ಧರ್ತಿ ಅಬಾ ಅಭಿಯಾನದ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯಲ್ಲಿರುವ ಬುಡಕಟ್ಟು ಸಮುದಾಯದ ಜನತೆಗೆ ಸರ್ಕಾರದ ಎಲ್ಲಾ ಯೋಜನೆಗಳ ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಧರ್ತಿ ಅಬಾ ಅಭಿಯಾನದ ಅರಿವು ಮತ್ತು ಬೆನಿಫಿಟ್ ಸ್ಯಾಚುರೇಷನ್ ಅಂಗವಾಗಿ, ಜನ್ ಭಾಗೀದಾರ್- ಸಬ್ಸೇ ದೂರ್ ಸಬ್ಸೇ ಪೆಹಲೇ ಅಭಿಯಾನವನ್ನು ಆಯೋಜಿಸುವ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಧರ್ತಿ ಅಬಾ ಜನ ಜಾತೀಯ ಉತ್ಕರ್ಷ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ಪ.ಪಂಗಡದ ಜನಾಂಗದವರು ಅಧಿಕವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಮೇ 18ರಿಂದ 25ರ ವರೆಗೆ ಶಿಬಿರ ಆಯೋಜಿಸಬೇಕು. ಪ್ರಸ್ತುತ ಸರ್ಕಾರದ ಎಲ್ಲಾ ಯೋಜನೆಗಳು/ ದಾಖಲೆಗಳು ಡಿಜಿಟಲೀಕರಣಗೊಂಡಿದ್ದು, ಇವುಗಳ ಬಗ್ಗೆ ಬುಡಕಟ್ಟು ಸಮುದಾಯದ ಜನತೆಗೆ ಮಾಹಿತಿ ಇಲ್ಲವಾಗಿದೆ. ಆದ್ದರಿಂದ ಅವರಲ್ಲಿರುವ ಅಗತ್ಯ ದಾಖಲೆಗಳನ್ನು ಅಪ್ಡೇಟ್ ಮಾಡಿಸಿ, ಯೋಜನೆಗಳ ಅರ್ಜಿಗಳನ್ನು ಭರ್ತಿ ಮಾಡಿ, ಸರ್ಕಾರದ ಸೌಲಭ್ಯಗಳ ಪ್ರಯೋಜನ ಒದಗಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಾಗಿ ನಲೆಸಿರುವ ಹಳಿಯಾಳ, ಭಟ್ಕಳ, ಜೋಯಿಡಾ ಮತ್ತು ಮುಂಡಗೋಡು ತಾಲುಕುಗಳ 31 ಗ್ರಾಪಂಗಳ ವ್ಯಾಪ್ತಿಯಲ್ಲಿನ 21 ಗ್ರಾಮಗಳಲ್ಲಿ ಶಿಬಿರ ಆಯೋಜಿಸಿ, ಅಲ್ಲಿನ ಬುಡಕಟ್ಟು ಜನತೆಗೆ, ಆಧಾರ ಕಾರ್ಡ್, ರೇಷನ್ ಕಾರ್ಡ್, ಆಯುಷ್ಮಾನ್ ಭಾರತ್ ಕಾರ್ಡ್, ಜಾತಿ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್, ವಿಮಾ ಹಕ್ಕುಗಳು, ಜನಧನ್ ಬ್ಯಾಂಕ್ ಖಾತೆ ಸಾಮಾಜಿಕ ಭದ್ರತೆಗಳಾದ ವೃದ್ದಾಪ್ಯ ಪಿಂಚಣಿ ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ಜೀವನೋಪಾಯ ಉದ್ಯೋಗ, ಮನರೇಗಾ, ಪಿಎಂ ವಿಶ್ವಕರ್ಮ ಮುದ್ರಾ ಸಾಲಗಳು, ಪಿಎಂ ಮಾತ್ರವಂದನ ಯೋಜನೆ, ಐಸಿಡಿಎಸ್. ಸೌಲಭ್ಯಗಳು, ಲಸಿಕೆಕರಣ, ಸೀಕಲ್ ಸೆಲ್ ಅನಿಮಿಯಾ ಕುರಿತು ಜಾಗೃತಿ ಮತ್ತು ಆರೋಗ್ಯ ತಪಾಸಣೆ, ಆದಿ ಸೇವಾ ಕೇಂದ್ರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕೃತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಶಿಬಿರದಲ್ಲಿ ಮಾಹಿತಿಯನ್ನು ನೀಡಬೇಕು ಎಂದರು.
ಶಿಬಿರಗಳನ್ನು ಅಯೋಜಿಸುವ ಪೂರ್ವದಲ್ಲಿ ಬುಡಕಟ್ಟು ಜನಾಂಗವರಿಗೆ ಮುಂಚಿತವಾಗಿ ಈ ಬಗ್ಗೆ ಮಾಹಿತಿ ನೀಡಿ, ಅವರು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದಲ್ಲಿ ಭಾಗವಹಿಸಿ, ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್, ಪ.ವರ್ಗಗಳ ಕಲ್ಯಾಣಾಧಿಕಾರಿ ಉಮೇಶ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಇದ್ದರು.