ಕನ್ನಡಪ್ರಭ ವಾರ್ತೆ ಸಾವಳಗಿ

ಆಶ್ರಯ ಮತ್ತು ವಸತಿ ಯೋಜನೆಗಳ ಅಡಿಯಲ್ಲಿ 2015-16ನೇ ಸಾಲಿನಲ್ಲಿ ನೀಡಿರುವ ತಾತ್ಕಾಲಿಕ ಹಕ್ಕುಪತ್ರದ ಪ್ರಕಾರ ಗ್ರಾಮದ ಸರ್ವೆ ನಂ.1 ಮತ್ತು ನಂ.2 ರಲ್ಲಿ ಬರುವ 250ಕ್ಕೂ ಅಧಿಕ ನಿವೇಶನಗಳ ತಾತ್ಕಾಲಿಕ ಹಕ್ಕುಪತ್ರ ನೀಡಿದ್ದು. ಸಾರ್ವಜನಿಕರಿಗೆ ಈವರೆಗೆ ಕಂಪ್ಯೂಟರ್‌ ಉತಾರ ಪೂರೈಸಿಲ್ಲ ಎಂದು ಆರೋಪಿಸಿ ಸಾವಳಗಿ ಗ್ರಾಮದ ನಾಡ ಕಾರ್ಯಾಲಯದ ಮುಂಭಾಗ ಮಂಗಳವಾರ ಇಂದಿರಾ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದರು.

2015-16ನೇ ಸಾಲಿನಲ್ಲಿ ಅಕ್ರಮವಾಗಿ ಕಟ್ಟಿದ ಮನೆಗಳನ್ನು ಸಕ್ರಮಗೋಳಿಸಲು ಆಗಿನ ಸರ್ಕಾರ ಆದೇಶ ಹೊರಡಿಸಿದ್ದು, ಕಂದಾಯ ಇಲಾಖೆ ಮತ್ತು ಸರ್ವೆ ಅಧಿಕಾರಿಗಳು ಸೇರಿ ಸರ್ವೇ ಮಾಡಿದ್ದಾರೆ. ಅಂದಿನಿಂದ ಈವರೆಗೆ ಮೂವರು ತಹಸೀಲ್ದಾರ ಬದಲಾವಣೆಯಾದರೂ ಮೂವರಿಗೂ ಮನವಿ ಸಲ್ಲಿಸಿದ್ದೇವೆ. ಆದರೂ ಕಂಪ್ಯೂಟರ್‌ ಉತಾರ ಸಿಗುತ್ತಿಲ್ಲ. ಖುದ್ದಾಗಿ ಜಮಖಂಡಿ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಕಾನೂನು ತೊಡುಕು ಇದೆ. ಹಾಗೆ ಉತಾರ ನೀಡಲು ಬರುವುದಿಲ್ಲ ಎಂದು ತಿಳಿಸಿದ್ದರು. ಕಾನೂನು ತೊಡಕನ್ನು ನೀವು, ಮೇಲಧಿಕಾರಿಗಳು ಮಾತಾಡಿಕೊಂಡು ಬಗೆಹರಿಸಿಕೊಳ್ಳಿ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಂಡು ಎಲ್ಲರಿಗೂ ಕಂಪ್ಯೂಟರ್‌ ಉತಾರ ಸಿಗುವಂತೆ ಮಾಡಿ. ಅಕ್ರಮ-ಸಕ್ರಮ ಯೋಜನೆಯಡಿ ಸರ್ಕಾರ ನಿಗದಿ ಮಾಡಿರುವ ಹಣವನ್ನು ಬ್ಯಾಂಕಿಗೆ ಕಟ್ಟಿದ್ದು ರಸೀದಿ, ಹಂಗಾಮ ಆದೇಶ ಪ್ರತಿ ಇವೆ. ಸರ್ವೇದವರನ್ನು ನೇಮಕ ಮಾಡಿ. ನಮಗೆ ಯಾವಾಗ ಕಂಪ್ಯೂಟರ್‌ ಉತಾರ ಸಿಗುತ್ತದೆ ಹೇಳಿ. ಮಾತು ತಪ್ಪಿದರೆ ಜಮಖಂಡಿ ತಹಸೀಲ್ದಾರ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಪ್ರಾರಂಭಿಸುತ್ತೇವೆ. ನಿಗದಿತ ಸಮಯ ತಿಳಿಸಿ ಎಂದು ಆಗ್ರಹಿಸಿದರು.

ಅಕ್ರಮ-ಸಕ್ರಮ ಮಾಡಲು ನಿಮ್ಮ ಕಡೆ ಇರುವ ದಾಖಲಾತಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳ ಹತ್ತಿರ ಕೊಡಿ. ಅವುಗಳನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ಕಳಿಸುತ್ತೇವೆ. ಅವರು ತಿದ್ದುಪಡಿ ಅಥವಾ ಹೊಸದು ಮಾಡಲು ಅನುಮತಿ ಕೊಡಬಹುದು.

-ಅನೀಲ ಬಡಿಗೇರ ತಹಸೀಲ್ದಾರ ಜಮಖಂಡಿ