ಸಾರಾಂಶ
ಮೈಸೂರು ವಿವಿಯಲ್ಲೇ ಸ್ನಾತಕೋತ್ತರ ಪದವಿ ಪಡೆದಿರಬೇಕು. 3 ವರ್ಷ ಶಿಷ್ಯವೇತನ ನೀಡಲಾಗುವುದು. ಪಿಎಚ್.ಡಿ ತಾತ್ಕಾಲಿಕ ನೋಂದಣಿ ಪತ್ರ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಹಿಂದಿನ 3 ವರ್ಷದ ಒಳಗಿರಬೇಕು. 35 ವರ್ಷ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು ಎಂಬ ಅನಗತ್ಯ ಷರತ್ತುಗಳಿಂದ ರಾಜ್ಯದ ಇತರೆ ವಿವಿಗಳಿಂದ ಪದವಿ ಪಡೆದವರಿಗೆ ವಂಚನೆಯಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಹಿಂದುಳಿದ ವರ್ಗಗಳ (ಒಬಿಸಿ) ಸಂಶೋಧನಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವಂತೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದವರು ಕ್ರಾಫರ್ಡ್ ಭವನ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟಿಸಿದರು.2024- 25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ 21 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿ, ಅನಗತ್ಯ ಷರತ್ತು ವಿಧಿಸಿ 9 ವಿದ್ಯಾರ್ಥಿಗಳ ಅರ್ಜಿ ತಿರಸ್ಕರಿಸಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಮೈಸೂರು ವಿವಿಯಲ್ಲೇ ಸ್ನಾತಕೋತ್ತರ ಪದವಿ ಪಡೆದಿರಬೇಕು. 3 ವರ್ಷ ಶಿಷ್ಯವೇತನ ನೀಡಲಾಗುವುದು. ಪಿಎಚ್.ಡಿ ತಾತ್ಕಾಲಿಕ ನೋಂದಣಿ ಪತ್ರ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ ಹಿಂದಿನ 3 ವರ್ಷದ ಒಳಗಿರಬೇಕು. 35 ವರ್ಷ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು ಎಂಬ ಅನಗತ್ಯ ಷರತ್ತುಗಳಿಂದ ರಾಜ್ಯದ ಇತರೆ ವಿವಿಗಳಿಂದ ಪದವಿ ಪಡೆದವರಿಗೆ ವಂಚನೆಯಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಶಿಷ್ಯವೇತನವನ್ನು 3 ವರ್ಷ ನೀಡುವುದರಿಂದ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳು ಸಂಶೋಧನೆ ನಡೆಸಲು ತೊಂದರೆಯಾಗುತ್ತದೆ. ಹೀಗಾಗಿ, ಮೈಸೂರು ವಿವಿಯಲ್ಲೇ ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂಬ ಷರತ್ತನ್ನು ಕೈ ಬಿಡಬೇಕು. ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಯುಜಿಸಿ ನಿಯಮದಂತೆ 5 ವರ್ಷಗಳ ಕಾಲ ಶಿಷ್ಯವೇತನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಲ್ಲದೇ, 35 ವರ್ಷ ಗರಿಷ್ಠ ವಯೋಮಿತಿಯನ್ನು ಸಡಿಲಗೊಳಿಸಬೇಕು. ಪಿಎಚ್.ಡಿ ತಾತ್ಕಾಲಿಕ ನೋಂದಣಿ ಪತ್ರ ಅಧಿಸೂಚನೆ ಹೊರಡಿಸಿದ ಹಿಂದಿನ 3 ವರ್ಷ ಒಳಗಿರಬೇಕು ಎಂಬ ಷರತ್ತನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.ಮೈಸೂರು ವಿವಿ ಸಂಶೋಧಕರ ಸಂಘದ ಗೌರವ ಅಧ್ಯಕ್ಷ ಸಿ. ಮಹೇಶ್, ಉಪಾಧ್ಯಕ್ಷ ಲಿಂಗರಾಜು, ಪ್ರಧಾನ ಕಾರ್ಯದರ್ಶಿ ಕುಶಾಲ್, ಖಜಾಂಚಿ ನಂಜುಂಡಸ್ವಾಮಿ, ಸಂಜಯ್ ಕುಮಾರ್, ಸುಭಾಷ್ ಮೊದಲಾದವರು ಇದ್ದರು.