ಬಳ್ಳಾರಿ: ಕೂಲಿ ಕಾರ್ಮಿಕರಿಗೆ 125 ದಿನಗಳ ಉದ್ಯೋಗ ಖಾತ್ರಿ ಪಡಿಸುವ ವಿಬಿ ಜಿ ರಾಮ್‌ಜಿ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್‌) ನೇತೃತ್ವದಲ್ಲಿ ಇಲ್ಲಿನ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ನರೇಗಾ ಬದಲಿಗೆ ಬಂದಿರುವ ಹೊಸ ವಿಬಿ-ಜಿ ರಾಮ್‌ಜಿ ಕಾಯ್ದೆ ಕೃಷಿಕರ ಉದ್ಯೋಗ ಕಸಿದುಕೊಂಡಿದೆ. ಈ ಕಾಯ್ದೆ ಜಾರಿಯಿಂದ ಗ್ರಾಪಂಗಿದ್ದ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಶೇ.60ರಷ್ಟು ಹಣ ಕೇಂದ್ರ ಸರ್ಕಾರ, ಶೇ.40ರಷ್ಟು ರಾಜ್ಯ ಸರ್ಕಾರ ಕೊಡಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಆದರೆ, ಕಾಯ್ದೆ ತಿದ್ದುಪಡಿ ಮಾಡುವಾಗ ಯಾವುದೇ ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ತೆಗೆದುಕೊಳ್ಳದೇ ಸರ್ವಾಧಿಕಾರಿ ಧೋರಣೆಯಿಂದ ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ಕೇಂದ್ರ ಸರ್ಕಾರ ದುಡಿವ ಜನರ ಹಿತ ಕಾಯುವ ಬದಲು ಅವರಿಗೆ ಕೆಲಸಕ್ಕೆ ಕುತ್ತು ತರುವ ಕೆಲಸ ಮಾಡುತ್ತಿದೆ. ಹೊಸದಾಗಿ ಜಾರಿಗೊಳಿಸಿರುವ ಕಾಯ್ದೆಯನ್ನು ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ. ಕಾಯ್ದೆಯ ಪರಿಣಾಮಕಾರಿ ಜಾರಿಗೆ ಯಾವುದೇ ಪೂರಕ ಕ್ರಮಗಳನ್ನು ಕೈಗೊಂಡಿಲ್ಲ. ಕೇಂದ್ರದಿಂದ ಹಣಕಾಸು ನೆರವು ಸಹ ದೊರೆತಿಲ್ಲ ಎಂದು ದೂರಿದರು.

ಪ್ರತಿಭಟನೆ ಬೆಂಬಲಿಸಿ ಭಾಗವಹಿಸಿದ್ದ ರೈತ ಮುಖಂಡ ಕಲ್ಲುಕಂಬ ಪಂಪಾಪತಿ ಮಾತನಾಡಿ, ರಾಜ್ಯ ಸರ್ಕಾರ ಕೂಡಲೇ ಕೂಲಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ಸೃಷ್ಟಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಹಂತ ಹಂತವಾಗಿ ಅಧಿಕಾರದ ಕೇಂದ್ರೀಕರಣದ ಹುನ್ನಾರ ನಡೆಸಿದೆ. ಅದರ ಭಾಗವಾಗಿಯೇ


ವಿಬಿ ಜಿರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರ ವಿರುದ್ಧ ಈ ದೇಶದ ದುಡಿಯುವ ವರ್ಗ ಬಲಿಷ್ಠ ಹೋರಾಟ ಕಟ್ಟುವುದರ ಮೂಲಕ ಆಳ್ವಿಕರ ಇಂತ ಕುತಂತ್ರಗಳನ್ನು ಸೋಲಿಸಿ, ದುಡಿಯುವವರ ಸಮಾಜ ಕಟ್ಟಲು ಮುಂದಾಗಬೇಕು ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ತಿಳಿಸಿದರು.

ಸಂಘದ ಜಿಲ್ಲಾ ಪ್ರಮುಖರಾದ ಈ.ಹನುಮಂತಪ್ಪ, ಬಸಣ್ಣ ಮಾತನಾಡಿದರು. ಸಂಘದ ಜಿಲ್ಲಾ ಸಮಿತಿ ಸದಸ್ಯರಾದ ಮಾರೆಪ್ಪ, ಹೊನ್ನೂರಪ್ಪ, ಸದಸ್ಯರಾದ ವೆಂಕಟೇಶ್, ಬಂಡೆ ವೀರಭದ್ರಪ್ಪ, ಪಂಪಾಪತಿ, ಈರಣ್ಣ, ಹೊನ್ನೂರಪ್ಪ, ಹನುಮಂತಮ್ಮ, ಜಿ.ರಾಧಮ್ಮ, ಕುರೇಕುಪ್ಪ ಲಕ್ಷ್ಮಮ್ಮ, ವಡ್ಡರ ಲಕ್ಷ್ಮಮ್ಮ, ಹಳೇಕೊಟೆ ಬಸಮ್ಮ, ಬಡಿಗೇರ್ ರೇವತಿ , ಕೋಳೂರು ಹಂಪಮ್ಮ, ಕರಿಬಸಪ್ಪ, ಹನುಮಂತಪ್ಪ, ಗಿರೀಶ್, ದೊಡ್ಡಬಸಪ್ಪಗೌಡ, ಎನ್.ಬಸವರಾಜ, ಕೆ.ಪಾಂಡವಪ್ಪ, ಎನ್ .ಈರಣ್ಣ, ಶಂಕ್ರಮ್ಮ. ಕೆ. ಹುಲಿಗೆಮ್ಮ, ಎನ್.ನೀಲಮ್ಮ, ಪಲ್ಲವಿ, ಬೀರಲಿಂಗಮ್ಮ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಜಿಪಂ ಸಿಇಒ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಕಳಿಸಿಕೊಡಲಾಯಿತು.