ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ವೈದ್ಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಹತ್ಯೆ ಖಂಡಿಸಿ ತಾಲೂಕು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ವಿವಿಧ ಸಂಘಟನೆಗಳು ಹಾಗೂ ವೈದ್ಯರ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.ಇದೇ ಸಂದರ್ಭದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ವಿ. ಮಹೇಶ್ ಮಾತನಾಡಿ, ಇಂಥ ಅಪರಾಧಗಳು ಮರುಕಳಿಸಬಾರದೆಂದು ಅನೇಕ ಬಾರಿ ಸರ್ಕಾರ ಸುತ್ತೋಲೆಗಳನ್ನು ಹೊರಡಿಸಿದೆ. ಆದರೆ ಈ ಸುತ್ತೋಲೆಗಳನ್ನೆಲ್ಲ ಗಾಳಿಗೆ ತೂರಿ ಇಡೀ ಮನುಕುಲವೇ ತಲೆ ತಗ್ಗಿಸುವ ಕುರ್ತ್ಯಗಳು ಮತ್ತು ಅಪರಾಧಗಳು ಪುನಃ ಪುನಃ ನಡೆಯುತ್ತಿವೆ. ಇಡೀ ದೇಶಾದ್ಯಂತ ಹೆಣ್ಣು ಮಕ್ಕಳ ಮೇಲೆ ಇಂತಹ ದೌರ್ಜನ್ಯಗಳು ನಡೆಯುತ್ತಿವೆ. ಈ ದೌರ್ಜನ್ಯವನ್ನು ಖಂಡಿಸಿ ವಿವಿಧ ಘಟನೆಗಳು ಮತ್ತು ಮಹಿಳೆಯರು ಹೋರಾಟವನ್ನು ನಡೆಸುತ್ತಿದ್ದಾರೆ. ಆದರೆ ಇಂತಹ ಹೋರಾಟದಿಂದ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ಕಾನೂನು ಕ್ರಮಗಳು ಹೆಚ್ಚಾಗಬೇಕು. ಅಂದು ಮಧ್ಯ ರಾತ್ರಿ ನಮಗೆ ಸ್ವಾತಂತ್ರ್ಯ ದೊರಕಿತ್ತು. ಇಂದು ಮಧ್ಯರಾತ್ರಿ ನಮ್ಮ ಹೆಣ್ಣುಮಕ್ಕಳು ನಡೆದಾಡುವ ಪರಿಸ್ಥಿತಿಯು ಬಹಳ ಕಷ್ಟಕರವಾಗಿದೆ ಹಾಗೂ ಹೆಣ್ಣು ಮಕ್ಕಳು ಕೆಲಸಕ್ಕೆ ಬರುವುದೇ ಮತ್ತಷ್ಟು ಕಷ್ಟಕರ ಸಂಗತಿಯೂ ಕೂಡ ನಿರ್ಮಾಣವಾಗುತ್ತಿದೆ. ಇಂತಹ ಶಿಕ್ಷೆ ಮಾಡಿದವರನ್ನು ಕೂಡಲೇ ಗಲ್ಲಿಗೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿ. ಎನ್. ಶಶಿಧರ್, ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಅಶೋಕ್, ಸಮರಸೇನೆ ಜಿಲ್ಲಾಧ್ಯಕ್ಷ ಭರತ್ ಗೌಡ, ಸಂದೇಶ್, ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಮೇಶ್ ಗೂರನಹಳ್ಳಿ, ರಾಜ್ಕುಮಾರ್, ನಾಗರಾಜ್, ಹೊನ್ನೇಗೌಡ, ಲಯನ್ಸ್ ಸಂಸ್ಥೆಯ ತಾಲೂಕು ಅಧ್ಯಕ್ಷ ಗಿರೀಶ್, ವೈದ್ಯರಾದ ಡಾ. ಮಾಲಿನಿ, ಡಾ.ಭಾನುಮತಿ, ಅನಿತಾ, ಗುರುಮೂರ್ತಿ, ಮಹೇಶ್ಕಬ್ಬಾಳು, ಕೆಂಚೇಗೌಡ ಮುಂತಾದವರು ಹಾಜರಿದ್ದರು.