ಸಾರಾಂಶ
ತಾಪಂ ನಲ್ಲಿ 30 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಣೆ
ಕನ್ನಡಪ್ರಭ ವಾರ್ತೆ, ಕಡೂರುಕಂದಾಯ ಇಲಾಖೆ ಜನಸಾಮಾನ್ಯರಿಗೆ ಇ-ಆಡಳಿತ ವ್ಯವಸ್ಥೆ ಮೂಲಕ ತ್ವರಿತ ಸೇವೆ ಒದಗಿಸಿ ಜನಸ್ನೇಹಿಯಾಗಲು ಮುಂದಾಗಬೇಕು ಎಂದು ಶಾಸಕ ಕೆ.ಎಸ್.ಆನಂದ್ ಕರೆ ನೀಡಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ 30 ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದರು. ಇ-ಆಡಳಿತ ವ್ಯವಸ್ಥೆ ಮೂಲಕ ಎಲ್ಲ ದಾಖಲೆಗಳು ಶೀಘ್ರ ಮತ್ತು ಸರಳವಾಗಿ ತಲುಪುವಂತಾಗಬೇಕು ಎನ್ನುವ ಕಂದಾಯ ಸಚಿವ ಕೃಷ್ಣ ಬೈರೇಗೌಡರ ಆಶಯ ಇದೀಗ ನೆರವೇರುತ್ತಿದೆ ಎಂದರು.
ಕಂದಾಯ ಇಲಾಖೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸಚಿವರ ದೂರದೃಷ್ಟಿಯಿಂದ ಹೊಸ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಇದರಿಂದಾಗಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ಗ್ರಾಮ ಆಡಳಿತಾಧಿ ಕಾರಿಗಳಿಗೆ ಪಂಚಾಯಿತಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಲು ವ್ಯವಸ್ಥೆ ಕಲ್ಪಿಸುವ ಪ್ರಸ್ತಾವನೆಯೂ ಇದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಮೊದಲ ಅವಧಿಯಲ್ಲಿ 6 ನೇ ವೇತನ ಆಯೋಗ, ಈ ಅವಧಿಯಲ್ಲಿ 7ನೇ ವೇತನ ಆಯೋಗ ಅನುಷ್ಠಾನಗೊಂಡು ಸರ್ಕಾರಿ ನೌಕರರು ಸಾಕಷ್ಟು ಅನುಕೂಲ ಪಡೆಯುವಂತಾಗಿದೆ. ಇಂದು ದೇಶದಲ್ಲೆ ಕರ್ನಾಟಕದ ಸರ್ಕಾರಿ ನೌಕರರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದರೆ ತಪ್ಪಾಗಲಾರದು. ಆದ್ದರಿಂದ ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಭಾವನೆಯಿಂದ ಜನಸಾಮಾನ್ಯರನ್ನು ಅಲೆದಾಡಿಸದೆ ಸೌಜನ್ಯದಿಂದ ಕೆಲಸ ಮಾಡಿಕೊಟ್ಟರೆ ಅವರ ಆಶೀರ್ವಾದ ಸದಾ ನಿಮ್ಮನ್ನು ಕಾಯುತ್ತದೆ.ಇಲಾಖೆ ನೋಡಿ ಜನ ವ್ಯಕ್ತಿತ್ವ ಗುರುತಿಸುವಂತಾಗಿದ್ದು ತಾಲೂಕು ಕಚೇರಿ ಮತ್ತು ಪೊಲೀಸ್ ಠಾಣೆ ಬದಲಾದರೆ ಜನರು ಸೌಖ್ಯ ದಿಂದ ಇರುತ್ತಾರೆ. ಕಡೂರು ತಾಲೂಕು ಕಚೇರಿ ಕಟ್ಟಡ ಈಗಾಗಲೇ ಸಾಕಷ್ಟು ಹಳೆಯದಾಗಿದ್ದು, ಸಿ ಕೆಟಗರಿಯ ₹16 ಕೋಟಿ ವೆಚ್ಚದ ಹೊಸ ಪ್ರಜಾಸೌಧ ಇನ್ನು ಕೆಲವು ದಿನಗಳಲ್ಲಿಯೇ ಮಂಜೂರಾಗಲಿದೆ ಎಂದು ಭರವಸೆ ನೀಡಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೀರೇಶ್, ಕಸಬಾ ಆರ್ಐ ರವಿಕುಮಾರ್,ಸಿಂಗಟಗೆರೆ ರವಿಕುಮಾರ್, ಲಿಂಗರಾಜು, ಸಿದ್ದಪ್ಪ, ವೀರೇಶ್, ಸುರೇಶ್, ಹಿರೇನಲ್ಲೂರು ರವಿಕುಮಾರ್ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.11ಕೆಕೆಡಿಯು4.ಕಡೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಲ್ಯಾಪ್ಟಾಪ್ ವಿತರಿಸಿದರು. ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಇದ್ದರು.