ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಬಿಸಿಎಂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸೇರಿದಂತೆ ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪು ಸುಲ್ತಾನ, ಬಸವೇಶ್ವರ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಾಗಿ ಮಿನಿ ವಿಧಾನಸೌಧಕ್ಕೆ ತೆರಳಿತು.ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಮುಖಂಡ ಸಚೀನ ಧಾನಗೊಂಡ, ವಸತಿ ನಿಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸರಿಯಾದ ಊಟ, ಉಪಹಾರ ನೀಡುತ್ತಿಲ್ಲ. ಊಟ, ಉಪಹಾರಕ್ಕೆ ಬಳಸುವ ತರಕಾರಿಗಳು ಕೊಳೆತ ಸ್ಥಿತಿಯಲ್ಲಿ ಇದ್ದರೂ, ಅವುಗಳನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಸತಿ ನಿಲಯದಲ್ಲಿ ಸರಿಯಾದ ಶೌಚಾಲಯಗಳು ಇಲ್ಲ. ವಸತಿ ನಿಲಯದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ನೋಟಬುಕ್ ಸೇರಿದಂತೆ ಶಿಕ್ಷಣ ಉಪಯೋಗಿ ಸಾಮಗ್ರಿಗಳು ನೀಡುತ್ತಿಲ್ಲ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಸತಿ ಕಟ್ಟಡದ ಮೇಲೆ ಇರುವ ನೀರಿನ ಟ್ಯಾಂಕ್ನಲ್ಲಿ ತುಂಬಿಡುವ ನೀರಿನಲ್ಲಿ ಹುಳುಗಳು ಉತ್ಪತಿಯಾದರೂ ಅದನ್ನು ಸ್ವಚ್ಚಗೊಳಿಸುವ ಕೆಲಸ ಮಾಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಕಲುಷಿತ ನೀರೇ ಕುಡಿಯಲು ಹೇಳುತ್ತಾರೆ ಎಂದು ಆರೋಪಿಸಿದ ಅವರು, ನಿಲಯ ಪಾಲಕರು ವಿದ್ಯಾರ್ಥಿಗಳ ಜತೆಗೆ ಅಸಭ್ಯವಾಗಿ ಅರ್ತನೆ ಮಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳು ಕೂಡಲೆ ಬಗೆಹರಿಸಬೇಕು. ಇಲ್ಲವಾದರೆ ತಾಲೂಕು ಕಚೇರಿಗಳ ಮುಂದೆ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಅವರಿಗೆ ಮನವಿ ಸಲ್ಲಿಸಿದರು. ಗಣೇಶ ಹಂಜಗಿ, ರಾಹುಲ್ ಜಾಧವ, ಸೋಮನಾಥ ಕಟಗೇರಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.