ನೇಹಾ ಹತ್ಯೆ ಪ್ರಕರಣ ಖಂಡಿಸಿ ಹುಣಸಗಿಯಲ್ಲಿ ಪ್ರತಿಭಟನೆ

| Published : Apr 22 2024, 02:03 AM IST

ಸಾರಾಂಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದ್ದು, ಕೂಡಲೇ ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಹುಣಸಗಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದ್ದು, ಕೂಡಲೇ ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ಹುಣಸಗಿ ಮಂಡಲ ಅಧ್ಯಕ್ಷ ಸಂಗಣ್ಣ ವೈಲಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕೊಲೆಯನ್ನು ಖಂಡಿಸಿ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮೇಣದ ದೀಪ ಹಿಡಿದು ಶ್ರದ್ಧಾಂಜಲಿ ನಡೆಸಿ, ಮಾತನಾಡಿದರು.

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಹಿಂದೂ ಕಾರ್ಯಕರ್ತರು ಹಾಗೂ ವಿದ್ಯಾರ್ಥಿನಿಯರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಿದ್ದರೂ ರಕ್ಷಣೆ ಇಲ್ಲದಂತಾಗಿದೆ. ಆರೋಪಿಗಳ ಕುರಿತು ಏಕೆ ಮೃದು ಧೋರಣೆ ಎಂದು ಪ್ರಶ್ನಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ಮತ್ತು ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿಮನಿ ಮಾತನಾಡಿ, ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಮೇಲೆ ಇಂತಹ ಪ್ರಕರಣ ನಡೆಯುತ್ತಿರುವದು ಅತ್ಯಂತ ಹೇಯ ಕೃತ್ಯವಾಗಿದ್ದು, ಸರ್ಕಾರ ಕೂಡಲೇ ಎಚ್ಚರಗೊಳ್ಳಬೇಕು. ಅಲ್ಲದೇ ನಮ್ಮ ಒಳ್ಳೇಯತವನ್ನು ಕೆಣಕುವ ಸಾಹಸಕ್ಕೆ ಕೈಹಾಕಬೇಡಿ ಎಂದು ಎಚ್ಚರಿಸಿದ ಅವರು, ಹಿರೇಮಠ ಅವರ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದರು.

ವಿನೋದ ದೊರೆ, ನಾಗಯ್ಯ ದೇಸಾಯಿಗುರು, ಆನಂದ ಬಾರಿಗಿಡದ ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಮುರಗೆಣ್ಣ ದೇಸಾಯಿ, ಮೋತಿಲಾಲ್ ಚವ್ವಾಣ, ರುದ್ರು ದೇಸಾಯಿ, ಮಡಿವಾಳಪ್ಪ ಮಿಲ್ಟ್ರಿ, ಹೊನ್ನಕೇಶವ ದೇಸಾಯಿ, ರಾಜು ಮಲಗಲದಿನ್ನಿ, ವಿಜಯಕುಮಾರ ಬಂಡೊಳ್ಳಿ, ಗೌಡಪ್ಪ ಬಾಲಗೌಡ್ರ, ರವಿ ಪುರಾಣಿಕಮಠ, ಸಂಗಮೇಶ ಹೂಗಾರ, ಶರಣು ಕಟ್ಟಿಮನಿ ಸೇರಿದಂತೆ ಇತರರಿದ್ದರು.ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಸರ್ಕಾರ

ಕೊಡೇಕಲ್‌: ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಬಸವೇಶ್ವರ ವೃತ್ತದಲ್ಲಿಯೂ ಹುಬ್ಬಳ್ಳಿ ಘಟನೆ ಖಂಡಿಸಿ ಪ್ರತಿಭಟನೆ ನಡೆಯಿತು.

ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮೋಹನ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಇಂತಹ ಘಟನೆ ನಡೆಯದಂತೆ ಸರ್ಕಾರ ಕೂಡಲೇ ಕ್ರಮಕೊಳ್ಳುವ ಮೂಲಕ ವಿಶ್ವಾಸ ಉಳಿಸಿಕೊಳ್ಳಲಿ ಎಂದರು.

ಮುಖಂಡರಾದ ರಂಗನಾಥ ದೊರಿ, ಬಸವರಾಜ ಭದ್ರಗೋಳ, ಸಂಗಣ್ಣ ದೊರೆ, ರಮೇಶ ಬಿರಾದಾರ, ಶರತ್ ಅಂಗಡಿ ಸೇರಿದಂತೆ ಇತರರಿದ್ದರು.