ರಾಣಿಬೆನ್ನೂರು: ಶಹರದ ರಿ.ಸ.ನಂ.917 ಕ್ಷೇತ್ರ 91.08 ಎಕರೆ ಕೃಷಿ ಜಮೀನಿಗೆ ಸಂಬಂಧಿಸಿದ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೊಂದ ಕುಟುಂಬಗಳ ಸದಸ್ಯರು ಸೋಮವಾರ ನಗರದ ತಹಸೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಶಹರದ ರಿ.ಸ.ನಂ.917ರ 91.08 ಎಕರೆ ಆಸ್ತಿಯನ್ನು ಒಟ್ಟುಗೂಡಿಸಿದ್ದು ಇರುತ್ತದೆ. ಆದರೆ ರಿ.ಸ.ನಂ.917/1 ಕ್ಷೇತ್ರವನ್ನು ಒಟ್ಟುಗೂಡಿಸಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ರಿ.ಸ.ನಂ.917/1 ಕ್ಷೇತ್ರವು 76 ಎಕರೆ ಆಗಿದ್ದು ಉಳಿದ 15 ಎಕರೆ ಯಾವುದೇ ಆಧಾರ ಇಲ್ಲದೆ ಸುಳ್ಳು ದಾಖಲೆಯನ್ನು ಸೃಷ್ಟಿಸಿ ರಿ.ಸ.ನಂ.917/1 ಪಿ.ಟಿ. ಶೀಟ್ ಮತ್ತು ಕೆ.ಡಿ.ಟಿ.ಯನ್ನು ತಯಾರಿಸಲಾಗಿದೆ. ಇದರಿಂದ ಸಾಗುವಳಿ ಮಾಡತಕ್ಕಂತಹ ಪರಿಶಿಷ್ಟ ಜಾತಿಯ ರೈತರಿಗೆ ತುಂಬಲಾರದ ಹಾನಿಯಾಗಿದೆ. ಆದ್ದರಿಂದ ತಪ್ಪು ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅಲ್ಲಿರತಕ್ಕಂತಹ ರೈತರಿಗೆ ನ್ಯಾಯವನ್ನು ಕೊಡಿಸಬೇಕು. ಇದರ ಬಗ್ಗೆ ಭೂದಾಖಲೆಗಳ ಸಹಾಯಕ ನಿರ್ದೇಶಕರು 9-2-2026 ರಂದು ಹಿಂಬರಹ ಸಹ ನೀಡಿದ್ದಾರೆ. ಕೆ.ಡಿ.ಟಿ. ಪ್ರಕಾರ ಕ್ಷೇತ್ರ 75.39 ಎಕರೆ ಮತ್ತು ಪೋಟ ಕರಾಬ ಸೇರಿಕೊಂಡು 76.05ಎಕರೆ ಆಗುತ್ತದೆ. ಆದರೆ ಕಂದಾಯ ಇಲಾಖೆಯ ಆರ್.ಟಿ.ಸಿ. ಉತಾರದಲ್ಲಿ 91.12ಎಕರೆ ಕ್ಷೇತ್ರ ತೋರಿಸುತ್ತದೆ. ಇದನ್ನೆ ಆಧಾರವಾಗಿಟ್ಟುಕೊಂಡು ದುಷ್ಟಶಕ್ತಿಗಳು 15 ಎಕರೆ ಪಿ.ಟಿ. ಶೀಟ್ ಮಾಡಿಕೊಂಡು ಖರೀದಿ ಮಾಡಿರುತ್ತಾರೆ. ಹೀಗಾಗಿ ಅಲ್ಲಿರುವ ಕ್ಷೇತ್ರವು ಸಾಗುವಳಿ ಮಾಡುತ್ತಿರುವ ರೈತರಿಗೆ ಆಘಾತಕಾರಿಯಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಅಲ್ಲಿರತಕ್ಕಂತಹ ರೈತರಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ 76.05ಎಕರೆ ಜಮೀನಿನ ಒಟ್ಟುಗೂಡಿಕೆಯನ್ನು ಪೋಡಿ ಮಾಡಿ ಯಾವ ಯಾವ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿರುತ್ತೀರಿ, ಅವರಿಗೆ ಸರಿಯಾದ ರೀತಿಯಲ್ಲಿ ಆರ್.ಟಿ.ಸಿ. ಉತಾರವನ್ನು ಖುಲ್ಲಾ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಬಸವರಾಜ ಮೇಗಳಗೇರಿ, ಕಿರಣ ಗುಳೇದ, ರಾಮಚಂದ್ರ ನಾಯಕ, ಉಮೇಶ ಲಮಾಣಿ, ಧರ್ಮಪ್ಪ ಲಮಾಣಿ, ರವಿ ಲಮಾಣಿ, ಹಾಲಪ್ಪ ಲಮಾಣಿ, ಕುಬೇರಪ್ಪ ಲಮಾಣಿ, ಶಿವಪ್ಪ ಲಮಾಣಿ, ಗೋಪಿ, ಬೆನಕಪ್ಪ, ಭೀಮಪ್ಪ, ಹಾಲೇಶ, ರಾಮಪ್ಪ ಮತ್ತಿತರರಿದ್ದರು.