ಇಂದ್ರಾಳಿ ರೈಲ್ವೆ ಮೇಲ್ಸೇತುವೆ ವಿಳಂಬ ವಿರೋಧಿಸಿ 29ರಂದು ಪ್ರತಿಭಟನೆ

| Published : Oct 27 2024, 02:15 AM IST

ಇಂದ್ರಾಳಿ ರೈಲ್ವೆ ಮೇಲ್ಸೇತುವೆ ವಿಳಂಬ ವಿರೋಧಿಸಿ 29ರಂದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೆದ್ದಾರಿಯಲ್ಲಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ ವಿಳಂಬವನ್ನು ವಿರೋಧಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ಅ.29ರಂದು ಬೆಳಗ್ಗೆ 10ಗಂಟೆಗೆ ಸೇತುವೆ ಬಳಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿವೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ - ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ ವಿಳಂಬವನ್ನು ವಿರೋಧಿಸಿ ಇಂದ್ರಾಳಿ ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ಅ.29ರಂದು ಬೆಳಗ್ಗೆ 10ಗಂಟೆಗೆ ಸೇತುವೆ ಬಳಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ಹಮ್ಮಿಕೊಂಡಿವೆ ಎಂದು ಸಮಿತಿ ಪ್ರಮುಖ ಅಮೃತ್ ಶೆಣೈ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಸೇತುವೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಹಲವು ವರ್ಷಗಳು ಕಳೆದಿವೆ. ಇದರಿಂದ ಇಲ್ಲಿ ಅಪಘಾತಗಳಾಗಿ ಸಾವು ನೋವುಗಳು ಸಂಭವಿಸುತ್ತಿದೆ. ಅಲ್ಲದೆ ದಿನಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ. ಇಲ್ಲಿಯೇ ಪಕ್ಕದಲ್ಲಿರುವ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೂ ಆತಂಕಕಾರಿಯಾಗಿ ಪರಿಣಮಿಸಿದೆ. ಪಾದಾಚಾರಿಗಳಿಗೂ ಮತ್ತು ಧಾರ್ಮಿಕ ಕೇಂದ್ರಗಳಿಗೆ ಬರುವ ಭಕ್ತಾದಿಗಳಿಗೂ, ಬೇರೆ ಬೇರೆ ಜಿಲ್ಲೆಗಳಿಂದ ಮಣಿಪಾಲ ಆಸ್ಪತ್ರೆಗೆ ಬರುವ ರೋಗಿಗಳಿಗೂ ಬಹಳ ತೊಂದರೆ ಆಗುತ್ತಿದೆ. ಒಟ್ಟಾರೆ ಈ ಕಾಮಗಾರಿ ವಿಳಂಬ ದಿಂದ ಉಡುಪಿಯ ಆರ್ಥಿಕತೆಗೆ ಪರೋಕ್ಷವಾಗಿ ಹೊಡೆತವಾಗಿದೆ ಎಂದು ಅವರು ಆರೋಪಿಸಿದರು.

ಈ ಪ್ರತಿಭಟನೆಯ ಮೂಲಕ ಜನಜಾಗೃತಿ ಮೂಡಿಸುವುದಲ್ಲದೆ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಲಾಗುವುದು. ಮುಂದಿನ ಮೂರು ತಿಂಗಳಲ್ಲಿ ಅಂದರೆ ಜ.29ರೊಳಗೆ ಈ ಕಾಮಗಾರಿಯನ್ನು ಮುಗಿಸಿ ಚತುಷ್ಪಥ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಬೇಕು. ಇಲ್ಲದಿದ್ದರೆ ಜ.30ರಂದು ಉಗ್ರ ಹೋರಾಟ ನಡೆಸಲಾಗುವುದು. ಈ ಕುರಿತ ಮನವಿಯನ್ನು ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಜ್ಯೋತಿ ಹೆಬ್ಬಾರ್, ಅಬ್ದುಲ್ ಅಝೀಝ್ ಉದ್ಯಾವರ, ಬಿ.ಕುಶಲ ಶೆಟ್ಟಿ, ಅನ್ಸಾರ್ ಅಹ್ಮದ್, ಲತಾ ಆನಂದ ಶೇರಿಗಾರ್, ರಮೇಶ್ ಕಾಂಚನ್, ಚಂದ್ರ ಮೋಹನ್, ಸುರೇಶ್ ಶೆಟ್ಟಿ ಬನ್ನಂಜೆ, ಜಾನಕಿ ಕೃಷ್ಣ ನಾಯ್ಕ, ರಮೇಶ್ ತಿಂಗಳಾಯ, ಗಣೇಶ್ ನೆರ್ಗಿ, ಮಹಾಬಲ ಕುಂದರ್, ಬಿ.ಶ್ರೀಧರ್, ಕೀರ್ತಿ ಶೆಟ್ಟಿ ಅಂಬಲಪಾಡಿ, ಪೀರು ಮುಹಮ್ಮದ್, ಜಯನ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.