ಸಾರಾಂಶ
ಕಾರವಾರ: ಕಳೆದ ವರ್ಷ ಮಳೆಗಾಲದಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರೆ ತಾತ್ಕಾಲಿಕವಾಗಿ ರಸ್ತೆ ಮಾಡಿಕೊಂಡಿದ್ದಾರೆ. ಸರ್ಕಾರ ಸರ್ವಋತು ರಸ್ತೆ ನಿಮಿಸಿಕೊಡಬೇಕು ಎಂದು ಆಗ್ರಹಿಸಿ ಶಿರಸಿ ತಾಲೂಕಿನ ಮತ್ತಿಘಟ್ಟ ಕೆಳಗಿನಕೇರಿಯ ಗ್ರಾಮಸ್ಥರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕಳೆದ ವರ್ಷದ ಜುಲೈ ತಿಂಗಳಲ್ಲಿ ಭಾರಿ ಮಳೆಯಾಗಿ ಭೂ ಕುಸಿತವಾಗಿ ರಸ್ತೆ ಸಂಪರ್ಕವೇ ಕಡಿದುಹೋಗಿದೆ. ಸಮರ್ಪಕ ರಸ್ತೆ ಇರದ ಕಾರಣ ಮಳೆಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾದವರನ್ನು ನಾವು ಜನರು ಕಂಬಳಿಯಲ್ಲಿ ಕಟ್ಟಿ ಸಾಗಿಸಿದ್ದೇವೆ. ಭೂಕುಸಿತ ಉಂಟಾಗಿ ೨೦ ದಿನಗಳ ಬಳಿಕ ಜನಪ್ರತಿನಿಧಿಗಳಿಗೆ, ಉಪವಿಭಾಗಾಧಿಕಾರಿಗೆ ರಸ್ತೆ ದುರಸ್ತಿ ಮಾಡಿಕೊಡುವಂತೆ ಮನವಿ ನೀಡಲಾಗಿದೆ. ಆದರೆ ಇದುವರೆಗೂ ಗ್ರಾಮದ ರಸ್ತೆ ಪರಿಸ್ಥಿತಿ ಅವಲೋಕಿಸಲು ಯಾರೂ ಬಂದಿಲ್ಲ. ದಿನನಿತ್ಯದ ಓಡಾಟಕ್ಕೆ ಅವಶ್ಯಕತೆಯಿರುವುದುರಿಂದ ಭೂ ಕುಸಿತವಾದಲ್ಲೇ ಚಿಕ್ಕದಾಗಿ ರಸ್ತೆ ಮಾಡಿಕೊಂಡಿದ್ದಾರೆ. ಮುಂದಿನ ಮಳೆಗಾಲದಲ್ಲಿ ಮತ್ತೆ ಭೂ ಕುಸಿತವಾಗಿ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ವಋತು ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.ಶಿರಸಿ-ಅಂಕೋಲಾ ತಾಲೂಕಿನ ಗಡಿ ಪ್ರದೇಶ, ಮತ್ತಿಘಟ್ಟ ಕೆಳಗಿನಕೇರಿ, ಮಾಡನಮನೆ, ಉಂಬಳಕೇರಿ, ಗುಂಡಪ್ಪೆ, ನರಸೇಬೈಲ್ ಒಳಗೊಂಡು ೬ಕ್ಕೂ ಅಧಿಕ ಹಳ್ಳಿಗಳಿಗೆ ಈ ರಸ್ತೆ ಪ್ರಮುಖ ಸಂಪರ್ಕವಾಗಿದೆ. ಜತೆಗೆ ಈ ಭಾಗದಲ್ಲಿ ಸಿದ್ದಿ ಸಮುದಾಯ ಒಳಗೊಂಡು ಹಿಂದುಳಿದ ವರ್ಗದವರೆ ಹೆಚ್ಚಾಗಿ ವಾಸವಾಗಿದ್ದಾರೆ. ಜಿಲ್ಲಾಡಳಿತ ಕೂಡಲೇ ರಸ್ತೆ ಕಾಮಗಾರಿ ಆರಂಭಿಸಿ, ಮಳೆಗಾಲದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ, ಜಿಪಂ ಮಾಜಿ ಸದಸ್ಯೆ ಉಷಾ ಹೆಗಡೆ, ನಾಗರಾಜ ಹೆಗಡೆ, ಗುರುನಾಥ ಹೆಗಡೆ, ದಾಮೋದರ ಸಿದ್ದಿ, ಗಣಪತಿ ಸಿದ್ದಿ, ಶಂಕರ ಸಿದ್ದಿ, ನಾಗೇಶ ಸಿದ್ದಿ, ಭೂದೇವಿ ನಾಯ್ಕ, ಚಂದ್ರಶೇಖರ ಮರಾಠಿ, ರಾಜೇಶ ನಾಯ್ಕ ಮುಂತಾದವರು ಇದ್ದರು.