ಸರ್ಕಾರದೊಂದಿಗೆ ಕೃಷಿ ಇಲಾಖೆಯಿಂದ ಬರಬೇಕಾದ ಅನುದಾನ ಬಗ್ಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ, ರಾಜ್ಯ ಸರ್ಕಾರವು ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕಾಗಿದೆ,
ಕೋಲಾರದಲ್ಲಿ ಜೆಡಿಎಸ್-ರೈತ ಸಂಘದಿಂದ ಮಾವಿನ ಕಾಯಿ ರಸ್ತೆಗೆ ಸುರಿದು ರಸ್ತೆ ತಡೆ । ಕನಿಷ್ಠ ೧೦ ರುಪಾಯಿ ನೀಡಲು ಒತ್ತಾಯ
ಕನ್ನಡಪ್ರಭ ವಾರ್ತೆ ಕೋಲಾರರಾಜ್ಯ ಸರ್ಕಾರವು ಮಾವಿಗೆ ಸೂಕ್ತವಾದ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ಸೋಮವಾರ ಜೆಡಿಎಸ್ ಪಕ್ಷ ಮತ್ತು ರೈತ ಸಂಘದ ನೇತೃತ್ವದಲ್ಲಿ ನಗರದ ಹೊಸ ಬಸ್ ನಿಲ್ದಾಣದ ವೃತ್ತದಲ್ಲಿ ಮಾವಿನ ಕಾಯಿ ರಸ್ತೆಗೆ ಸುರಿದು ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ಸರ್ಕಾರದೊಂದಿಗೆ ಕೃಷಿ ಇಲಾಖೆಯಿಂದ ಬರಬೇಕಾದ ಅನುದಾನ ಬಗ್ಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ, ರಾಜ್ಯ ಸರ್ಕಾರವು ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕಾಗಿದೆ, ಎಪಿಎಂಸಿ ಮಾರುಕಟ್ಟೆ ನಿಯಮಗಳ ಪ್ರಕಾರ ಎಷ್ಟು ಬೆಂಬಲ ಬೆಲೆ ನೀಡಬೇಕೋ ಅದರ ಬಗ್ಗೆ ಪ್ರಸ್ತಾವನೆ ಕೇಂದ್ರಕ್ಕೆ ಕಳುಹಿಸಲಾಗಿದೆ, ರಾಜ್ಯ ಸರ್ಕಾರವು ಬೆಂಬಲ ಬೆಲೆ ಇನ್ನಷ್ಟು ಹೆಚ್ಚಿಸಬೇಕು, ಕಳೆದ ವರ್ಷ ೨ ರುಪಾಯಿ ನೀಡಲಾಗಿತ್ತು, ಈ ಬಾರಿ ಕನಿಷ್ಠ ೧೦ ರುಪಾಯಿ ನೀಡಬೇಕು ಎಂದು ಒತ್ತಾಯಿಸಿದರು.ಕೋಲಾರ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದ್ದು, ಈ ಕುರಿತು ಒತ್ತಡ ಹೇರಿದರೆ, ಕೇಂದ್ರ ಸರ್ಕಾರಕ್ಕೆ ಬೆಂಬಲ ಬೆಲೆ ಘೋಷಿಸಲು ಸುಲಭವಾಗುತ್ತದೆ, ಕಳೆದ ವರ್ಷ ನಾನು, ಕುಮಾರಸ್ವಾಮಿ ಮತ್ತು ದೇವೇಗೌಡರು ಮೂವರೂ ಸೇರಿ ಮಾತನಾಡಿದ್ದೆವು, ಆಗ ಕೇಂದ್ರ ಸಚಿವರು ಸ್ಪಂದಿಸಿದ್ದರು ರಾಜ್ಯದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಲು ಕೃಷಿ ಸಚಿವರೇ ಇಲ್ಲ. ಮುಖ್ಯಮಂತ್ರಿಗಳೇ ಒಂದು ಪತ್ರ ಬರೆದು ಇದಕ್ಕೆ ಪರಿಹಾರ ಒದಗಿಸಬೇಕು.
