ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುತ್ತಿರುವುದು ಸಂತಸದ ಸಂಗತಿ ಆದರೆ. ಇದರ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮಿಲಿನಗೊಳಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸ ಯಾವುದೇ ಕಾರಣಕ್ಕೂ ಆಗಬಾರದು

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಸರ್ಕಾರಿ ಶಾಲೆಗಳನ್ನ ಉಳಿಸುವುದು ಸೇರಿದಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ಶಾಲೆಯ ಆಟದ ಮೈದಾನದಲ್ಲಿ ಗುರುಭವನ ನಿರ್ಮಾಣ ಮಾಡುವುದನ್ನು ಖಂಡಿಸಿ ಕರವೇ(ಚಳವಳಿ ಡಾ.ಚಲಪತಿಗೌಡ) ಬಣದ ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಕರವೇ ತಾಲೂಕು ಅಧ್ಯಕ್ಷ ಬಿ.ಎ.ಬಾಬಾಜಾನ್ ಮಾತನಾಡಿ, ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸುತ್ತಿರುವುದು ಸಂತಸದ ಸಂಗತಿ ಆದರೆ. ಇದರ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮಿಲಿನಗೊಳಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸ ಯಾವುದೇ ಕಾರಣಕ್ಕೂ ಆಗಬಾರದು ಎಂದು ಒತ್ತಾಯಿಸಿದರು.

ಮುಖ್ಯ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹ

ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರ ಅವ್ಯವಹಾರಗಳ ಬಗ್ಗೆ ಹೋರಾಟ ನಡೆಸಿದರೂ ಸಹ ಇಲ್ಲಿನ ಬಿಇಒ ರವರು ಇದುವರೆವಿಗೂ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು ತಕ್ಷಣ ಇಲ್ಲಿನ ಮುಖ್ಯ ಶಿಕ್ಷಕರ ವಿರುದ್ದ ಕ್ರಮಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಕರವೇ ಉಪಾಧ್ಯಕ್ಷ ಆರ್. ರವೀಂದ್ರ ಮಾತನಾಡಿ, ಪಟ್ಟಣದ ಕೇಂದ್ರದಲ್ಲಿರುವ ಸರ್ಕಾರಿ ಬಾಲಕರ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುಮಾರು 1500ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಜೂನಿಯರ್ ಕಾಲೇಜ್ ಹಿಂಭಾಗದಲ್ಲಿರುವ ಇರುವ ಒಂದೇ ಆಟದ ಮೈದಾನವಾಗಿದ್ದು ಇಲ್ಲಿ ಗುರುಭವನ ನಿರ್ಮಾಣ ಮಾಡುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಗುರುಭವನ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ ಆದರೆ ಆಟದ ಮೈದಾನ ಹೊರತುಪಡಿಸಿ ಬೇರೆ ಸ್ಥಳದಲ್ಲಿ ಭವನವನ್ನು ನಿರ್ಮಿಸುವಂತೆ ಆಗ್ರಹಿಸಿದರು.

ರಾಜಕಾರಣಿಗಳ ಜತೆ ಶಿಕ್ಷಕರು

ಲಕ್ಷಾಂತರ ರೂ.ಗಳ ಸಂಬಳ ಪಡೆಯುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಕರು ಸಮರ್ಪಕವಾಗಿ ಕರ್ತವ್ಯ ನಿವಹಿಸದೆ ರಾಜಕಾರಣಿಗಳ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ, ಹಲವು ಶಿಕ್ಷಕರು ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದಾರೆ ಇಂತಹ ಶಿಕ್ಷಕರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳುವಂತೆ ಒತ್ತಾಯಿಸಿದರು.

ಹಲವು ಶಿಕ್ಷಕರು ತರಗತಿ ನಡೆಯುವ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವ ಮೂಲಕ ಕಾಲಹರಣ ಮಾಡುತ್ತಿರುವುದರಿಂದ ತರಗತಿ ಒಳಗೆ ಮೊಬೈಲ್ ನಿಷೇಧಿಸುವಂತೆ ಒತ್ತಾಯಿಸಿದರಲ್ಲದೆ ಹಲವು ಶಿಕ್ಷಕರು ವಿದ್ಯಾರ್ಥಿಗಳಿಗೆ ನೀಡುವ ಆಹಾರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾಡುತ್ತಿದ್ದ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ ಅವರು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಬಿಇಒಗೆ ಮನವಿ ಸಲ್ಲಿಕೆ

ನಂತರ ಕರವೇ ಕಾರ್ಯಕರ್ತರು ಬಿಇಒ ವೆಂಕಟೇಶಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಜಿ.ವಿ.ವೆಂಕಟಶಿವಪ್ಪ, ರಿಯಾಜ್, ಗಂಗಾಧರ್, ಗಣೇಶ್, ಸಲೀಂ, ಅಜಯ್, ಚೌಡರೆಡ್ಡಿ, ಮೂರ್ತಿ, ಯಾಸಿನ್, ಸಮೀವುಲ್ಲಾ ಮತ್ತಿತರರು ಇದ್ದರು.