ಸಾರಾಂಶ
ಹಾವೇರಿ: ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ಅಂಗವಾಗಿ ಜೂ. 16ರಂದು ರಾಜ್ಯಾದ್ಯಂತ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಜಿಲ್ಲಾಧಿಕಾರಿ ಕಚೇರಿ, ಎಲ್ಲ ತಾಲೂಕಿನ ತಹಸೀಲ್ದಾರ್ ಕಚೇರಿಗಳ ಎದುರು ಧರಣಿ ನಡೆಸಲಾಗುವುದು ಎಂದು ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 60 ವರ್ಷ ಮೇಲ್ಪಟ್ಟ ಯಾವುದೇ ನಾಗರಿಕರು ಹಿರಿಯ ನಾಗರಿಕರಾಗಿರುತ್ತಾರೆ. ದೇಶದಲ್ಲಿ 20 ಕೋಟಿ ಹಿರಿಯ ನಾಗರಿಕರು ಇದ್ದರೆ, ರಾಜ್ಯದಲ್ಲಿ 80 ಲಕ್ಷ ಇದ್ದೇವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿರುವ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ವಿಶ್ವಸಂಸ್ಥೆಯು ಪ್ರತಿವರ್ಷ ಜೂ. 15ರಂದು ಹಿರಿಯ ನಾಗರಿಕರ ದೌರ್ಜನ್ಯ ತಡೆ ದಿನಾಚರಣೆ ನಡೆಸಿ, ಸಮಾಜ ಹಾಗೂ ಹಿರಿಯ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಹೇಳಿದೆ. ಆದರೆ ಪ್ರಸ್ತುತವಾಗಿ ಸರ್ಕಾರ ಹಾಗೂ ಸಮಾಜಗಳು ವಿಶ್ವಸಂಸ್ಥೆಯ ಈ ಘೋಷಣೆಯ ಉದ್ದೇಶವನ್ನು ಅರಿತುಕೊಳ್ಳದ ಕಾರಣ ಜೂ. 16ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಕಚೇರಿ ಎದುರು ಸತ್ಯಾಗ್ರಹ ಹಮ್ಮಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.ಪ್ರಮುಖವಾಗಿ ಕೇಂದ್ರ ಸರ್ಕಾರಕ್ಕೆ ರಾಷ್ಟ್ರದ ಎಲ್ಲ ಹಿರಿಯ ನಾಗರಿಕರನ್ನು ದೇಶದ ಸಂಪತ್ತು ಎಂದು ಘೋಷಣೆ ಮಾಡಬೇಕು. ಆರ್ಥಿಕವಾಗಿ ದುರ್ಬಲರಾದ ಎಲ್ಲ ಹಿರಿಯ ನಾಗರಿಕರಿಗೆ ಮಾಸಿಕ ₹10 ಸಾವಿರ ವೃದ್ದಾಪ್ಯ ವೇತನ ನೀಡಬೇಕು. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕವಾದ ಮಂತ್ರಾಲಯ, ಸಚಿವರನ್ನು ನೇಮಕ ಮಾಡಬೇಕು. ಹಿರಿಯ ನಾಗರಿಕರ ತಡೆಹಿಡಿದ ರೈಲ್ವೆ ರಿಯಾಯಿತಿ ತಕ್ಷಣ ಆರಂಭಿಸಬೇಕು. ಆಯುಷ್ಮಾನ್ ಭಾರತ ಹಿರಿಯ ನಾಗರಿಕರ ಆರೋಗ್ಯ ವಿಮೆ ಕಾರ್ಡನ್ನು ಸಕ್ರಿಯಗೊಳಿಸುವಂತೆ ಒತ್ತಾಯಿಸಲಾಗುವುದು ಎಂದರು.ಧಾರವಾಡ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಡಾ. ಸುನಂದಾ ಬೆನ್ನೂರ, ಡಿ.ಟಿ. ಪಾಟೀಲ, ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಈರಣ್ಣ ಬೆಳವಡಿ ಇದ್ದರು.18ರಂದು ಬೆಂಗಳೂರಿನಲ್ಲಿ ವಜ್ರಮಹೋತ್ಸವ ಸಂಭ್ರಮ
ರಾಣಿಬೆನ್ನೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘವು ವಿದ್ಯುತ್ ನಿಗಮದ ನೌಕರರ ಹಿತಾಸಕ್ತಿಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಭಾಕರ ಎಂ.ಎಸ್. ತಿಳಿಸಿದರು.ನಗರದ ಹೆಸ್ಕಾ ವಿಭಾಗೀಯ ಕಚೇರಿಯಲ್ಲಿ ಬುಧವಾರ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ ಪ್ರಯುಕ್ತ ಆಯೋಜಿಸಿದ್ದ ಗೇಟ್(ದ್ವಾರ) ಸಭೆಯಲ್ಲಿ ಅವರು ಮಾತನಾಡಿದರು.ನೌಕರರ ಸಂಘ 60 ಸಂವತ್ಸರಗಳನ್ನು ಪೂರೈಸಿರುವ ಸವಿನೆನಪಿಗಾಗಿ ಜೂ. 18ರಂದು ಬೆಂಗಳೂರಿನಲ್ಲಿ ವಜ್ರಮಹೋತ್ಸವ ಸಂಭ್ರಮ ಸಮಾರಂಭ ಆಯೋಜಿಸಿದೆ. ಇದಕ್ಕಾಗಿ ಹೆಸ್ಕಾಂ ನೌಕರರಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದ್ದು, ಎಲ್ಲರೂ ಸಭೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕರೆ ನೀಡಿದರು.ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋಪಾಲ ಲಮಾಣಿ ಮಾತನಾಡಿದರು. ಕೇಂದ್ರ ಸಮಿತಿ ಸದಸ್ಯ ಎಂ.ಬಿ. ಸಣ್ಣಿಂಗಮ್ಮನವರ ಅಧ್ಯಕ್ಷತೆ ವಹಿಸಿದ್ದರು.ವಿಭಾಗೀಯ ಲೆಕ್ಕಾಧಿಕಾರಿ ರಾಜು, ಲೆಕ್ಕಾಧಿಕಾರಿ ಪುಷ್ಪಾವತಿ, ಕಲ್ಯಾಣ ಸಮಿತಿ ಸದಸ್ಯ ಎಸ್.ಬಿ. ಹೊಳಿಯಣ್ಣನವರ, ಸ್ಥಳೀಯ ಸಮಿತಿ ಅಧ್ಯಕ್ಷ ಮಂಜು ಬಾರ್ಕಿ, ಬೀರಪ್ಪ ತಿಪ್ಪಣ್ಣನವರ, ಉಪಾಧ್ಯಕ್ಷ ತಿಪ್ಪೇಶ ನಾಯ್ಕ್, ಉಮೇಶ ಹನುಮನಹಳ್ಳಿ, ಕೆ. ನದಾಫ್ ಹಾಗೂ ಸ್ಥಳೀಯ ಸಮಿತಿ, ಕಲ್ಯಾಣ ಸಮಿತಿ ಎಲ್ಲ ಪದಾಧಿಕಾರಿಗಳು, ವಿಭಾಗ ವ್ಯಾಪ್ತಿಯ ಎಲ್ಲ ಅಧಿಕಾರಿಗಳು, ನೌಕರರು, ನಿವೃತ್ತ ನೌಕರರು ಇದ್ದರು.