ವಿಧಾನಸೌಧ ಮುಂದೆ ಪ್ರತಿಭಟನೆಗೂ ಸಿದ್ಧ । ಉಲಮಾಗಳ ನೇತೃತ್ವದಲ್ಲಿ ಮುಸ್ಲಿಂ ಮುಖಂಡರಿಂದ ಹಕ್ಕೋತ್ತಾಯ

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದ ಮುಸ್ಲಿಂ ಸಮುದಾಯದ ಪ್ರಭಾವಿ ಮುಖಂಡರಾದ ನಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬಾರ್‌ರಿಗೆ ಮತ್ತೆ ರಾಜಕೀಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಗರದ ಶಾಹಿ ಈದ್ಗಾ ಮೈದಾನದಲ್ಲಿ ಜಿಲ್ಲೆಯ ಉಲಮಾಗಳ ನೇತೃತ್ವದಲ್ಲಿ ಸಾವಿರಾರು ಮುಸ್ಲಿಂ ಸಮುದಾಯದ ಮುಖಂಡರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು.ಮೌಲಾನಾ ಅತೀಕ್ ಉರ್ ರೆಹಮಾನ್ ಮಾತನಾಡಿ, ಕಾಂಗ್ರೆಸ್ ಪಕ್ಷ ಸ್ಥಾಪನೆಯಾದಾಗಿನಿಂದ ಭಾರತದ ಮುಸಲ್ಮಾನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಪಕ್ಷವೇ ಮಾತ್ರವೇ ಎಲ್ಲಾ ಧರ್ಮಗಳ ಜನರನ್ನು ಸಮಾನವಾಗಿ ಕಾಣುವ ಉದ್ದೇಶದಿಂದ ನಾವು ಬೆಂಬಲಿಸಿಕೊಂಡು ಬಂದ್ದಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಬೇರೆ ಸಮುದಾಯದ ಜನರು ಕೈಬಿಟ್ಟರು, ಮುಸ್ಲಿಂ ಸಮುದಾಯದ ಜನರು ಕಾಂಗ್ರೆಸ್ ಪಕ್ಷದ ಜೊತೆ ಗಟ್ಟಿಯಾಗಿ ನಿಂತು ಬೆಂಬಲ ನೀಡಿದ್ದೇವೆ, ಕಾಂಗ್ರೆಸ್ ಪಕ್ಷದ ಕಷ್ಟದಲ್ಲಿ ಇರ್ಲಿ ಸುಖದಲ್ಲಿ ಇರಲಿ ನಾವು ಸದಾ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಬೆಂಬಲಿಸಿದ್ದೇವೆ ಎಂದರು.ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯ ಮತದಾರರು ಹೆಚ್ಚಾಗಿದ್ದು, ಸಚಿವ ಜಮೀರ್ ಅಹಮದ್, ನಸೀರ್ ಅಹ್ಮದ್ ಹಾಗೂ ಮುಂತಾದ ಮುಖಂಡರು ಮುಸ್ಲಿಂಮರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದು ತಪ್ಪಿಲ್ಲ. ನಾವು ಅನ್ಯಾಯ ಮಾಡುವ ಪಕ್ಷದಲ್ಲಿ ಮೊದಲಿನಿಂದಲೂ ಹೋಗಲ್ಲಾ ಹಾಗೂ ಮುಂದಿನ ದಿನಗಳಲ್ಲಿಯೂ ಸಹ ಹೋಗುವುದಿಲ್ಲಾ. ಆದರೆ ಕಾಂಗ್ರೆಸ್ ಪಕ್ಷ ಈಗ ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ನಾವು ಸಹ ನಿಮ್ಮ ಜೊತೆ ಇರಲು ಇಷ್ಟ ಪಡುವುದಿಲ್ಲ. ನಮ್ಮ ಧರ್ಮ ಗುರುಗಳು ಹಾಗೂ ಮುಖಂಡರು ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಹೇಳಿದ ಭಾಗವಾಗಿಯೇ ಶೇ. ೯೨ ಮತ ಹಾಕಿ ಕಾಂಗ್ರೆಸ್‌ಗೆ ಅಧಿಕಾರಕ್ಕೆ ತಂದ್ದಿದ್ದೇವೆ. ನಮಗೆ ನೀವು ನೀಡಿದ ಭರವಸೆ ಈಡೇರಿಸಲಿಲ್ಲಾ. ಈಗ ನೋಡಿದರೆ ನಮ್ಮ ನಾಯಕರಾದ ನಸೀರ್ ಅಹ್ಮದ್ ಹಾಗೂ ಜಬ್ಬಾರ್ ಅವರನ್ನು ವಜಾ ಮಾಡಿದ್ದು ಸರಿಯಲ್ಲ. ಕೂಡಲೇ ಅವರಿಗೆ ರಾಜಕೀಯ ಸ್ಥಾನಮಾನವನ್ನು ನೀಡಬೇಕು ಕೂಡಲೇ ಎಚ್ಚೆತ್ತುಕೊಳ್ಳಿ ಇಲ್ಲದೇ ಹೋದರೆ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.