ಹೇಮೆ ನೀರನ್ನು ರಾಮನಗರಕ್ಕೆ ತೆಗೆದುಕೊಂಡು ಹೋದರೆ ಹೋರಾಟ: ಎಂ.ವಿ.ರಾಜೇಗೌಡ

| Published : Jun 10 2025, 05:40 AM IST

ಹೇಮೆ ನೀರನ್ನು ರಾಮನಗರಕ್ಕೆ ತೆಗೆದುಕೊಂಡು ಹೋದರೆ ಹೋರಾಟ: ಎಂ.ವಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ವಿವಾಧಿತ ಯೋಜನೆಯಿಂದ ಮಂಡ್ಯ ಜಿಲ್ಲೆಯ ಹೇಮಾವತಿ ಜಲಾನಯನ ಪ್ರದೇಶದ ರೈತರ ಬದುಕು ಬೀದಿಗೆ ಬೀಳಲಿದೆ. ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋದರೆ ಅದರ ದುಷ್ಪರಿಣಾಮ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಮಂಡ್ಯ ತಾಲೂಕಿನ ರೈತರ ಮೇಲೆ ಆಗಲಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಹೇಮಾವತಿ ನೀರನ್ನು ರಾಮನಗರ ಜಿಲ್ಲೆಯ ಮಾಗಡಿ ಭಾಗಕ್ಕೆ ತೆಗೆದುಕೊಂಡು ಹೋದರೆ ತಾಲೂಕು ರೈತಸಂಘ ಉಗ್ರ ಹೋರಾಟಕ್ಕೀಳಿಯಲಿದೆ ಎಂದು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಎಚ್ಚರಿಕೆ ನೀಡಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರದ ವಿವಾಧಿತ ಯೋಜನೆಯಿಂದ ಮಂಡ್ಯ ಜಿಲ್ಲೆಯ ಹೇಮಾವತಿ ಜಲಾನಯನ ಪ್ರದೇಶದ ರೈತರ ಬದುಕು ಬೀದಿಗೆ ಬೀಳಲಿದೆ. ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋದರೆ ಅದರ ದುಷ್ಪರಿಣಾಮ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಮಂಡ್ಯ ತಾಲೂಕಿನ ರೈತರ ಮೇಲೆ ಆಗಲಿದೆ ಎಂದು ಎಚ್ಚರಿಸಿದ್ದಾರೆ.

33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯ ನೀರನ್ನು ಈಗಾಗಲೇ ಯೋಜನಾ ವ್ಯಾಪ್ತಿಯ ಪ್ರದೇಶಗಳ ತಾಲೂಕಿಗೆ ಹಂಚಿಕೆ ಮಾಡಲಾಗಿದೆ. ಮೂಲ ಯೋಜನೆಯನ್ನು ಬದಲಿಸಿದರೆ ನಮ್ಮ ವ್ಯಾಪ್ತಿಯ ರೈತರಿಗೆ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.

ಹೇಮಾವತಿ ಮೂಲ ಯೋಜನೆ ಪ್ರಕಾರ ಕೆ.ಆರ್.ಪೇಟೆ ತಾಲೂಕು ಸಂಪೂರ್ಣವಾಗಿ ಎರಡು ಬೆಳೆಗೆ ನೀರು ಪಡೆಯಬೇಕಾಗಿತ್ತು. 70ರ ದಶಕದಲ್ಲಿ ತುಮಕೂರು ಭಾಗಕ್ಕೆ ನೀರು ತೆಗೆದುಕೊಂಡುವ ಉದ್ದೇಶದಿಂದ ಸಂಪೂರ್ಣ ನೀರಾವರಿ ಯೋಜನೆ ಪ್ರದೇಶವನ್ನು ಅರೆ ಖುಷ್ಕಿ ಬೆಳೆಗಳಿಗೆ ಸೀಮಿತಗೊಳಿಸಲಾಯಿತು. ಇದರಿಂದ ಘೋರ ಅನ್ಯಾಯಕ್ಕೆ ಒಳಗಾದವರು ಕೆ.ಆರ್.ಪೇಟೆ ತಾಲೂಕಿನ ರೈತ ಸಮುದಾಯ ಎಂದು ಹೇಳಿದ್ದಾರೆ.

ತಾಲೂಕಿನ ರೈತರಿಗೆ ರಾಜ್ಯ ಸರ್ಕಾರ ಅರೆ ಖುಷ್ಕಿ ಬೆಳೆಗಳಿಗೂ ಸಮರ್ಪಕವಾಗಿ ನೀರು ನೀಡುತ್ತಿಲ್ಲ. ಅಣೆಕಟ್ಟೆಯಲ್ಲಿ ನೀರಿದ್ದರೂ ಅಗತ್ಯ ನೀರು ಪಡೆಯಲಾಗದ ಸ್ಥಿತಿಯಲ್ಲಿ ಜಿಲ್ಲೆಯ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ಮತ್ತು ಮಂಡ್ಯ ಭಾಗದ ಹೇಮಾವತಿ ಜಲಾನಯನ ಪ್ರದೇಶದ ರೈತರು ಇದ್ದಾರೆ ಎಂದಿದ್ದಾರೆ.

ಪರಿಸ್ಥಿತಿ ಈಗಿರುವಾಗ ಹೇಮೆ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋದರೆ ಅದರ ದುಷ್ಪರಿಣಾಮ ಮಂಡ್ಯ ಜಿಲ್ಲೆಯ ರೈತರ ಮೇಲಾಗಲಿದೆ. ಈ ಬಗ್ಗೆ ಜಿಲ್ಲೆಯ ಶಾಸಕರು ಧ್ವನಿಯೆತ್ತಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ರೈತ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ ಶಾಸಕ ರವಿಕುಮಾರ್, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಸೇರಿದಂತೆ ಜಿಲ್ಲೆಯ ಶಾಸಕರು ಇಲ್ಲಿನ ರೈತರ ಹಿತರಕ್ಷಣೆಗೆ ಮುಂದಾಗಬೇಕು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಈ ವಿಚಾರದಲ್ಲಿ ತನ್ನ ನಿಲುವು ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.