ಸಾರಾಂಶ
ರೈತರ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲಿ ಚರ್ಚೆ ನಡೆಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವದು
ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರಿಗೆ ವಿವಿಧ ರೈತ ಸಂಘಟನೆಗಳ ನೂರಾರು ರೈತರು ಗುರುವಾರ ತಹಸೀಲ್ದಾರ ಕಚೇರಿ ಎದುರು ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಇತ್ತೀಚಿಗೆ ಸತತವಾಗಿ ಸುರಿದ ಭಾರಿ ಮಳೆಯಿಂದ ಪ್ರಮುಖ ಬೆಳೆಗಳಾದ ಉಳ್ಳಾಗಡ್ಡಿ, ಹೆಸರು, ಹತ್ತಿ, ಶೇಂಗಾ ಗೋವಿನಜೋಳ, ಅಲಸಂದಿ, ಸೋಯಾಬಿನ್ ಹಾಗೂ ಸೇವಂತಿ, ಚೆಂಡು, ಹೂವು ಸೇರಿದಂತೆ ಬೆಳೆಗಳು ಜಮೀನಲ್ಲೇ ಸಂಪೂರ್ಣ ಜಲಾವೃತಗೊಂಡು ಹಾಳಾಗಿದೆ. ಬೆಳೆಗಳಿಗೆ ಜಮೀನಿನಲ್ಲಿ ಮೊಳಕೆಯೊಡೆದಿವೆ, ಬಡರೈತರು ಸಾಲ ಶೂಲ ಮಾಡಿ ಎಕರೆಗೆ ₹೨೫ ರಿಂದ ೩೦ಸಾವಿರ ಖರ್ಚು ಮಾಡಿದ್ದು, ಆದರೆ ಅತಿಯಾದ ಮಳೆಯಿಂದ ಫಸಲು ಬಾರದೆ ರೈತ ಸಮೂಹ ಕಂಗಾಲಾಗಿದ್ದಾರೆ, ಸಂಬಂಧಪಟ್ಟ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರ ಜಮೀನುಗಳಿಗೆ ಬೆಳ ವಿಮೆ ಹಾಳಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು, ಅದೇ ರೀತಿ ಜಮೀನುಗಳಿಗೆ ಹೋಗುವ ತಾಲೂಕಿನ ರಸ್ತೆಗಳು ಮತ್ತು ಲಕ್ಷ್ಮೇಶ್ವರ ಪಟ್ಟಣದ ಸಂಪೂರ್ಣ ರಸ್ತೆಗಳು ಹದಗೆಟ್ಟಿವೆ ಇವುಗಳ ದುರಸ್ಥಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ರೈತರ ಸಮಸ್ಯೆಗಳ ಬಗ್ಗೆ ಶೀಘ್ರದಲ್ಲಿ ಚರ್ಚೆ ನಡೆಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವದು, ಈ ಕುರಿತಂತೆ ತಾಲೂಕಿನ ಸಮಸ್ಯೆಗಳ ಬಗ್ಗೆ ತಹಸೀಲ್ದಾರರು ಅವಶ್ಯಕ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಧನಂಜಯ ಎಂ, ಭಾರತೀಯ ಕಿಸಾನ ಸಂಘದ ತಾಲೂಕಾಧ್ಯಕ್ಷ ಅಜೇಯ ಕರಿಗೌಡ್ರ, ಕಾರ್ಯದರ್ಶಿ ಲಕ್ಷ್ಮಣ ಲಮಾಣಿ, ಜಿಲ್ಲಾ ಪ್ರ ಕಾರ್ಯದರ್ಶಿ ರಮೇಶ ಕೋಳಿವಾಡ, ಆದೇಶ ಹುಲಗೂರ, ಚಂದ್ರಗೌಡ್ರು ಕರೆಗೌಡ್ರು, ವಸಂತಗೌಡ್ರ ಕರೆಗೌಡ್ರು, ಮುತ್ತು ಅಜ್ಜಪ್ಪಶೆಟ್ಟರ್, ರಮೇಶ ಹುಲಕೋಟಿ, ಮಂಜುನಾಥ ಹುಲಕೋಟಿ, ಬಸವರಾಜ ಮೂಲಿಮನಿ ಸೇರಿದಂತೆ ಅನೇಕ ರೈತರು ಇದ್ದರು.