ಬಾಗಲಕೋಟೆ ಉಪಚುನಾವಣೆಯಲ್ಲಿ ನಸೀರ್ ಅಹ್ಮದ್ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದಾರೆ. ಅವರು ದಾವಣಗೆರೆಗೆ ಹೋಗಲಿಲ್ಲ ಅನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಿದ್ದು ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಇದೇ ಕೊನೆ ಚುನಾವಣೆಯಲ್ಲ ಮುಂದೆಯೂ ಚುನಾವಣೆಗಳು ಬರುತ್ತೆ ಆಗ ನಿಮಗೆ ಪಾಠ ಕಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಮುಳಬಾಗಿಲಿನ ಮೌಲಾನಾ ಇಮ್ರಾನ್ ಮಾತನಾಡಿ, ನಾವು ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ನೋಡಿ ಬೆಂಬಲ ನೀಡಿಲ್ಲ. ನಮಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಬೆಂಬಲಿಸಿದ್ದು ನಿಮ್ಮ ಗ್ಯಾರಂಟಿಯಿಂದೆಲ್ಲ. ಕೆಲವರು ಹೇಳ್ತಾರೆ ಮೊದಲು ಪಕ್ಷ ನಂತರ ವ್ಯಕ್ತಿ ಅಂತ. ಇದು ತಪ್ಪು ಯಾಕಂದ್ರೆ ವ್ಯಕ್ತಿ ಇದ್ದರೆ ತಾನೇ ಪಕ್ಷ ಕಟ್ಟಕ್ಕೆ ಆಗೋದು ಎಂಬುದನ್ನು ತಿಳಿಯಬೇಕು ಎಂದರು. ಮೌಲಾನಾ ಇಸ್ರಾಯಿಲ್ ಹಜರತ್ ಮಾತನಾಡಿ, ನಸೀರ್ ಅಹ್ಮದ್ ಅವರಿಗೆ ಮತ್ತೆ ಹುದ್ದೆ ನೀಡಿ ಮುಂದೆ ನಾವು ಪ್ರತಿಭಟನೆ ಮಾಡುವ ಸ್ಥಿತಿಗೆ ಬರಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಡಬಾರದು ಎಂದರು.

ಮೌಲಾನಾ ವಜೀರ್ ಮಾತನಾಡಿ, ನಾವು ಸಣ್ಣ ತಪ್ಪು ಮಾಡಿದರೂ ನಮ್ಮ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಬೇರೆಯವರು ದೊಡ್ಡ ತಪ್ಪು ಮಾಡಿದರು ಅವರ ವಿರುದ್ಧ ಕ್ರಮ ಕೈಗೊಳ್ಳಲ್ಲ. ಈ ದ್ವಂದ್ವ ರೀತಿ ಕಾಂಗ್ರೆಸ್ ಮಾಡ್ತಿರೋದು ಸರಿಯಲ್ಲ. ಕಾಂಗ್ರೆಸ್ ಹೈಕಮಾಂಡ್ ಮುಸ್ಲಿಂ ಸಮುದಾಯಕ್ಕೆ ಕ್ಷಮೆ ಕೇಳಬೇಕು ಹಾಗೂ ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ಅವರಿಗೆ ಪುನಃ ಹುದ್ದೆ ನೀಡಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಪ್ರಮಾಣ ಬೀಳುತ್ತದೆ. ಮುಸ್ಲಿಂ ಸಮುದಾಯದ ಜನರು ಪಕ್ಷಗಳನ್ನು ಅಧಿಕಾರಕ್ಕೆ ತರುವುದು ಗೊತ್ತು ಹಾಗೂ ಅಧಿಕಾರದಿಂದ ದೂರ ಇಡುವುದು ಗೊತ್ತು ಎಂದು ಎಚ್ಚರಿಕೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೌಲಾನ ಕಲೀಮುಲ್ಲಾ ಮಾತನಾಡಿ, ಮುಸ್ಲಿಂ ಸಮುದಾಯದ ನಾಯಕರು ಹಾಗೂ ಉಲಮಾಗಳು ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಿ ಎಂದು ಕೇಳಿದರೂ ನೀಡಲಿಲ್ಲ. ಕೇವಲ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿ ಒಂದು ಕೋಟಿ ಮುಸ್ಲಿಮರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಈ ಅನ್ಯಾಯವನ್ನು ಬಗೆಹರಿಸಿ ಎಂದು ಆಗ್ರಹಿಸಿದರು.ಯುವ ಕಾಂಗ್ರೆಸ್ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ನಡೆಸಿದರು, ಮುಸ್ಲಿಂ ಧರ್ಮಗುರುಗಳಾದ ಮುಫ್ತಿ ಮುಜೀರ್, ಮುಫ್ತಿ ಹಸ್ಮತ್, ಅಪ್ಸರ್ ಅಲಿ, ಮೌಲಾನಾ ಇಸ್ರಾಯಿಲ್, ಮೆಹಬೂಬ್ ಆಲಂ, ಮೌಲಾನಾ ಖಲೀಲ್ ರಶಾದಿ ಇದ್ದರು.