ಆಲೂಗಡ್ಡೆ ರಸ್ತೆಗೆ ಸುರಿದು ಆಕ್ರೋಶ । ನಷ್ಟ ಪರಿಹಾರ, ಕೋಲ್ಡ್ ಸ್ಟೋರೇಜ್ಗಾಗಿ ಒತ್ತಾಯ । ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ।
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಆಲೂಗಡ್ಡೆಗೆ ಬೆಂಬಲ ಬೆಲೆ ಮತ್ತು ನಷ್ಟ ಪರಿಹಾರಕ್ಕಾಗಿ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ತೆರೆಯಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಆಲೂಗಡ್ಡೆ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ಜಿಲ್ಲೆ ಹಾಗೂ ತಾಲೂಕಿನಲ್ಲಿ ಯಾವುದೇ ನದಿ ಮೂಲಗಳಿಲ್ಲದ ಬಯಲು ಸೀಮೆ ಪ್ರದೇಶದಲ್ಲಿ ರೈತರು ಸಾವಿರಾರು ಅಡಿ ಆಳದ ಬೋರ್ವೆಲ್ ಕೊರೆದು ನೀರನ್ನು ತೆಗೆದು ಈ ವ್ಯವಸಾಯ ಮಾಡುತ್ತಿರುತ್ತಾರೆ. ಲಕ್ಷಾಂತರ ರು.ಗಳ ಬಂಡವಾಳ ಹೂಡಿ ತಮ್ಮ ಜಮೀನಿನಲ್ಲಿ ಆಲೂಗಡ್ಡೆ ಬಿತ್ತನೆ ಬೀಜ ಮೂಟೆ 1ಕ್ಕೆ ₹1500 ರಿಂದ 2500 ರವರೆಗೂ ಬಿತ್ತನೆ ಬೀಜ ಖರೀದಿ ಮಾಡಿ, ಬಿಕ್ಕಬಳ್ಳಾಪುರ ತಾಲೂಕನಲ್ಲಿ 1043 ಹೆಕ್ಟೇರ್ ಅಂದರೆ 2607 ಎಕರೆ, ಜಿಲ್ಲೆಯಲ್ಲಿ ಒಟ್ಟು 4,500 ಹೆಕ್ಟೇರ್ 11,250 ಎಕರೆ ಜಮೀನಿನಲ್ಲಿ ಉತ್ತಮವಾದ ಬೆಳ ಬೆಳದಿದ್ದಾರೆ.ಆದರೆ ಬೆಲೆ ಇಲ್ಲದೆ ವ್ಯಾಪಾರಸ್ಥರು ಕಡಿಮೆ ದರದಲ್ಲಿ ಮೂಟೆಗೆ ₹350-400ಗಳಿಗೆ ಖರೀದಿ ಮಾಡುತ್ತಿದ್ದಾರೆ. ಭಾರಿ ನಷ್ಟಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾ ಕೇಂದ್ರದಲ್ಲಿ ಎರಡು ಖಾಸಗಿ ಕೋಲ್ಡ್ ಸ್ಟೋರೇಜ್ಗಳು ಇದ್ದು ಇದರಲ್ಲಿ 1 ಲಕ್ಷ 9 ಸಾವಿರ ಆಲೂಗಡೆ, ಮೂಟೆ ಭರ್ತಿಯಾಗಿದೆ. ಇನ್ನು ಹಲವು ರೈತರ ತಮ್ಮ ತೋಟಗಳಲ್ಲಿ ಆಲೂಗಡ್ಡೆ ರಾಶಿಗಳು ಇಟ್ಟು ಬಿಸಿಲು ತಾಪಮಾನ ಏರಿಕೆಯಿಂದಾಗಿ ಹೆಚ್ಚು ಆಲೂಗಡ್ಡೆ ಕೊಳೆತು ಹೋಗಿವೆ. ಇದರಿಂದ ರೈತರು ಭಾರಿ ನಷ್ಟಕ್ಕೆ ಒಳಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆದ್ದರಿಂದ ಸರ್ಕಾರ ಕೂಡಲೇ ಆಲೂಗಡ್ಡೆಗೆ ಬೆಂಬಲ ಬೆಲೆ ನೀಡಿ ಡಾ.ಸ್ವಾಮಿನಾಥ “ವರದಿಯಂತೆ ಪರಿಹಾರ ನೀಡುವಂತೆ ಮತ್ತು ಜಿಲ್ಲೆ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಪ್ರಾರಂಭಿಸಲು ಸರ್ಕಾರವನ್ನು ಒತ್ತಾಯಿಸಿದರು. ಕರ್ನಾಟಕ ಪ್ರಾಂತ ರೈತ ಸಂಘ (KPRS) ತಾಲೂಕು ಸಮಿತಿ ಚಿಕ್ಕಬಳ್ಳಾಪುರ ವತಿಯಿಂದ ಮನವಿಯನ್ನು ಸಲ್ಲಿಸುತ್ತಿದ್ದೇವೆ.
ಸಿಪಿಐಎಂನ ಚನ್ನರಾಯಪ್ಪ ಮಾತನಾಡಿ, ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಆಲೂಗಡ್ಡೆ (52 ಕೆ.ಜಿ. ಮೂಟೆ) ಕೇವಲ 300 ರು.ಗೆ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ಎಂದರು.
ಈ ಬಾರಿಯೂ ರೈತರು ಭರ್ಜರಿ ಆಲೂಗಡ್ಡೆ ಬೆಳೆದಿದ್ದಾರೆ. ಆದರೆ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದೆ. ಮಧ್ಯ ಪ್ರಾಚ್ಯದ ಯುದ್ಧ ನಿಂತ ನಂತರ ದರ ಬರುವವರೆಗೂ ಕೋಲ್ಡ್ ಸ್ಟೋರೇಜ್ನಲ್ಲಿ ಆಲೂಗಡ್ಡೆ ದಾಸ್ತಾನು ಮಾಡಲು ರೈತರು ಮುಗಿಬಿದ್ದಿದ್ದು, ವಾರಗಟ್ಟಲೇ ಬಿರು ಬಿಸಲಿನಲ್ಲೇ ಕಾಯುವಂತಾಗಿದೆ. ಆದುದರಿಂದ ಸರ್ಕಾರ ಕೂಡಲೆ ಆಲೂಗಡ್ಡೆಗೆ ಬೆಂಬಲ ಬೆಲೆ ಮತ್ತು ನಷ್ಟ ಪರಿಹಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ಕೋಲ್ಡ್ ಸ್ಟೋರೇಜ್ ತೆರೆಯಬೇಕುಯೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ನರಸಿಂಹರೆಡ್ಡಿ, ಶಿವಪ್ಪ, ರಾಮಕೃಷ್ಣಪ್ಪ, ವೆಂಕಟರಮಣಪ್ಪ, ಶ್ರೀನಿವಾಸ್, ಮುನಿರಾಜು ಮತ್ತಿತರರು ಇದ್ದರು.
ಸಿಕೆಬಿ-1 ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಆಲೂಗಡ್ಡೆಗೆ ಬೆಂಬಲ ಬೆಲೆ, ನಷ್ಟ ಪರಿಹಾರ ಮತ್ತು ಕೋಲ್ಡ್ ಸ್ಟೋರೇಜ್ಗಾಗಿ ಒತ್ತಾಯಿಸಿ ಆಲೂಗಡ್ಡೆ ರಸ್ತೆಗೆ ಸುರಿದು ಕೆಪಿಆರ್ಎಸ್ನಿಂದ ಪ್ರತಿಭಟನೆ ನಡೆಸಲಾಯಿತು.