ಸಾರಾಂಶ
ಹಾವೇರಿ: ಪೋಷಣ ಅಭಿಯಾನ, ಬೇಟಿ ಬಚಾವೋ ಬೇಟಿ ಪಢಾವೋ ಅನುಷ್ಠಾನದ ನಂತರ ಜಿಲ್ಲೆಯಲ್ಲಿ ಲಿಂಗಾನುಪಾತ ಸುಧಾರಣೆ, ರಕ್ತ ಹೀನತೆ, ಅಪೌಷ್ಟಿಕತೆ ನಿವಾರಣೆ ಪ್ರಮಾಣದ ನಿಖರ ಅಂಕಿ-ಅಂಶಗಳು ಹಾಗೂ ಪ್ರತಿ ಮಗುವಿನ ಇತಿಹಾಸದ ಜತೆಗೆ ಲೈನ್ಲಿಸ್ಟ್ ಸಲ್ಲಿಸಲು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ, ಬೇಟಿ ಬಚಾವೋ ಬೇಟಿ ಬಢಾವೋ, ಮಕ್ಕಳ ರಕ್ಷಣಾ ಘಟಕದ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಪೌಷ್ಟಿಕ ಮಕ್ಕಳ ಸಂಖ್ಯೆ ಮೊದಲೆಷ್ಟಿತ್ತು, ಈ ಕಾರ್ಯಕ್ರಮಗಳ ಅನುಷ್ಠಾನದ ನಂತರ ಸುಧಾರಣೆ ಎಷ್ಟು ಪ್ರಮಾಣದಲ್ಲಾಗಿದೆ ಎಂಬ ಮಾಹಿತಿ ನೀಡಿ ಎಂದರು.ಅಪೌಷ್ಟಿಕತೆಗೆ ಕಾರಣಗಳೇನು, ಕುಟುಂಬದ ಇತಿಹಾಸ, ಮಕ್ಕಳ ಆಹಾರ ಕ್ರಮಗಳೇನು, ನಿಖರವಾದ ಮಾಹಿತಿಯನ್ನು ತಾಲೂಕಾವಾರು ಹೊಂದಬೇಕು. ಮುಂದಿನ ಸಭೆಗಳಲ್ಲಿ ಅತ್ಯಂತ ವಾಸ್ತವ ನೆಲೆಯ ವಿಶ್ಲೇಷಣಾತ್ಮಕ ಮಾಹಿತಿ ಸಲ್ಲಿಸಬೇಕು ಎಂದರು.
೬ರಿಂದ ೫೯ ವರ್ಷದ ವಯೋಮಾನದವರು ಹೊಂದಿರುವ ರಕ್ತ ಹೀನತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಮನ್ವಯದಿಂದ ಅಭಿಯಾನದ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಕಡಿಮೆ ತೂಕದ ಮಕ್ಕಳ ಜನನ ಕಡಿಮೆಗೊಳಿಸಲು ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮ ಆಯೋಜಿಸಿ, ತಾಯಂದಿರಿಗೆ ಅರಿವು ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.ಪೌರಕಾರ್ಮಿಕರು ಹಾಗೂ ನರೇಗಾ ಕೆಲಸದಲ್ಲಿ ನಿರತರಾದವರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಬೇಕು. ನರೇಗಾ ಸೈಟ್ನಲ್ಲೇ ರಕ್ತತಪಾಸಣೆ ಶಿಬಿರಗಳನ್ನು ಕೈಗೊಳ್ಳಬೇಕು. ರಕ್ತಹೀನತೆ ಕಂಡು ಬಂದವರ ಆಹಾರ ಕ್ರಮಗಳ ಕುರಿತಂತೆ ಮಾಹಿತಿ ಪಡೆಯಬೇಕು. ಸುಧಾರಣೆಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಲಿಂಗಾನುಪಾತ ಹೆಚ್ಚಳ: ಬೇಟಿ ಬಚಾವೋ ಬೇಟಿ ಪಢಾವೋ ಕಾರ್ಯಕ್ರಮದ ಅನುಷ್ಠಾನಕ್ಕೆ ಬರುವ ಮುಂಚೆ ಹೆಣ್ಣುಮಗುವಿನ ಲಿಂಗಾನುಪಾತದ ಪ್ರಮಾಣ, ಕಾರ್ಯಕ್ರಮದ ಅನುಷ್ಠಾನದ ನಂತರ ಲಿಂಗಾನುಪಾತದ ಪ್ರಮಾಣ ಕುರಿತಾಗಿ ವರ್ಷವಾರು ನಿಖರವಾದ ಅಂಕಿ-ಸಂಖ್ಯೆ ನೀಡಬೇಕು. ಲಿಂಗಾನುಪಾತ ಸುಧಾರಣೆ ಕುರಿತಂತೆ ಮಾಹಿತಿ ಸಲ್ಲಿಸುವಂತೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಿಗೆ ಸಲಹೆ ನೀಡಿದರು.ಮಕ್ಕಳ ಸಹಾಯವಾಣಿ ೧೦೯೮ಕ್ಕೆ ಬಂದ ಕರೆಗಳ ವಿವರ ಪರಿಶೀಲಿಸಿದ ಅವರು, ಯಾವ ರೀತಿಯ ನೆರವು ಕೋರಿ ಸಹಾಯವಾಣಿಗೆ ಹೆಚ್ಚು ಕರೆಗಳು ಬರುತ್ತಿವೆ. ಕರೆಗಳ ಸ್ವೀಕರಿಸಿದ ನಂತರ ಸಿಬ್ಬಂದಿಗಳು ತಕ್ಷಣ ಸ್ಪಂದಿಸುವ ಜತೆಗೆ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಬೇಕು. ಮಾಹಿತಿ ಪಡೆದ ಇಲಾಖಾವಾರು ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಮುಂದಿನ ಸಭೆಗಳಿಗೆ ಕೈಗೊಂಡ ಕ್ರಮಗಳ ಕುರಿತಂತೆ ಅನುಪಾಲನಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.
ಮಕ್ಕಳ ಸಹಾಯವಾಣಿಗೆ ಹೆಚ್ಚಾಗಿ ಬಾಲ್ಯವಿವಾಹ, ದೈಹಿಕ ನಿಂದನೆ, ಪ್ರಾಯೋಜಕತ್ವಕ್ಕೆ ಸಂಬಂಧಿಸಿದ ಕರೆಗಳು, ಶಿಕ್ಷಣಕ್ಕೆ ಸಂಬಂಧಿಸಿದ ಕರೆಗಳು, ಬಾಲ ಕಾರ್ಮಿಕ, ಭಿಕ್ಷಾಟಣೆ, ಕೌಟುಂಬಿಕ, ಚಿಂದಿ ಆಯುವ ಮಕ್ಕಳಿಗೆ ಸಂಬಂಧಿಸಿದ ಕರೆ, ವೈದ್ಯಕೀಯ ಸೌಲಭ್ಯ, ಹಾಸ್ಟೇಲ್ ಸೌಲಭ್ಯ, ಮಾನಸಿಕ ನಿಂದನೆ, ಪೋಕ್ಸೋ ಪ್ರಕರಣಗಳು, ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಕರೆಗಳು ಹೆಚ್ಚಾಗಿ ಬರುತ್ತವೆ. ಈ ಕರೆಗಳನ್ನು ಸ್ವೀಕರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಳೆದ ಸೆಪ್ಟೆಂಬರ್ನಿಂದ ಈವರೆಗೆ ೧೪೩ ಕರೆ ಸ್ವೀಕರಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದರು.