ನೌಕರರ ನೇರಪಾವತಿಗೆ ಆಗ್ರಹಿಸಿ ನಾಳೆ ಪ್ರತಿಭಟನೆ

| Published : Feb 12 2024, 01:34 AM IST

ನೌಕರರ ನೇರಪಾವತಿಗೆ ಆಗ್ರಹಿಸಿ ನಾಳೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲಸ ಕಾಯಂಗೆ ಒತ್ತಾಯಿಸಿ ನಮ್ಮ ಧರಣಿ ನಿಲ್ಲದು. 15ರಂದು ಬೆಂಗಳೂರು ಚಲೊ ಅಭಿಯಾನ ಹಮ್ಮಿಕೊಂಡು, ಹೊರಗುತ್ತಿಗೆ ನೌಕರರ ನಡಿಗೆ, ಮುಖ್ಯಮಂತ್ರಿ ಮನೆ ಕಡೆಗೆ ಎಂಬ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸಿದ್ರಾಮ ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದಿಂದ ನಗರ, ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಗೆ ಆಗ್ರಹಿಸಿ ಬೀದರ್ ಸೇರಿದಂತೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸಿದ್ರಾಮ ಪಾಟೀಲ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಬಳದಲ್ಲಿ ಕಡಿತಗೊಳಿಸಿ ಅರ್ಧದಷ್ಟು ಮಾತ್ರ ಸಂಬಳ ನೀಡುತ್ತಾರೆ. ಹೀಗಾಗಿ ನೇರವಾಗಿ ನಮ್ಮ ಸಂಬಳ ನಮಗೆ ಪಾವತಿಯಾದರೆ ನಮ್ಮ ಕುಟುಂಬ ನಿರ್ವಹಣೆಗೆ ಅನುಕೂಲವಾಗುತ್ತದೆ. ನಮ್ಮ ಕೆಲಸ ಕಾಯಂಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಈ ಬಾರಿ ಸರ್ಕಾರದಿಂದ ಫಲಿತಾಂಶ ಹೊರಬರೋ ವರೆಗೆ ನಮ್ಮ ಧರಣಿ ಪ್ರತಿಭಟನೆ ನಿಲ್ಲದು ಎಂದು ಪಾಟೀಲ ತಿಳಿಸಿದರು.

ಈ ಹಿಂದೆ ಸಚಿವ ಈಶ್ವರ ಖಂಡ್ರೆ ಅವರು ಕೂಡ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಹಾಲಿ ಪೌರಾಡಳಿತ ಸಚಿವ ರಹೀಂ ಖಾನ್ ಕೂಡಾ ನಮ್ಮ ಜಿಲ್ಲೆಯವರೇ ಇದ್ದಾರೆ. ನಮ್ಮ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದನ್ನು ಕಾರ್ಯರೂಪಕ್ಕೆ ಬರದಿರುವ ಕಾರಣ ಪ್ರತಿಭಟನೆ ಮಾಡುತ್ತಿದ್ದೇವೆ. ಕಸ ಗುಡಿಸುವುದು, ಸ್ವಚ್ಛಗೊಳಿಸುವುದು, ಕಸ ವಿಲೇವಾರಿ ಸೇರಿದಂತೆ ಯಾವ ಕಾರ್ಯಗಳೂ ಮಾಡುವುದಿಲ್ಲ. ಎಲ್ಲವೂ ಸ್ಥಗಿತಗೊಳಿಸಿ ಧರಣಿ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ನಮ್ಮ ಸಮಸ್ಯೆ ಬಗೆಹರಿಯದಿದ್ದಲ್ಲಿ ಫೆ.15ರಂದು ಬೆಂಗಳೂರು ಚಲೊ ಅಭಿಯಾನ ಹಮ್ಮಿಕೊಂಡು, ಹೊರಗುತ್ತಿಗೆ ನೌಕರರ ನಡಿಗೆ, ಮುಖ್ಯಮಂತ್ರಿ ಮನೆ ಕಡೆಗೆ ಎಂಬ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಇಡೀ ರಾಜ್ಯದ ಎಲ್ಲ ಹೊರಗುತ್ತಿಗೆ ಪೌರ ಕಾರ್ಮಿಕರು ಅಲ್ಲಿ ಪಾಲ್ಗೊಳ್ಳುವರು ಎಂದು ಸಿದ್ರಾಮ ಪಾಟೀಲ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ರಮೇಶ ಪಾಸ್ವಾನ್ ಮಾತನಾಡಿದರು. ಪ್ರಮುಖರಾದ ರಾಜಕುಮಾರ, ಪವನ, ಯೇಸುದಾಸ, ಮಾರುತಿ ಕಂಟಿ ಸೇರಿದಂತೆ ಇನ್ನಿತರರು ಪತ್ರಿಕಾ ಗೋಷ್ಠಿಯಲ್ಲಿದ್ದರು.