ಶಾಲೆಗೆ ತಕ್ಷಣವೇ ಸ್ವಂತ ಭೂಮಿ ಕಾಯ್ದಿರಿಸಿ, ಸುಸಜ್ಜಿತ ಕಟ್ಟಡ ನಿರ್ಮಿಸಬೇಕು. ಎಲ್.ಕೆ.ಜಿ ತರಗತಿ ಆರಂಭಿಸಿ, ಹಂತ-ಹಂತವಾಗಿ ಪಿಯುಸಿ ಹಾಗೂ ತಾಂತ್ರಿಕ ಕೋರ್ಸ್ಗಳವರೆಗೆ ಮೇಲ್ದರ್ಜೆಗೇರಿಸಬೇಕು.
ಕೊಪ್ಪಳ: ನಗರದ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿರುವ ಸರ್ದಾರ್ ಗಲ್ಲಿಯ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗೆ ಸ್ವಂತ ಕಟ್ಟಡ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮೌಲಾನಾ ಆಜಾದ್ ಶಾಲಾ ಮಕ್ಕಳು ಶನಿವಾರ ಪ್ರತಿಭಟನೆ ನಡೆಸಿ ಶಾಸಕ ಕೆ. ರಾಘವೇಂದ್ರ ಬಿ.ಹಿಟ್ನಾಳಗೆ ನಗರದ ಪ್ರವಾಸಿ ಮಂದಿರದಲ್ಲಿ ಮನವಿ ಸಲ್ಲಿಸಿದರು.
ಭೂಮಿ, ಕಟ್ಟಡ ಮಂಜೂರಾತಿ: ಶಾಲೆಗೆ ತಕ್ಷಣವೇ ಸ್ವಂತ ಭೂಮಿ ಕಾಯ್ದಿರಿಸಿ, ಸುಸಜ್ಜಿತ ಕಟ್ಟಡ ನಿರ್ಮಿಸಬೇಕು. ಎಲ್.ಕೆ.ಜಿ ತರಗತಿ ಆರಂಭಿಸಿ, ಹಂತ-ಹಂತವಾಗಿ ಪಿಯುಸಿ ಹಾಗೂ ತಾಂತ್ರಿಕ ಕೋರ್ಸ್ಗಳವರೆಗೆ ಮೇಲ್ದರ್ಜೆಗೇರಿಸಬೇಕು. ಶೈಕ್ಷಣಿಕ ವರ್ಷದ ಆರಂಭದಲ್ಲೇ ಉಚಿತ ಶೂ ಹಾಗೂ ಸಮವಸ್ತ್ರ ಪೂರೈಸಬೇಕು. ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಅತಿಥಿ ಶಿಕ್ಷಕರ ಮೇಲಿನ ಅವಲಂಬನೆ ತಪ್ಪಿಸಿ,ಕಾಯಂ ಮುಖ್ಯೋಪಾಧ್ಯಾಯರು ಹಾಗೂ ವಿಷಯವಾರ ಶಿಕ್ಷಕರನ್ನು ನೇಮಿಸಬೇಕು. ಶಾಲಾ ಆಟದ ಮೈದಾನ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಶುದ್ಧ ಕುಡಿವ ನೀರಿನ ಘಟಕ, ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯ ಸೌಲಭ್ಯ ಒದಗಿಸಬೇಕು ಹಾಗೂ ನಾನಾ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.ಶಾಲಾ ಕಾಲೇಜುಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎ. ಗಫಾರ್, ಸಂಚಾಲಕ ಮುನೀರ್ ಅಹ್ಮದ್ ಸಿದ್ದೀಕಿ, ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮಖಬೂಲ್ ರಾಯಚೂರು, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಮೌಲಾ ಹುಸೇನ್ ಹಣಗಿ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್, ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಗವಿಸಿದ್ದಪ್ಪ ಕರಡಿ, ನಗರಸಭೆ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹಾಗೂ ವಿದ್ಯಾರ್ಥಿಗಳಿದ್ದರು.