ಬೆಳೆ ವಿಮೆ ಕಂಪನಿಗಳಿಂದ ರೈತರಿಗೆ ಮಧ್ಯಂತರ ಪರಿಹಾರ ಹಣ ಕೂಡಲೇ ಬಿಡುಗಡೆ ಮಾಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು

ಶಿಗ್ಗಾಂವಿ: ತಾಲೂಕಿನ ವಿವಿಧ ಸಂಘಟನೆಗಳ ರೈತರು ಸೇರಿಕೊಂಡು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿಗ್ಗಾಂವಿ ಪೊಸ್ಟ್‌ ಆಫೀಸನಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ವೀರ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ಗ್ರೇಡ್ ೨ ತಹಶೀಲ್ದಾರ ದೇವಾನಂದ ವಾಲ್ಮೀಕಿ ಅವರ ಮೂಲಕ ಸಿ.ಎಂ. ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಬೆಳೆಗಳು ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ರೈತರಿಗೆ ಬರ ಪರಿಹಾರ ಒದಗಿಸಬೇಕು. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಇತರ ಪರಿಕರಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬತ್ತ, ಗೋವಿನಜೋಳ, ಸೇರಿದಂತೆ ವಿವಿಧ ಬೇಳೆಗಳು ತೀವ್ರ ಹಾನಿಯಾಗಿವೆ, ಅಲ್ಲದೆ, ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ೫,೫೦೦ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ರೈತರು ಬೆಳೆ ವಿಮೆ ಪಾವತಿಸಿದ್ದರೂ ಬರಗಾಲದ ಪರಿಸ್ಥಿತಿ ಎದುರಾಗಿರುವುದರಿಂದ, ಬೆಳೆ ವಿಮೆ ಕಂಪನಿಗಳಿಂದ ರೈತರಿಗೆ ಮಧ್ಯಂತರ ಪರಿಹಾರ ಹಣ ಕೂಡಲೇ ಬಿಡುಗಡೆ ಮಾಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ರೈತರ ಹಿತದೃಷ್ಟಿಯಿಂದ ಮೂರು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮೂಲಕ ಒತ್ತಾಯಿಸಲಾಗಿದೆ.

ರೈತ ಸಂಘದ ಮುಖಂಡರಾದ ಬಸಲಿಂಗಪ್ಪ ನರಗುಂದ, ಸಂತೋಷ ಪಾಟೀಲ, ಬಸವರಾಜ ಜೇಕಿನಕಟ್ಟಿ, ಮಂಜುನಾಥ ಕಂಕನವಾಡ, ಭಾರತೀಯ ಕ್ರಾಂತಿಕಾರಿ ಕಿಸಾನ ಸೇನಾ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್. ಕುಕನೂರ, ಕನ್ನಡಪರ ಸಂಘಟನೆಯ ಅಧ್ಯಕ್ಷ ದುರ್ಗಪ್ಪ ವಡ್ಡರ, ಸೇರಿದಂತೆ ಹಲವಾರು ಮುಖಂಡರುಗಳು ಮಾತನಾಡಿ ತಕ್ಷಣ ಬರಗಾಲ ಪ್ರದೇಶವೆಂದು ಸಾರಿ ಪರಿಹಾರ ನೀಡಬೇಕು ಎಂದರು,

ಈ ಸಂದರ್ಭದಲ್ಲಿ ಮಹಿಳಾ ರೈತಪರ ಹೊರಾಟಗಾರರಾದ ಶೋಭಾ ಲಕ್ಷ್ಮೇಶ್ವರ, ಸುಶೀಲಾ ಲಕ್ಷ್ಮೇಶ್ವರ, ಪುಷ್ಪಾ ಹುಡೇದ, ನೀಲವ್ವ ವಾಲ್ಮೀಕಿ, ನೇತ್ರಾ ಮರಿಗೌಡ್ರ, ಶೋಭಾ ಶಿರೂರ, ಮಂಜುಳಾ ಕಳಸದ, ಪಾರವ್ವ ಮರಿಗೌಡ್ರ, ಹಾವೇರಿ ಘಟಕದ ಪ್ರದಾನ ಕಾರ್ಯದರ್ಶಿ ನಿಂಗಪ್ಪ ವಾಲೀಕಾರ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಶಬ್ಬೀರ್ ಎಚ್. ಕೆಆರ್‌ಎಸ್ ಪಕ್ಷದ ಸರ್ವ ಸದಸ್ಯರುಗಳು, ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರುಗಳು ಇದ್ದರು.