ಸವಣೂರು: ತಾಲೂಕಿನ ಗುಂಡೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶೌಚಗೃಹ ಶಿಥಿಲಗೊಂಡು ಸಂಪೂರ್ಣ ಅನುಪಯುಕ್ತವಾದ ಕಾರಣದಿಂದಾಗಿ ಆಕ್ರೋಶಗೊಂಡ ಪಾಲಕರು ಗ್ರಾಮಸ್ಥರು ಶೌಚಗೃಹ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿ ಬುಧವಾರ ಶಾಲೆಯ ಎದುರಲ್ಲಿಯೇ ಕೆಲಕಾಲ ಪ್ರತಿಭಟನೆ ಕೈಗೊಂಡರು.ಈ ಕುರಿತಂತೆ ತಾಪಂ ಹಾಗೂ ಬಿಇಒ ಕೂಡಲೇ ಸ್ಥಳಕ್ಕೆ ಆಗಮಿಸಿ ಶೌಚಾಲಯ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ತಾಪಂ ಇಒ ಬಿ. ಎಸ್. ಸಿಡೇನೂರ, ಬಿಇಒ ಎಂ.ಎಫ್. ಬರ್ಕಿ, ಸದ್ಯ ಶೌಚಗೃಹ ನಿರ್ಮಿಸಲು ಯಾವುದೇ ಅನುದಾನ ಇಲ್ಲದ ಕಾರಣದಿಂದಾಗಿ ರೆಡಿಮೇಡ್ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಅದಕ್ಕೆ, ಗ್ರಾಮಸ್ಥರು ಸಹಕರಿಸಬೇಕು. ಮುಂದಿನ ಎರಡು ತಿಂಗಳಲ್ಲಿ ಶೌಚಗೃಹ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು ಹಾಗೂ ಪಾಲಕರು ಶೀಘ್ರದಲ್ಲಿಯೇ ಶೌಚಾಲಯ ನಿರ್ಮಿಸಿ ಕೊಡಬೇಕು, ಇಲ್ಲವಾದಲ್ಲಿ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದಾದರೂ ಹೇಗೆ? ಶಿಕ್ಷಕ ಶಿಕ್ಷಕಿಯರು ಎಲ್ಲಿಗೆ ಹೋಗಬೇಕು ಎಂದು ಪಟ್ಟು ಹಿಡಿದರು. ಪುನರುಚ್ಚರಿಸಿದ ತಾಪಂ ಇಒ ಸಿಡೆನೂರು ಒಂದು ತಿಂಗಳಾದರೂ ಅವಕಾಶ ನೀಡಿದಲ್ಲಿ ನಿಮ್ಮ ಶಾಲೆಗೆ ಅಗತ್ಯ ಶೌಚಗೃಹ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ನಂತರ, ಗ್ರಾಮಸ್ಥರು ಹಾಗೂ ಪಾಲಕರು ದಯವಿಟ್ಟು ಒಂದು ತಿಂಗಳ ಅವಧಿಯಲ್ಲಿ ಶೌಚಗೃಹ ನಿರ್ಮಿಸಿ ಕೊಟ್ಟು ಶಾಲೆಯ ಮರ‍್ಯಾದೆಯನ್ನು ಕಾಪಾಡಿ ಎಂದು ಮನವಿ ಮಾಡಿದರು. ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಫಕ್ಕಿರೇಶ ಕಮಡೊಳ್ಳಿ, ಸಹಕಾರಿ ಸಂಘದ ಅಧ್ಯಕ್ಷ ಗದಗೆಪ್ಪಗೌಡ ಪಾಟೀಲ, ಮಾಜಿ ತಾಪಂ ಸದಸ್ಯ ಚಿದಾನಂದ ಬಡಿಗೇರ, ಭಾಷಾಸಾಬ್ ಮುರಡಿ, ಬಸವರಾಜ ಶೆಟ್ಟರ, ಮಾಜಿ ಗ್ರಾಪಂ ಅಧ್ಯಕ್ಷ ಗಿರೀಶಗೌಡ ಪಾಟೀಲ, ಪ್ರಮುಖರಾದ ಕುಮಾರ ಹರಿಜನ, ಕುಬೇರಪ್ಪ ಗಾಣಿಗೇರ, ಮಹದೇವಪ್ಪ ಲಮಾಣಿ, ನಾಗಪ್ಪ ಹರಿಜನ, ಬಸವರಾಜ ನೇಗುಣಿ ಹಾಗೂ ಇತರರು ಇದ್ದರು.