ಕೇಂದ್ರ ಸಚಿವರು ದೆಹಲಿಗೆ ಮರಳಿದ ತಕ್ಷಣ ಈ ವಿಷಯದ ಬಗ್ಗೆ ಅವರೊಂದಿಗೆ ಮಾತನಾಡಿ, ರೈತರಿಗೆ ನೆರವಾಗುವ ರೀತಿಯಲ್ಲಿ ನಮ್ಮ ರೈತರನ್ನು ಉಳಿಸಲು ಜೆಡಿಎಸ್ ಪಕ್ಷವು ಬದ್ಧವಾಗಿದೆ. ೨೦೦೬ರಲ್ಲಿ ಕುಮಾರಸ್ವಾಮಿ ಸಿಎಂಯಾಗಿದ್ದಾಗ ಟೊಮೇಟೊ ಬೆಲೆ ಕುಸಿದಿದ್ದಾಗ ಕೆಲವೇ ಗಂಟೆಗಳಲ್ಲಿ ಬೆಂಬಲ ಬೆಲೆ ಘೋಷಿಸಿದ್ದರು. ಈಗಿನ ಕಾಂಗ್ರೆಸ್ ಸರ್ಕಾರ ಏಕೆ ವಿಳಂಬ ಮಾಡುತ್ತಿದೆ ಎಂದು ಪ್ರಶ್ನಿಸಿ ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಕೇಂದ್ರಕ್ಕೆ ಪತ್ರ ಬರೆಯಬೇಕೆಂದು ಆಗ್ರಹಿಸಿದರು.ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಬೆಲೆ ಕುಸಿತದಿಂದ ಕಂಗೆಟ್ಟಿರುವ ಮಾವು ಬೆಳೆಗಾರರ ನೆರವಿಗೆ ಸರ್ಕಾರಗಳು ಧಾವಿಸಬೇಕು. ಕೂಡಲೇ ಸೂಕ್ತವಾದ ಬೆಂಬಲ ಬೆಲೆ ಘೋಷಿಸಬೇಕು. ಕಳೆದ ವರ್ಷವೂ ಮಾವಿನ ಧಾರಣೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಬೆಂಬಲ ಬೆಲೆ ಲಭಿಸಿತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲವಾಗಿದೆ ಬೆಂಬಲ ಬೆಲೆ ಘೋಷಣೆ ಆಗದಿದ್ದರೆ ಉಗ್ರವಾದ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ, ಮಾವು ಬೆಲೆ ಕುಸಿತದಿಂದ ಮಾವು ಬೆಳೆಗಾರರು ಸಂಕಷ್ಟ ಎದುರುಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಮಾವು ಬೆಳೆಗಾರರು ನಷ್ಟ ಅನುಭವಿಸುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಂಬಂಧಿಸಿದ ಸಚಿವರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಲಕ್ಷಾಂತರ ರುಪಾಯಿ ಬಂಡವಾಳ ಹಾಕುತ್ತಾರೆ ಆದರೆ ಲಾಭ ಬರುತ್ತಿಲ್ಲ. ರೈತನಿಗೆ ನಯಾಪೈಸೆಯೂ ಉಳಿಯುತ್ತಿಲ್ಲ. ಯುದ್ಧದ ಹಿನ್ನೆಲೆ ರಫ್ತು ಸ್ಥಗಿತಗೊಂಡಿದೆ. ಹಾಕಿದ ಬಂಡವಾಳವೂ ವಾಪಸ್ ಬರುತ್ತಿಲ್ಲ ಹಾಗಾಗಿ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕೋಮುಲ್ ನಿರ್ದೇಶಕ ವಡಗೂರು ಡಿ.ವಿ.ಹರೀಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಣಕನಹಳ್ಳಿ ನಟರಾಜ್, ತಾಲೂಕು ಅಧ್ಯಕ್ಷ ಬಾಬು ಮೌನಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಹಿಳಾ ಅಧ್ಯಕ್ಷೆ ಎ.ನಳಿನಿಗೌಡ, ಮರಗಲ್ ಶ್ರೀನಿವಾಸ್ ಮುಖಂಡರಾದ ಲೋಕೇಶ್ ಮರಿಯಪ್ಪ, ಬಲಿಜ ಸಂಘದ ತೋಟಗಳ ಅಶೋಕ್, ಮೂರಂಡಹಳ್ಳಿ ಬಾಬು, ಎಪಿಎಂಸಿ ಪುಟ್ಟರಾಜು, ಸುರೇಶ್, ಪುತ್ತೇರಿ ರಾಜು, ಹನುಮಯ್ಯ, ಗಿರೀಶ್, ಶೈಲಜಾ, ರತ್ನಮ್ಮ, ಮುನಿಚೌಡಮ್ಮ ಇದ್ದರು.