ಸಾರಾಂಶ
ರಾಜ್ಯದಲ್ಲಿ 21 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಶಿಥಿಲಗೊಂಡಿವೆ, ಅದರಲ್ಲಿ ಮೈಸೂರಿನ 1700 ಶಾಲೆಗಳು ಕೂಡ ಸೇರಿದೆ. ಪಾಠ ಕೇಳಲು ಶಿಕ್ಷಕರು ಎಷ್ಟು ಮುಖ್ಯವೋ ಅದರಂತೆ ಸುಸಜ್ಜಿತ ಕಟ್ಟಡವು ಕೂಡ ಮುಖ್ಯ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಂಸಿಸಿ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡಿರುವ ಕಟ್ಟಡವನ್ನು ದುರಸ್ತಿಗೊಳಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಎಐಡಿಎಸ್ಒ ನೇತೃತ್ವದಲ್ಲಿ ಶನಿವಾರ ಪ್ರತಿಭಟನಾ ಸಭೆ ನಡೆಯಿತು.ಈ ವೇಳೆ ಎಐಡಿಎಸ್ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಈ ಶಾಲೆಯ ಕಟ್ಟಡ ಶಿಥಿಲಗೊಂಡು ಮಳೆ ಬಂದಾಗ ಸೋರುತ್ತಿದೆ. ವಿದ್ಯಾರ್ಥಿಗಳು ಭಯದಿಂದ ಪಾಠವನ್ನು ಕೇಳುವಂತಾಗಿದೆ, ಇದರಿಂದಾಗಿ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದರು.ರಾಜ್ಯದಲ್ಲಿ 21 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಶಿಥಿಲಗೊಂಡಿವೆ, ಅದರಲ್ಲಿ ಮೈಸೂರಿನ 1700 ಶಾಲೆಗಳು ಕೂಡ ಸೇರಿದೆ. ಪಾಠ ಕೇಳಲು ಶಿಕ್ಷಕರು ಎಷ್ಟು ಮುಖ್ಯವೋ ಅದರಂತೆ ಸುಸಜ್ಜಿತ ಕಟ್ಟಡವು ಕೂಡ ಮುಖ್ಯ. ಜೊತೆಗೆ ಶಾಲೆಯ ಶೌಚಾಲಯದಲ್ಲಿ ಬಾಗಿಲು ಇಲ್ಲ ಮತ್ತು ಸ್ವಚ್ಛವಾಗಿಲ್ಲ. ಇದನ್ನು ಬಳಸಲು ಬಹಳ ತೊಂದರೆಯಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಬೇಡಿಕೆಗಳುಶಿಥಿಲಗೊಂಡಿರುವ ಕಟ್ಟಡಗಳನ್ನು ಹಾಗೂ ಕಟ್ಟಡಗಳ ಮೇಲ್ಛಾವಣಿಯನ್ನು ಈ ಕೂಡಲೇ ದುರಸ್ತಿಗೊಳಿಸಬೇಕು. ಶೌಚಾಲಯವನ್ನು ದುರಸ್ತಿಗೊಳಿಸಿ. ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆಟದ ಮೈದಾನವನ್ನು ನಿರ್ಮಾಣ ಮಾಡಬೇಕು. ಈ ಎಲ್ಲಾ ಸಮಸ್ಯೆಗಳೆಡೆಗೆ ಸೂಕ್ತ ಗಮನ ಹರಿಸಿ ತ್ವರಿತವಾಗಿ ಪರಿಹರಿಸಬೇಕು ಎಂದು ಎಂಸಿಸಿ ಕಾಲೋನಿಯ ಜ್ಯೋತಿ ಯುವಕರ ಸಂಘ ಹಾಗೂ ಎಐಡಿಎಸ್ಒ ಆಗ್ರಹಿಸಿದೆ.ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಚಂದ್ರಕಲಾ, ಜಿಲ್ಲಾ ಕಾರ್ಯದರ್ಶಿ ನಿತಿನ್, ಪದಾಧಿಕಾರಿಗಳಾದ ಚಂದನಾ, ಚಂದ್ರಿಕಾ, ಹೇಮಾ, ಸುಷ್ಮಾ, ಜ್ಯೋತಿ ಯುವಕರ ಸಂಘದ ಪದಾಧಿಕಾರಿಗಳು ಇದ್ದರು.