ಸಾರಾಂಶ
ಕನಕಗಿರಿ/ನವಲಿ: ಅಕ್ರಮ ಮರಳು ಗಣಿಗಾರಿಕೆಯಲ್ಲಿ ಶಾಮೀಲಾದ್ದಾರೆಂದು ಆರೋಪ ಹೊತ್ತ ಕಂದಾಯ ನಿರೀಕ್ಷಕ ಹನುಮಂತಪ್ಪ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ನವಲಿ ಗ್ರಾಪಂ ಉಪಾಧ್ಯಕ್ಷ ನಾಗರಾಜ ತಳವಾರ ವಿಷದ ಬಾಟಲಿ ಹಿಡಿದು ಬೆಂಬಲಿಗರೊಂದಿಗೆ ಬುಧವಾರ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಅವರು, ಹಲವು ತಿಂಗಳುಗಳಿಂದ ಕಂದಾಯ ನಿರೀಕ್ಷಕ ನವಲಿ ಸೀಮಾ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ಮರಳು ದಂಧೆಯಲ್ಲಿ ಶಾಮೀಲಾಗಿದ್ದಾರೆ. ಮರಳುಗಾರಿಕೆ ಮಾಡುವವರನ್ನು ಬಿಟ್ಟು ದಂಧೆಯಲ್ಲಿ ಭಾಗಿಯಾಗದವರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅದೇ ಸರ್ವೆ ನಂಬರಲ್ಲಿ ಅಕ್ರಮ ಮರುಳು ದಂಧೆಯಲ್ಲಿ ಭಾಗಿಯಾದರ ಮೇಲೆ ಕೇಸ್ ದಾಖಲಿಸಿಲ್ಲ. ಜಾತಿ ಬಗ್ಗೆ ಕೀಳಾಗಿ ಮಾತನಾಡಿದ ಅವರನ್ನು ವಾರದೊಳಗೆ ಅಮಾನತು ಮಾಡಬೇಕು. ಇಲ್ಲವಾದರೆ ತಹಶೀಲ್ದಾರ್ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ ವಿಶ್ವನಾಥ ಮುರುಡಿ, ಸಿಪಿಐ ಎಂ.ಡಿ. ಫೈಜುಲ್ಲಾ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ್ದಾರೆ. ವಾರದೊಳಗಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು.ನವಲಿ ಗ್ರಾಮದ ಸರ್ವೇ ನಂ. ೨೩೬/೧,೨,೩,೪,೫ ರಲ್ಲಿ ಸರ್ಕಾರಿ ಜಮೀನಿದೆ. ಇದರಲ್ಲಿ ನನ್ನ ಹೆಸರಿನಲ್ಲಿ ಭೂಮಿ ಇಲ್ಲ. ಆದರೆ ಕಂದಾಯ ನಿರೀಕ್ಷಕ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾರೆ ಎನ್ನುತ್ತಾರೆ ಗ್ರಾಮಸ್ಥ ವಿರೇಶ ಹರಿಜನ.ಈ ಸಂದರ್ಭದಲ್ಲಿ ಶಂಕ್ರಪ್ಪ ಹರಿಜನ, ಭೀಮಣ್ಣ ದೊಡ್ಮನಿ, ಸಿದ್ದಪ್ಪ ತಳವಾರ, ಸದ್ದಾಂಹುಸೇನ, ಶಾಹೀದ್, ಬೋಗೇಶ, ನಿರುಪಾದಿ ಕಬ್ಬೇರ, ರವಿ ಉಪಲಾಪುರ ಇದ್ದರು.