ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನ ಯಡಜಿಗಳೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಗುರುವಾರ ಕೆ.ಎಸ್.ಆರ್.ಟಿ.ಸಿ. ಡಿಪೋ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಗ್ರಾಮೀಣ ಭಾಗದ ಜನರ ಸಾರಿಗೆ ಸಮಸ್ಯೆ ತಕ್ಷಣ ಬಗೆಹರಿಸಬೇಕು. ಒಂದು ಮಾರ್ಗದ ಬಸ್ ಸಂಚಾರ ನಿಲ್ಲಿಸಿದರೆ ಅದನ್ನು ಅವಲಂಬಿಸಿಕೊಂಡವರಿಗೆ ಆಗುವ ಸಮಸ್ಯೆಯನ್ನು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ಎಂದರು.

ಯಡಜಿಗಳೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ವಿದ್ಯಾರ್ಥಿಗಳು, ಗ್ರಾಮಸ್ಥರು, ರೋಗಿಗಳು ತಾಲೂಕು ಕೇಂದ್ರವಾದ ಸಾಗರ ಪಟ್ಟಣಕ್ಕೆ ಬರಲು ಬಸ್‌ಗಳನ್ನು ಅವಲಂಬಿಸಿಕೊಂಡಿದ್ದಾರೆ. ನಾನು ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ತಾಲೂಕಿನ ಬೇರೆಬೇರೆ ಮಾರ್ಗಗಳಿಗೆ ತುರ್ತು ಬಸ್ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ತರಲಾಗಿತ್ತು. ಈ ಭಾಗದ ೧೧ ರೂಟ್‌ಗಳಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಬಸ್ ಸೌಲಭ್ಯ ನಿಲ್ಲಿಸಲಾಗಿದ್ದು, ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳಿಗೆ ಮೌಖಿಕವಾಗಿ ಸಾಕಷ್ಟು ಬಾರಿ ಮನವಿ ಮಾಡಿದರೂ ಅವರು ಸ್ಪಂದಿಸುತ್ತಿಲ್ಲ. ತಕ್ಷಣ ಬಸ್ ಸೌಲಭ್ಯ ಕಲ್ಪಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿದಿನ ಬೆಳಿಗ್ಗೆ ೭-೪೫ಕ್ಕೆ ಸಾಗರದಿಂದ ಅಂಬಿಗಾರಿಗೆ ಬರುತ್ತಿದ್ದ ಬಸ್ ಸೌಲಭ್ಯವನ್ನು ಪುನರಾರಂಭಿಸಬೇಕು. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಹಿಂದಿನಂತೆ ಪುನರಾರಂಭ ಮಾಡಬೇಕು. ಸರ್ಕಾರ ಗ್ರಾಮೀಣ ಭಾಗದ ಸಾರಿಗೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರು ಸರ್ಕಾರಿ ಬಸ್ ಸಂಚಾರ ಅವಲಂಬಿಸಿರುತ್ತಾರೆ ಎನ್ನುವುದನ್ನು ಸಂಬಂಧಪಟ್ಟವರು ಗಮನಿಸಬೇಕು ಎಂದು ಒತ್ತಾಯಿಸಿದರು.


ಗಿರೀಶ್ ಹೆಗಡೆ ಹಕ್ರೆ, ರಜನೀಶ್ ಹೆಗಡೆ, ಪ್ರವೀಣ್ ಶೆಟ್ಟಿಸರ, ಅರುಣ ಪೂಜಾರಿ ಹಕ್ರೆ, ಅಕ್ಷಯ ಪೂಜಾರಿ, ಮಹೇಶ್ ರಾಮನಗದ್ದೆ, ಮಂಜುನಾಥ್ ಕೆ.ವಿ., ಗಣಪತಿ, ಸುರೇಶ್ ಇನ್ನಿತರರು ಹಾಜರಿದ್ದರು.