ಕೊಪ್ಪಳ: ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೇ 10ರಿಂದ ಮೇ 14ರ ವರೆಗೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಮಹಾರಥೋತ್ಸವದ ನಂತರ ಒಂದು ತಿಂಗಳ ಕಾಲ ನಡೆಯುವ ಜಾತ್ರೆಗೆ ದೇವಸ್ಥಾನದಿಂದ 4 ಟ್ಯಾಂಕರ್ಗಳು, ಬಾಡಿಗೆ ಸೇರಿ 40 ಟ್ಯಾಂಕರ್ಗಳ ಮೂಲಕ ಇನ್ನೂ ಹೆಚ್ಚಿನ ನೀರಿನ ಸೌಲಭ್ಯ ಒದಗಿಸಲು ಅನುಕೂಲ ಕಲ್ಪಿಸಬೇಕು. ಮುಖ್ಯ ಜನಸಂದಣಿ ಇರುವ ಪ್ರದೇಶದಲ್ಲಿ ಸಿಸ್ಟನ್ಗಳನ್ನು ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ. ಅಲ್ಲದೇ ಬಾಡಿಗೆ ರೂಪದಲ್ಲಿ ಬ್ಯಾರಲ್ಗಳ ವ್ಯವಸ್ಥೆ ಮಾಡಿಕೊಂಡು, ವಾಹನ ನಿಲುಗಡೆ ಪ್ರದೇಶಗಳಲ್ಲಿ, ಶಿವಪುರ ರಸ್ತೆ, ಗವಿಮಠದ ಹತ್ತಿರ, ಹಳೇ ಮತ್ತು ಹೊಸ ತುಂಗಭದ್ರಾ ಪ್ರೌಢಶಾಲೆ ಮೈದಾನ, ಪ್ರಾಥಮಿಕ ಶಾಲೆ ಮೈದಾನ, ಕೋರಮಂಡಲ್ ಇಂಟರ್ನ್ಯಾಶನಲ್ ಫರ್ಟಿಲೈಸರ್ ಫ್ಯಾಕ್ಟರಿ ಮೈದಾನ, ನಂದಿ ಸರ್ಕಲ್, ಹೊಸ ಅಂಬೇಡ್ಕರ್ ಕಾಲೋನಿ ಮುಂದೆ, ರೈಲ್ವೆ ಗೇಟ್ ಹತ್ತಿರ, ರೈಲ್ವೇ ಸ್ಟೇಷನ್ ಸರ್ಕಲ್ ಹತ್ತಿರ ಹಾಗೂ ಸತ್ಯನಾರಾಯಣ ದೊನ್ನಿ ಬಿಲ್ಡಿಂಗ್ ಹತ್ತಿರ, ದೇವಸ್ಥಾನದ ಮತ್ತು ದೇವರ ದರ್ಶನಕ್ಕೆ ಕ್ಯೂಲೈನ್ನಲ್ಲಿ ಹೋಗುವ ಭಕ್ತರಿಗೆ ಅವಶ್ಯಕತೆಗನುಗುಣವಾಗಿ ಟ್ಯಾಂಕರ್ಗಳನ್ನು ನಿಯೋಜಿಸಿಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಹ ನಿರ್ಣಯಿಸಲಾಗಿದೆ. ನೀರಿನ ಪೈಪ್ ಲೈನ್ ಲೀಕೇಜ್ ಆಗದಂತೆ ನಿರ್ವಹಣೆ ಮಾಡಲು ನಾನ್-ಪೋರ್ಟಬಲ್ ನೀರು ಬಂದಲ್ಲಿ ಅದನ್ನು ಭಕ್ತರ ಬಳಕೆಗೆ ನೀಡಬಾರದು. ನೀರಿನ ಗುಣಮಟ್ಟವನ್ನು ಪ್ರತಿನಿತ್ಯ ಪರೀಕ್ಷಿಸಿ ಶುದ್ಧ ನೀರು ಮಾತ್ರ ಭಕ್ತರಿಗೆ ಬಳಕೆ ಮಾಡಲು ಹಾಗೂ ಕಲುಷಿತ ನೀರಿನಿಂದ ಯಾವುದೇ ರೀತಿಯ ಇನ್ಫೆಕ್ಷನ್ ಆಗದಂತೆ ಹ್ಯಾಲೋಜನ್ ಮಾತ್ರೆಯನ್ನು ನೀರಿನಲ್ಲಿ ಬಳಸಲು ಹಾಗೂ ಇದರ ಬಗ್ಗೆ ಪ್ರಮಾಣ ಪತ್ರ ಒದಗಿಸಲು ಹುಲಿಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.ನೀರಿನ ಅರವಟಿಗೆಗಳ ವ್ಯವಸ್ಥೆಗಾಗಿ ಸಿಬ್ಬಂದಿ ನಿಯೋಜನೆ ಮಾಡಿಕೊಂಡು, ದೇವಸ್ಥಾನದಿಂದ ಭಕ್ತರಿಗೆ ಅನುಕೂಲವಾಗುವ ಕಡೆಗಳಲ್ಲಿ ವ್ಯವಸ್ಥಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಒಟ್ಟಾರೆ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ನೋಡಿಕೊಳ್ಳುವಂತೆ ಶ್ರೀ ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ, ಹುಲಿಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.