ಸಾರಾಂಶ
ಕಾಲ್ತುಳಿತ ದುರಂತ ವಿರೋಧಿಸಿ ಮತ್ತು ಸಿಎಂ ಡಿಸಿಎಂ ರಾಜಿನಾಮೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಆರ್ಸಿಬಿ ವಿಜಯೋತ್ಸವ ಸಂದರ್ಭ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ವಿರೋಧಿಸಿ ಮತ್ತು ಸಿಎಂ, ಡಿಸಿಎಂ ರಾಜಿನಾಮೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.ಕಾಲ್ತುಳಿತ ಪ್ರಕರಣದ ಸಾವಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ರಾಜ್ಯ ಸರ್ಕಾರ ಕ್ರೆಡಿಟ್ ಪಡೆಯುವ ಸಲುವಾಗಿ ತರಾತುರಿಯಲ್ಲಿ ವಿಜಯೋತ್ಸವ ಆಚರಣೆಗೆ ಮುಂದಾಯಿತು. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಪೊಲೀಸರ ಸಲಹೆಯನ್ನು ನಿರ್ಲಕ್ಷ್ಯ ಮಾಡಿ, ಪೂರ್ವತಯಾರಿಯನ್ನು ಮಾಡದೇ ವಿಜಯೋತ್ಸವಕ್ಕೆ ಕರೆ ನೀಡಿ, 11 ಯುವ ಜನತೆಯ ಸಾವಿಗೆ ಕಾರಣವಾಗಿದ್ದಾರೆ. ಅಂದು ಘಟನೆ ನಡೆಯಲು ಸರಕಾರದ ನಿರ್ಣಯವೇ ಕಾರಣ. ಆದರೆ ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಬೇರೆ ಬೇರೆಯವರ ಮೇಲೆ ಈ ಸಾವಿನ ಹೊಣೆ ಹೊರಿಸುತ್ತಿರುವುದು ಖಂಡನೀಯ. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು ಸಾವಿನ ಹೊಣೆ ಹೊತ್ತು, ಕೂಡಲೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ವಿಜಯೋತ್ಸವ ಮಾಡುತ್ತೇವೆಂದು ಸರ್ಕಾರ 11 ಜನರನ್ನು ಬಲಿ ತೆಗೆದುಕೊಂಡಿದೆ. ವಿಜಯೋತ್ಸವದಲ್ಲಿ ಸಾವು ಉಂಟಾಗಲು ಸರ್ಕಾರವೇ ಕಾರಣ. ಬಿಜೆಪಿ ಹಿಂದೆ ಇಂತಹ ಕಾರ್ಯಕ್ರಮ ನಡೆಸಿದಾಗ ಇಂತಹ ಘಟನೆ ನಡೆದಿಲ್ಲ. ಪೊಲೀಸರು ಎರಡು ದಿನ ಸಮಯವಕಾಶ ಕೇಳಿದರೂ ಸಮಯ ನೀಡದ ಸರಕಾರ, ಅಹಿತಕರ ಘಟನೆ ನಡೆದ ಸಂದರ್ಭ ಐಪಿಎಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಲ್ತುಳಿದಲ್ಲಿ ಜನತೆ ಸಾವಿಗೀಡಾಗಿದ್ದಾರೆ ಎಂದು ತಿಳಿದಿದ್ದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿಜಯೋತ್ಸವ ರದ್ದು ಮಾಡಲು ನಿರ್ಣಯಿಸಲಿಲ್ಲ. ಹಾಗಾಗಿ ಇವರ ಮೇಲೆ ಕೊಲೆ ಕೇಸ್ ದಾಖಲು ಮಾಡಿ, ರಾಜೀನಾಮೆ ಮಾಡುವ ಕಾರ್ಯವಾಗಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭ ಪ್ರತಿಭಟನಾ ನಿರತರು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಇತರರು ಇದ್ದರು.