ಹಲವು ದಶಕಗಳಿಂದ ಅರಣ್ಯ/ ಸರ್ಕಾರಿ ಭೂಮಿ ಅನುಭವಿಸಿಕೊಂಡು ಬಂದಿರುವ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯನ್ನು ಹೆಚ್ಚಿನ ಕಾಳಜಿಯಿಂದ ತಲುಪಿಸುವಂತಾಗಬೇಕು ಎಂದು ಕೇಂದ್ರ ಬುಡಕಟ್ಟು ಮಂತ್ರಾಲಯದ ಅಧಿಕಾರಿ ಗಿರಿಧರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಲವು ದಶಕಗಳಿಂದ ಅರಣ್ಯ/ ಸರ್ಕಾರಿ ಭೂಮಿ ಅನುಭವಿಸಿಕೊಂಡು ಬಂದಿರುವ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯನ್ನು ಹೆಚ್ಚಿನ ಕಾಳಜಿಯಿಂದ ತಲುಪಿಸುವಂತಾಗಬೇಕು ಎಂದು ಕೇಂದ್ರ ಬುಡಕಟ್ಟು ಮಂತ್ರಾಲಯದ ಅಧಿಕಾರಿ ಗಿರಿಧರ್ ತಿಳಿಸಿದ್ದಾರೆ.ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ತಲುಪಿಸುವ ಬಗ್ಗೆ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.

ಅನುಸೂಚಿತ ಬುಡಕಟ್ಟುಗಳ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಮಾನ್ಯ ಮಾಡುವ ಸಂಬಂಧ 2006, 2007 ಮತ್ತು 2008 ನಿಯಮ ಮತ್ತು ತಿದ್ದುಪಡಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ, ಆದಿವಾಸಿಗಳಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದು ವಿವರಿಸಿದರು. ಗ್ರಾಮ ಮಟ್ಟದಲ್ಲಿನ ಅಧಿಕಾರಿಗಳು ಅರ್ಹ ಬುಡಕಟ್ಟು ಜನಾಂಗದವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸೌಲಭ್ಯ ತಲುಪಿಸಬೇಕು. ಯಾವುದೇ ಕಾರಣಕ್ಕೂ ಸತಾಯಿಸಬಾರದು. ಇತರರಂತೆ ಬದುಕಲು ಅವಕಾಶ ಮಾಡಬೇಕು ಎಂದು ಹೇಳಿದರು.ಗ್ರಾಮ ಅರಣ್ಯ ಸಮಿತಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪ ವಿಭಾಗ ಮಟ್ಟದ ಸಮಿತಿ ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಂಬಂಧಿಸಿದ ಅಧಿಕಾರಿ ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ಕಾರ್ಯಕ್ರಮ ಜಾರಿಗೆ ಮುಂದಾಗಬೇಕು ಎಂದು ಗಿರಿಧರ ಹೇಳಿದರು. ಜಿಲ್ಲೆಯಲ್ಲಿ ಸೋಲಿಗ, ಜೇನುಕುರುಬ ಬೆಟ್ಟಕುರುಬ, ಕಾಡುಕುರುಬ, ಎರವ, ಪಣಿಯ, ಕುಡಿಯ, ಮಲೆಕುಡಿಯ, ಹೀಗೆ ಹಲವು ಆದಿವಾಸಿ ಕುಟುಂಬಗಳು ಇಂದಿಗೂ ಸಹ ಕಷ್ಟದಲ್ಲಿ ಬದುಕುತ್ತಿದ್ದು, ಅಗತ್ಯ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದು ಅವರು ನುಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಸೆಂಥಿಲ್ ಕುಮಾರ್, ಗೋಪಾಲ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೆಗೌಡ, ತಾ.ಪಂ.ಇಒ ಶೇಖರ್, ಅಪ್ಪಣ್ಣ, ತಹಸೀಲ್ದಾರ್ ಶ್ರೀಧರ್, ಆರ್‌ಎಫ್‌ಒಗಳು, ಪಿಡಿಒಗಳು, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳು ಇದ್ದರು.