ಸಾರಾಂಶ
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದ ವತಿಯಿಂದ ಸೋಮವಾರ ನಗರದ ದರ್ಬೆ ವೃತ್ತದ ಬಳಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾದ ಲ್ಯಾಂಡ್ ಜಿಹಾದ್ ಹಾಗೂ ವಕ್ಫ್ ಅಕ್ರಮ ವಿರೋಧಿ ಪ್ರತಿಭಟನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಸಿದ್ದರಾಮಯ್ಯ ನೇತೃತ್ವದ ಸರಕಾರ ಮತಬ್ಯಾಂಕ್ಗಾಗಿ ಮುಸ್ಲಿಂರ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದು, ವಕ್ಫ್ ಹೆಸರಲ್ಲಿ ಬಡವರ ಭೂಮಿ ಕಬಳಿಸುವ ಪ್ರಯತ್ನದಲ್ಲಿದೆ. ಅಲ್ಪಸಂಖ್ಯಾತರು ಅಧಿಕವಿರುವ ಜಿಲ್ಲೆಗಳಿಗೆ ತೆರಳಿ ವಕ್ಫ್ ಹೆಸರಲ್ಲಿ ರೈತರ ಹಾಗೂ ಬಡವರ ಭೂಮಿ ಕಬಳಿಸುವುದರ ಜೊತೆಗೆ ಜನತೆಯನ್ನು ಕತ್ತಲಿಗೆ ತಳ್ಳುತ್ತಿದೆ ಎಂದು ರಾಜ್ಯ ಬಿಜೆಪಿ ಪದಾಧಿಕಾರಿ ವಿಶ್ವೇಶ್ವರ ಭಟ್ ಬಂಗಾರಡ್ಕ ಆರೋಪಿಸಿದ್ದಾರೆ.ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದ ವತಿಯಿಂದ ಸೋಮವಾರ ನಗರದ ದರ್ಬೆ ವೃತ್ತದ ಬಳಿ ನಡೆದ ರೈತ ವಿರೋಧಿ ಕಾಂಗ್ರೆಸ್ ಸರ್ಕಾದ ಲ್ಯಾಂಡ್ ಜಿಹಾದ್ ಹಾಗೂ ವಕ್ಫ್ ಅಕ್ರಮ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದೊಳಗೇ ಆಕ್ರೋಶ ವ್ಯಕ್ತವಾಗಿರುವುದು ಕಂಡು ಬಂದಿದ್ದು, ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗ ವಕ್ಫ್ ನಂತಹ ದುರುಪಯೋಗದ ಸಂಗತಿ ಬಿಜೆಪಿಯ ಅಜೆಂಡಾದಲ್ಲೇ ಇರಲಿಲ್ಲ. ಕಾಂಗ್ರೆಸ್ ಸರ್ಕಾರದ ಈ ಲ್ಯಾಂಡ್ ಜಿಹಾದಿಯನ್ನು ಬಿಜೆಪಿ ಸಹಿತ ಸಾರ್ವಜನಿಕರು ಖಂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿರಿಯ ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಬೂಡಿಯಾರ್ ರಾಧಾಕೃಷ್ಣ ರೈ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಮಾರ್ತ, ಮುಕುಂದ ಬಜತ್ತೂರು, ಜಿಲ್ಲಾ ಪ್ರಕೋಷ್ಠ ಸಂಚಾಲಕ ಚಂದ್ರಶೇಖರ ಬಪ್ಪಳಿಗೆ, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ., ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಗ್ರಾಮಾಂತರ ಮಂಡಲ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾ ಆರ್.ಗೌರಿ, ಬಜರಂಗದಳದ ಮುರಳಿಕೃಷ್ಣ ಹಸಂತಡ್ಕ, ನಿತೇಶ್ ಕುಮಾರ್ ಶಾಂತಿವನ, ನಗರಸಭೆ ಅಧ್ಯಕ್ಷೆ ಲೀಲಾವತಿ ಮತ್ತಿತರರು ಇದ್ದರು.
ಪ್ರತಿಭಟನೆ ಬಳಿಕ ಪುತ್ತೂರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.