ಸಾರಾಂಶ
ಹಾವೇರಿ: ವಕೀಲರ ಹಾಗೂ ಕಾನೂನು ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ವಕೀಲರ ಒಕ್ಕೂಟ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾ ನ್ಯಾಯಾಲಯದ ಬಳಿ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ರಾಜ್ಯ ಸರ್ಕಾರವು ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವವಿಮಾ ಸೌಲಭ್ಯ ಒದಗಿಸಬೇಕು. ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು ಮತ್ತು ವಕೀಲರ ಸಂರಕ್ಷಣೆ ಕಾಯಿದೆ- 2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ ರದ್ದು ಪಡಿಸಬೇಕು. ಕಿರಿಯ ವಕೀಲರಿಗೆ 2 ವರ್ಷಗಳ ಕಾಲ ಮಾಸಿಕ ₹10 ಸಾವಿರ ಸಹಾಯಧನ ನೀಡಬೇಕು. ರಾಜ್ಯದ ಎಲ್ಲ ತಾಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ₹5 ಲಕ್ಷ ಹಾಗೂ ಜಿಲ್ಲಾ ವಕೀಲರ ಸಂಘಗಳಿಗೆ ₹10 ಲಕ್ಷ ಅನುದಾನ ಮಂಜೂರು ಮಾಡಬೇಕು. ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದರು.ಕರ್ನಾಟಕ ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಬೇಕು. ಹಾಗೆಯೇ ಈಗಿರುವ ನ್ಯಾಯಾಲಯಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ವಕೀಲರಿಗೆ ಟೋಲ್ ಶುಲ್ಕರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಸ್ಥಾಪಿಸಬೇಕು ಹಾಗೂ ಈಗಿರುವ ಅನುದಾನಿತ ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರ್ಕಾರ ನಿಯಂತ್ರಿಸಬೇಕು. ಹಾಲಿ ಇರುವ ಸರ್ಕಾರಿ ಕಾಲೇಜುಗಳಲ್ಲಿ ಮೂಲ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘಟನೆಯ ಅಧ್ಯಕ್ಷ ಎಸ್.ಎಚ್. ಜತ್ತಿ, ಜಿಲ್ಲಾ ಕಾರ್ಯದರ್ಶಿ ಪಿ.ಎಸ್. ಹೆಬ್ಬಾಳ, ಉಪಾಧ್ಯಕ್ಷ ಸಿ.ಪಿ. ಜಾವಗಲ್, ಎಐಎಲ್ಯು ಜಿಲ್ಲಾ ಸಂಚಾಲಕ ನಾರಾಯಣ ಕಾಳೆ, ರಾಜ್ಯ ಸಮಿತಿ ಸದಸ್ಯೆ ರೆಹಾನಾ ಚೆನ್ನಪಟ್ಟಣ, ಸಂಘಟನೆಯ ಮುಖಂಡರಾದ ಕವಿತಾ ಕಿತ್ತೂರು, ಶಶಿಕಲಾ ದೊಡ್ಮನಿ, ಬಿ.ಡಿ. ನಾಯಕ್, ಎನ್.ಎಸ್. ಪ್ರಕಾಶ್, ಶ್ರೀನಿವಾಸ ಬಂಡಿವಡ್ಡರ, ಆರ್.ಎಚ್. ತಂಗೊಂಡರ, ಎಂ.ಎಂ. ರಜಾಕನವರ, ಸತೀಶ ಕಾಟೇನಹಳ್ಳಿ, ಎಸ್.ಸಿ. ಕುನ್ನೂರು, ವಿ.ಬಿ. ಕುಲಕರ್ಣಿ, ಎ.ಎಂ. ಹಾವೇರಣ್ಣನವರ, ಐ.ಎಸ್. ಗುಡಿಗೇರಿ, ಪಿ.ಆರ್. ಗಂಜೀಗಟ್ಟಿ, ರಮೇಶ ಗೋಟನವರ, ಬಸವರಾಜ ಪೂಜಾರ, ಬಸವರಾಜ ಎಸ್., ಸುನಿಲಕುಮಾರ್ ಸೇರಿದಂತೆ ಇತರರು ಇದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿಹಾನಗಲ್ಲ: ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು. ವಕೀಲರ ಸಂರಕ್ಷಣೆ ಕಾಯ್ದೆ ತಿದ್ದುಪಡಿಯಾಗಬೇಕು. ಈ ವಿಷಯದಲ್ಲಿ ಸರ್ವೋಚ್ಛ ಹಾಗೂ ಉಚ್ಚ ನ್ಯಾಯಾಲಯದ ಮಾರ್ಗಸೂಚಿ ಪಾಲಿಸಬೇಕು ಎಂಬ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳಿಗೆ ಅಖಿಲ ಭಾರತ ವಕೀಲರ ಒಕ್ಕೂಟ ಮನವಿ ಸಲ್ಲಿಸಿತು.ಶುಕ್ರವಾರ ಇಲ್ಲಿನ ತಾಲೂಕು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸದಸ್ಯ ಅಣ್ಣಪ್ಪ ಚಿಕ್ಕಣ್ಣನವರ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಪಿ. ಭೋಸ್ಲೆ, ಕಾರ್ಯದರ್ಶಿ ಎಂ.ಎಸ್. ಕಾಳಂಗಿ, ವಕೀಲರಾದ ರವಿಬಾಬ ಪೂಜಾರ, ಎಸ್.ಎಂ. ಕೋತಂಬರಿ, ಎಂ.ಎಸ್.ಹುಲ್ಲೂರ, ಎಂ.ಜಿ. ಪಾನವಲೆ, ಪಿ.ಎಂ. ಬ್ಯಾತನಾಳ, ಎಸ್.ಎಂ. ಹಾದಿಮನಿ, ಎಸ್.ಜಿ. ವಿಶ್ವನಾಥ, ಎ.ಎಚ್. ಹಂಗರಗಿ, ವಿ.ಎಸ್. ಪಾಟೀಲ, ವಿನಾಯಕ ಕುರುಬರ, ಸಿ.ಪಿ. ಜಾಧವ, ಸತೀಶ ತಿಳವಳ್ಳಿ, ಮಧು ಪಾಣಿಗಟ್ಟಿ, ರಮೇಶ ತಳವಾರ, ಎಂ.ಎಂ. ಮುಲ್ಲಾ, ಪಿ.ಪಿ. ಜಾಡರ, ವೀಣಾ ಬ್ಯಾತನಾಳ, ಶಿವಬಸವ ಹರವಿ, ಮಧು ಕರೆಣ್ಣನವರ, ಸಂತನು ದೊಡ್ಡಮನಿ, ರೂಪಾ ಗಾಳೆಮ್ಮನವರ, ವೀರನಗೌಡ ಪಾಟೀಲ, ಕೊಂಡೋಜಿ, ಬಿ.ಎಂ. ಮಾಳಗಿ, ಗಿರೀಶ ವಾಸನದ ಮೊದಲಾದವರಿದ್ದರು.