ಸಾರಾಂಶ
ಕುಷ್ಟಗಿ:
ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಜನರಿಗೆ ಗುಣಮಟ್ಟದ ಊಟ, ಉಪಾಹಾರ ನೀಡಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ಮಲ್ಲಯ್ಯ ವೃತ್ತದ ಹತ್ತಿರ ನೂತನವಾಗಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ಊಟ ಮತ್ತು ಉಪಹಾರಕ್ಕೆ ಕಡಿಮೆ ಹಣ ಇದೆ ಎಂದು ಕಳಪೆಯ ಆಹಾರ ತಯಾರಿಸಬಾರದು ಎಂದು ಸೂಚಿಸಿದರು.
ಇಂದಿರಾ ಕ್ಯಾಂಟೀನ್ ಮೇಲ್ವಿಚಾರಣೆಯ ಜವಾಬ್ದಾರಿಯು ಪುರಸಭೆಯದ್ದು. ಇರುವ ಕಾರಣ ಆಹಾರದ ಗುಣಮಟ್ಟವನ್ನು ಪುರಸಭೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡುವ ಮೂಲಕ ಪರಿಶೀಲಿಸಬೇಕು ಎಂದ ಅವರು, ಇದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಈ ಯೋಜನೆಯ ಮೂಲಕ ಬಡವರಿಗೆ, ಕೂಲಿಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಊಟ ಮತ್ತು ಉಪಾಹಾರ ದೊರೆಯಲಿದೆ. ಇದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಪುರಸಭೆ ಸದಸ್ಯ ಕಲ್ಲೇಶ ತಾಳದ ಮಾತನಾಡಿ, ₹ 5ಗೆ ಉಪಾಹಾರ, ₹ 10ಗೆ ಊಟ ಸಿಗುತ್ತಿದ್ದು ಜನರಿಗೆ ಕಡಿಮೆ ವೆಚ್ಚದಲ್ಲಿಯೇ ಊಟ ಸಿಗುತ್ತಿದ್ದು ಈ ಕ್ಯಾಂಟೀನ್ ನಿರ್ಮಾಣದ ಸಲುವಾಗಿ ಅಂದಾಜು ₹ 87 ಲಕ್ಷ ಕಟ್ಟಡ ನಿರ್ಮಾಣಕ್ಕೆ, ₹ 47 ಲಕ್ಷ ಅಡುಗೆ ಸಾಮಗ್ರಿಗಳಿಗೆ ವೆಚ್ಚ ತಗುಲಿದ್ದು ಈ ಯೋಜನೆಯ ಸದ್ಬಳಕೆಗೆ ಮುಂದಾಗಬೇಕು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ ಸೇರಿದಂತೆ ಪುರಸಭೆ ಸದಸ್ಯರು, ಸಾರ್ವಜನಿಕರು, ಪುರಸಭೆ ಸಿಬ್ಬಂದಿ, ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಹಾಜರಿದ್ದರು.ಶಿಷ್ಟಾಚಾರ ಪಾಲಿಸಿ:
ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಪ್ರೋಟೋಕಾಲ್ ಪಾಲಿಸುವ ಮೂಲಕ ಕಾರ್ಡ್ನಲ್ಲಿದ್ದ ಮಹನೀಯರಿಗೆ ಆಮಂತ್ರಣ ಪತ್ರಿಕೆ ತಲುಪಿಸಬೇಕು. ಈ ಕಾರ್ಯಕ್ರಮಕ್ಕೆ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಅವರು ಹಾಜರಾಗಬೇಕಿತ್ತು. ಅವರಿಗೆ ಆಮಂತ್ರಣ ಪತ್ರಿಕೆ ತಲುಪಿಸದ ಹಿನ್ನೆಲೆ ಬಂದಿಲ್ಲ. ಮಂದಿನ ದಿನಗಳಲ್ಲಿ ಇಂತಹ ಲೋಪಗಳಾಗದಂತೆ ಎಚ್ಚರ ವಹಿಸಬೇಕೆಂದು ಪುರಸಭೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಶಾಸಕ ದೊಡ್ಡನಗೌಡ ಪಾಟೀಲ ಅವರು ಸಾರ್ವಜನಿಕರೊಂದಿಗೆ ಸಿರಾ, ಉಪ್ಪಿಟ್ಟು ಸೇವಿಸಿದರು.