ನಿರಂತರ ಹೋರಾಟ ಮಾಡುತ್ತಾ ಬಂದರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ಈ ಕಡೆ ಗಮನಹರಿಸಿಲ್ಲ

ಹರಪನಹಳ್ಳಿ; ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ತಾಲೂಕಿನ ಅರಸೀಕೆರೆಯಲ್ಲಿ ಶುಕ್ರವಾರ ಅಖಿಲ ಭಾರತ ಕಿಸಾನ್ ಸಭಾ, ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ಅರಸೀಕೆರೆ ಹೋಬಳಿಯ ಎಲ್ಲ ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ ವಂಚನೆಗೊಳಗಾಗಿವೆ. ನಿರಂತರ ಹೋರಾಟ ಮಾಡುತ್ತಾ ಬಂದರೂ ಜನ ಪ್ರತಿನಿಧಿಗಳು, ಅಧಿಕಾರಿಗಳು ಈ ಕಡೆ ಗಮನಹರಿಸಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯದಿದ್ದರೆ ನಿರಂತರ ಧರಣಿ ಸತ್ಯಾಗ್ರಹ ಮಾಡುತ್ತೇವೆ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ನಮ್ಮ ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಸಹ ಸ್ಪಂದಿಸಿಲ್ಲ ಎಂದು ಅವರು ದೂರಿದರು.

ಮುಂದಿನ ದಿನಗಳಲ್ಲಿ ಶಾಸಕರು ಈ ಭಾಗಕ್ಕೆ ಬಂದರೆ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು. ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಂದು ಅವರು ತಿಳಿಸಿದರು.

ರೈತ ಮುಖಂಡ ಬೂದಿಹಾಳು ಸಿದ್ದೇಶ್ ಮಾತನಾಡಿ, ರೈತರು ಬೆಳೆದಂತಹ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ರಾಗಿ ಖರೀದಿ ಕೇಂದ್ರ ಕೂಡಲೇ ತೆರೆಯಬೇಕು. ಈ ಭಾಗದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಇರುವುದರಿಂದ ಹಾಸ್ಟೆಲ್ ವ್ಯವಸ್ಥೆ ಇಲ್ಲ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ರಾತ್ರಿ ವೇಳೆಯಲ್ಲಿ ವೈದ್ಯರು ಇರಲ್ಲ ಎಂದು ಆರೋಪಿಸಿದರು.

ದಸಂಸ ಸಂಚಾಲಕ ಕಬ್ಬಳ್ಳಿ ಮೈಲಪ್ಪ ಮಾತನಾಡಿ, ಅರಸೀಕೆರೆ ಹೋಬಳಿ ಅತೀ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಮೂಲಭೂತ ಸೌಕರ‍್ಯಗಳಿಂದ ಸಾರ್ವಜನಿಕರು ವಂಚಿತರಾಗಿದ್ದಾರೆ ಎಂದರು.

ತಾಪಂ ಇಒ ವೈ.ಎಚ್. ಚಂದ್ರಶೇಖರ್ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ವಸತಿ ರಹಿತರ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇನೆ. ಏಳು ಗ್ರಾಪಂಗೆ ಪಿಎಂಜಿವೈನಲ್ಲಿ 121 ಮನೆಗಳು ಬಂದಿವೆ. ಬಜೆಟ್ ನಲ್ಲಿ ಘೋಷಣೆಯಾದಂತೆ ಮನೆಗಳು ಬರುವ ಆಶಾಭಾವನೆಯಿದೆ ಎಂದು ಹೇಳಿದರು.

ಏಳು ಗ್ರಾಪಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುವುದು. ಇದಕ್ಕೆ ಸಂಬಂಧಪಟ್ಟಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್, ರೈತ ಮುಖಂಡ ಬೂದಿಹಾಳು ಸಿದ್ದೇಶ್, ಕಬ್ಬಳ್ಳಿ ಮೈಲಪ್ಪ, ನಿಚ್ಚವ್ವನಹಳ್ಳಿ ಭೀಮಪ್ಪ, ಪುಣಭಘಟ್ಟ ಮಂಜು, ಡಿ.ಎಸ್.ಎಸ್.ದೊಡ್ಡ ಬಸವರಾಜ್, ವಿದ್ಯರ‍್ಥಿ ಸಂಘಟನೆ ಮುಖಂಡ ಡಿ.ಎಚ್. ಅರುಣ, ಆಕಾಶ್, ಗುರುಬಸವರಾಜ, ನಾಗರಾಜ್ ಗೌಡ, ಮಲ್ಲನಗೌಡ, ಸತ್ತೂರು ಮಹಾದೇವಪ್ಪ, ಹೆಚ್.ಹಾಲಪ್ಪ, ಅರಸಾಪುರದ ಕಾಳಪ್ಪ, ನರ‍್ಮಲ, ಪ್ರೇಮಾ, ವಿಶಾಲಮ್ಮ, ಹರಿಯಮ್ಮನಹಳ್ಳಿ ಬಸವರಾಜ್, ರಾಮಣ್ಣ, ಶಿವರಾಮ್, ರಂಗಪ್ಪ, ಇಒ ವೈ. ಹೆಚ್. ಚಂದ್ರಶೇಖರ್, ಆರೋಗ್ಯ ಇಲಾಖೆಯ ಅಧಿಕಾರಿ ಪೃಥ್ವಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಗಂಗಪ್ಪ, ಸಹಾಯಕ ಕಾರ್ಯ ಅಧೀಕ್ಷಕರು ಜಗದೀಶ್ ನಾಯಕ್, ರಾಘವೇಂದ್ರ, ಏಳು ಗ್ರಾಪಂಗಳ ರೈತ ಮುಖಂಡರು, ಪ್ರಗತಿಪರ ಸಂಘಟನೆಕಾರರು, ಮಹಿಳೆಯರು, ಕಾಲೇಜ್ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.