ಅನುದಾನ ಮಾಹಿತಿ ನೀಡಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿವಿಧ ನೆರವು ಯೋಜನೆಯಡಿ ಈವರೆಗೆ ಬಿಡುಗಡೆಯಾದ ಅನುದಾನ, ಬಳಕೆಯಾದ ಅನುದಾನ, ಅನುದಾನದ ಬೇಡಿಕೆ ಕುರಿತಂತೆ ವಿವರವಾದ ಮಾಹಿತಿ ಸಲ್ಲಿಸಬೇಕು. ಮಕ್ಕಳ ನೆರವಿಗೆ ಬಿಡುಗಡೆಯಾದ ಅನುದಾನ ಬಳಕೆಮಾಡಲು ನಿರ್ಲಕ್ಷ್ಯವಹಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ವಿಲೇ ಚುರುಕುಗೊಳಿಸಿ: ಪೋಕ್ಸೋ ಪ್ರಕರಣಗಳ ವಿಲೇವಾರಿ, ದತ್ತು ಕಾರ್ಯಕ್ರಮದ ಪ್ರಗತಿ, ಬಾಲ ನ್ಯಾಯಮಂಡಳಿ ಮುಂದೆ ಪ್ರಕರಣಗಳ ವಿಲೇವಾರಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದ ಪ್ರಕರಣಗಳ ವಿಲೇವಾರಿ ಕುರಿತಂತೆ ಕೂಲಕುಂಷವಾಗಿ ಪರಿಶೀಲನೆ ನಡೆಸಿದ ಅವರು, ಮಕ್ಕಳ ಕಲ್ಯಾಣ ಸಮಿತಿ ಪ್ರಕರಣಗಳ ವಿಲೇವಾರಿ ಪ್ರಗತಿ ಚುರುಕುಗೊಳಿಸಬೇಕು. ಪ್ರತಿ ಪ್ರಕರಣಗಳ ವಿವರ ಸಲ್ಲಿಸುವಂತೆ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಮೂಲ ಸೌಕರ್ಯ, ಪ್ರವೇಶ ಸಾಮರ್ಥ್ಯ, ಪ್ರಸ್ತುತ ಈ ಸಂಸ್ಥೆಗಳಲ್ಲಿ ಎಷ್ಟು ಮಕ್ಕಳು ರಕ್ಷಣೆಯಲ್ಲಿದ್ದಾರೆ, ಸಲಹಾ ಪೆಟ್ಟಿಗೆ, ಸಿಸಿ ಟಿವಿ ಅಳವಡಿಸಲಾಗಿದೆಯೇ, ಗೇಟ್ ರಿಜಸ್ಟರ್ ನಿರ್ವಹಿಸಲಾಗಿದೆ, ರಾತ್ರಿ ಸಿಬ್ಬಂದಿ ವಾಸ್ತವ್ಯ ಮಾಹಿತಿ ಕುರಿತಂತೆ ವಿವರವಾಗಿ ಪರಿಶೀಲನೆ ನಡೆಸಿದರು.
ಮಾಜಿ ದೇವದಾಸಿಯರಿಗೆ ಸೌಲಭ್ಯ: ನಿವೇಶನ ರಹಿತ ಹಾಗೂ ವಸತಿ ರಹಿತ ಗ್ರಾಮೀಣ ಹಾಗೂ ನಗರ ವಾಸಿ ಮಾಜಿ ದೇವದಾಸಿಯರ ಮಾಹಿತಿಯನ್ನು ಒಂದು ವಾರದಲ್ಲಿ ಸಲ್ಲಿಸಬೇಕು. ಗ್ರಾಮೀಣ ಭಾಗದಲ್ಲಿ ನಿವೇಶನ ಗುರುತಿಸಿ ಹಂಚಿಕೆ ಮಾಡಬೇಕು. ಆಶ್ರಯ ಯೋಜನೆಯಡಿ ಮನೆ ಒದಗಿಸಬೇಕು. ಭೂ ಒಡೆತನ ಯೋಜನೆ ಹಾಗೂ ವಿವಿಧ ಸ್ವಾವಲಂಬಿ ಯೋಜನೆಯಡಿ ಸ್ವ ಉದ್ಯೋಗ ಕೈಗೊಳ್ಳಲು ಮಾಜಿ ದೇವದಾಸಿಯರಿಗೆ ನೆರವು ಒದಗಿಸಲು ಕ್ರಮವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಪಂ ಯೋಜನಾಧಿಕಾರಿ ಎಚ್.ವೈ,ಮೀಸೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಉಮೇಶಪ್ಪ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನಿಲೇಶ, ಅಂಕಿಸಂಖ್ಯಾಧಿಕಾರಿ ಭುಜಂಗ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್ ಇದ್ದರು.