ಕೊಪ್ಪಳ: ಜನ ಗಣತಿದಾರರು ಮಾಹಿತಿ ಸಂಗ್ರಹಿಸಲು ಮನೆಗಳಿಗೆ ಬಂದಾಗ ಮಾಹಿತಿ ನೀಡಿ ಸಹಕರಿಸುವಂತೆ ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ್ ಹ್ಯಾಟಿ ಮನವಿ ಮಾಡಿದರು.
ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಜನಗಣತಿ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಗಣತಿಯು ಆರ್ಥಿಕ,ಸಾಮಾಜಿಕ,ಶೈಕ್ಷಣಿಕ,ಕೌಟುಂಬಿಕ ಮತ್ತು ಗೃಹ ಹೀಗೆ ಅನೇಕ ದತ್ತಾಂಶ ಒಂದೇ ಸೂರಿನಲ್ಲಿ ದಾಖಲಿಸುವುದು. ದೇಶದ ಅಭಿವೃದ್ಧಿಗೆ ಪೂರಕವಾಗುವ ಜನಗಣತಿ ಕಾರ್ಯಕ್ರಮ ಯಶಸ್ವಿಯಾಗಲಿ. ಭಾಗ್ಯನಗರ ಪಪಂದಿಂದ ಗಣತಿದಾರರಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಗಣತಿದಾರರಿಗೆ ಸರಿಯಾದ ಮಾಹಿತಿ ಒದಗಿಸಿ ದೇಶದ ಅಭಿವೃದ್ಧಿಗೆ ಸಾರ್ವಜನಿಕರು ಸಹಕರಿಸಿ, ಕೇಂದ್ರ ಸರ್ಕಾರ 2027 ರ ಜನಗಣತಿ ನಡೆಸಲು ಅಧಿಸೂಚನೆ ಹೊರಡಿಸಿದ್ದು, ಗಣತಿದಾರರು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿ ಜನಗಣತಿ ಕಾರ್ಯ ಯಶಸ್ವಿಗೊಳಿಸುವಂತೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪಪಂ ಸದಸ್ಯ ಪರಶುರಾಮ್ ನಾಯಕ ಮಾತನಾಡಿ, ಜನಗಣತಿ ಮಾಹಿತಿ ಸಂಗ್ರಹಿಸಲು ಶಿಕ್ಷಕರು ಅತ್ಯಂತ ಉತ್ಸಾಹಕರಾಗಿ ತರಬೇತಿಯಲ್ಲಿ ಪಾಲ್ಗೊಂಡಿದ್ದು, ಸಾರ್ವಜನಿಕರು ಗಣತಿದಾರರು ಮನೆಗೆ ಬಂದಾಗ ನೈಜ ಮಾಹಿತಿ ಒದಗಿಸಿ ಜನಗಣತಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಭಾಗ್ಯನಗರ ಪಪಂ ಮುಖ್ಯಾಧಿಕಾರಿ ಸುರೇಶ್ ಬಬಲಾದ, ಕ್ಷೇತ್ರ ತರಬೇತುದಾರ ಮಂಜುನಾಥ ತಿಮ್ಮಕ್ಕನವರ್,ಸುನೀಲ್ ಕುಮಾರ್ ಹಾಗೂ ಪಪಂ ಸಿಬ್ಬಂದಿ ಹಾಗೂ ಗಣತಿದಾರರು,ಮೇಲ್ವಿಚಾರರಕರು ಉಪಸ್ಥಿತರಿದ್ದರು.