗಜ್ಜಿ, ಅಶೋಕ ಸವಣೂರ, ಸುರೇಶ ಲಚಮಣ್ಣವರ, ಬಸವರಾಜ ಹರಿಜನ, ಅಣ್ಣಪ್ಪ ಸವಣೂರ, ಅಣ್ಣಪ್ಪ ಬಾಳಂಬೀಡ, ರಮೇಶ ಹೋಬಳೇರ, ಮಾಬುಬಲಿ ದುಂಡಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.