ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಅಂತಾರಾಷ್ಟ್ರೀಯ ಕಾನೂನು, ಯುಎನ್ ಘೋಷಿತ ರಾಷ್ಟ್ರಗಳ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಸಂಪೂರ್ಣ ವಿರೋಧವಾಗಿದೆ. ಒಂದು ದೇಶದ ರಾಜಕೀಯ ವ್ಯವಸ್ಥೆ ಹಾಗೂ ನಾಯಕತ್ವವನ್ನು ಮತ್ತೊಂದು ದೇಶ ತನ್ನ ಸೈನಿಕ ಶಕ್ತಿ, ಬಲವಂತ ಅಥವಾ ಅಪಹರಣದ ಮೂಲಕ ನಿರ್ಧರಿಸುವುದು ಸಾಮ್ರಾಜ್ಯವಾದಿ ಮನೋಭಾವದ ಅಪಾಯಕಾರಿ ರೂಪವಾಗಿದ್ದು, ಇದು ಜಾಗತಿಕ ಶಾಂತಿ ಮತ್ತು ವಿಶ್ವದ ಸ್ಥಿರತೆಗೆ ಗಂಭೀರ ಬೆದರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ವೆನಿಜುವೆಲಾದ ಅಧ್ಯಕ್ಷ ನಿಕೋಲಾಸ್ ಮಡುರೋ ಮತ್ತು ಅವರ ಪತ್ನಿಯನ್ನು ಏಕಾಏಕಿ ಅಪಹರಿಸುವ ಮೂಲಕ ಒಂದು ಸ್ವತಂತ್ರ ರಾಷ್ಟ್ರದ ಸಾರ್ವಭೌಮತೆಯ ಮೇಲೆ ದಾಳಿ ನಡೆಸಿರುವ ಅಮೆರಿಕ ಸರ್ಕಾರದ ಕೃತ್ಯವನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಮತ್ತು ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಮತ್ತಿತರೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಅಕ್ರಮ ಹಾಗೂ ಏಕಪಕ್ಷೀಯ ಕ್ರಮಕ್ಕೆ ಹೊಣೆಗಾರರಾಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ ಅಂತಾರಾಷ್ಟ್ರೀಯ ಕಾನೂನು, ಯುಎನ್ ಘೋಷಿತ ರಾಷ್ಟ್ರಗಳ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಸಂಪೂರ್ಣ ವಿರೋಧವಾಗಿದೆ. ಒಂದು ದೇಶದ ರಾಜಕೀಯ ವ್ಯವಸ್ಥೆ ಹಾಗೂ ನಾಯಕತ್ವವನ್ನು ಮತ್ತೊಂದು ದೇಶ ತನ್ನ ಸೈನಿಕ ಶಕ್ತಿ, ಬಲವಂತ ಅಥವಾ ಅಪಹರಣದ ಮೂಲಕ ನಿರ್ಧರಿಸುವುದು ಸಾಮ್ರಾಜ್ಯವಾದಿ ಮನೋಭಾವದ ಅಪಾಯಕಾರಿ ರೂಪವಾಗಿದ್ದು, ಇದು ಜಾಗತಿಕ ಶಾಂತಿ ಮತ್ತು ವಿಶ್ವದ ಸ್ಥಿರತೆಗೆ ಗಂಭೀರ ಬೆದರಿಕೆಯಾಗಿದೆ.

ಜನರಿಂದ ಆಯ್ಕೆಯಾದ ರಾಷ್ಟ್ರಾಧ್ಯಕ್ಷನನ್ನು ಅಪಹರಿಸುವುದು ಅಂತಾರಾಷ್ಟ್ರೀಯ ಅಪರಾಧವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ವಿಶ್ವ ಸಮುದಾಯ ಮೌನ ವಹಿಸುವುದು ಭವಿಷ್ಯದಲ್ಲಿ ಇನ್ನಷ್ಟು ದೌರ್ಜನ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಅಮೆರಿಕ ಸರ್ಕಾರವು ತಕ್ಷಣವೇ ಈ ಕಾನೂನುಬಾಹಿರ ಕ್ರಮವನ್ನು ನಿಲ್ಲಿಸಿ, ವೆನಿಜುವೆಲಾದ ಅಧ್ಯಕ್ಷ ನಿಕೋಲಾಸ್ ಮಧುರೋ ಅವರನ್ನು ಗೌರವಪೂರ್ವಕವಾಗಿ ಬಿಡುಗಡೆ ಮಾಡಿ ವೆನಿಜುವೆಲಾದ ಸಾರ್ವಭೌಮತೆಯನ್ನು ಗೌರವಿಸಬೇಕು ಹಾಗೂ ಈ ಘಟನೆಯ ಸಂಪೂರ್ಣ ಹೊಣೆಗಾರಿಕೆಯನ್ನು ಹೊರುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ನ್ಯಾಯ, ಶಾಂತಿ ಮತ್ತು ರಾಷ್ಟ್ರಗಳ ಸ್ವಯಂನಿರ್ಣಯ ಹಕ್ಕಿನ ಪರವಾಗಿ ನಿಲ್ಲುವ ಎಲ್ಲಾ ಪ್ರಗತಿಪರ ಶಕ್ತಿಗಳು ಈ ದಾಳಿಯನ್ನು ಏಕಸ್ವರದಲ್ಲಿ ಖಂಡಿಸಬೇಕಿದೆ.

ಈ ವಿಚಾರದಲ್ಲಿ ಭಾರತ ಸರ್ಕಾರ ದೃಢವಾದ ನಿಲುವನ್ನು ಕೈಗೊಂಡು ಸಾಮ್ರಾಜ್ಯಶಾಹಿ ನೀತಿಯನ್ನು ಬಲವಾಗಿ ಖಂಡಿಸಬೇಕು. ಇದೇ ಸಂದರ್ಭದಲ್ಲಿ ಅಮೆರಿಕ ಆಮದು ಸುಂಕದ ಮೇಲೆ ಶೇ. ೫೦೦ರಷ್ಟು ಹೆಚ್ಚಳ ಮಾಡಿರುವುದು ಭಾರತದಂತಹ ಕೃಷಿ ಉತ್ಪನ್ನಗಳ ಮೇಲೆ ದೊಡ್ಡಮಟ್ಟದ ದುಷ್ಪರಿಣಾಮ ಬೀರುತ್ತದೆ. ಕೂಡಲೇ ಇದನ್ನು ಕೈಬಿಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್‌, ಸಾಹಿತಿಗಳಾದ ಮೇಟಿಕೆರೆ ಹಿರಿಯಣ್ಣ, ರೈತ ಮುಖಂಡರಾದ ಎಚ್.ಎಸ್. ಮಂಜುನಾಥ್, ವಾಸುದೇವ್ ಕಲ್ಕೆರೆ, ತೇಜಸ್ ಗೌಡ, ಲೋಕೇಶ್, ದೊರೆ, ಮಂಜೇಗೌಡ ಮತ್ತಿತರರು ಪಾಲ್ಗೊಂಡಿದ್ದರು.

==ಫೋಟೋ:

ಸಿಐಟಿಯು ಮತ್ತಿತರೆ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.