ಕನ್ನಡಪ್ರಭ ವಾರ್ತೆ ಕುಮಟಾ

ತಾಲೂಕಿನ ಯಾಣದ ಹೊಳೆಬೈಲಿನಲ್ಲಿ ವಾಸಿಸುತ್ತಿರುವ ದಲಿತ ಕುಟುಂಬಗಳಿಗೆ ಓಡಾಡಲು ರಸ್ತೆ ಹಾಗೂ ಇತರ ಸಮಸ್ಯೆ ಬಗೆಹರಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ಕರ್ನಾಟಕ ಭೀಮ್ ಸೇನೆ, ಜಿಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯಿಂದ ತಾಲೂಕು ಆಡಳಿತ ಸೌಧದೆದುರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.

ಯಾಣದ ಹೊಳೆಬೈಲಿನಲ್ಲಿ ವಾಸಿಸುತ್ತಿರುವ ಮಾದೇವ ನಾಗು ಮುಕ್ರಿ, ಭೈರವ ನಾಗು ಮುಕ್ರಿ, ಲಿಂಗಪ್ಪ ನಾಗು ಮುಕ್ರಿ ಇತರರಿಗೆ ಹಾಗೂ ಮಕ್ಕಳಿಗೆ ಶಾಲೆಗೆ ಹೋಗಿ ಬರುವುದಕ್ಕೂ ಸರಿಯಾದ ರಸ್ತೆಯೇ ಇಲ್ಲದಂತಾಗಿದೆ. ನಮಗೆ ಸರಿಯಾದ ರಸ್ತೆ ಬೇಕು. ಇಲ್ಲಿನ ದಲಿತ ಕುಟುಂಬಗಳ ಮೇಲೆ ನೆರೆಹೊರೆಯವರಾದ ಮಾದೇವ ಪುರುಷ ಮರಾಠಿ ಕುಟುಂಬದವರು, ಹಿಮಕರ ಈಶ್ವರ ಮರಾಠಿ ಕುಟುಂಬದವರ ಮೇಲೆ ಎರಡು ತಿಂಗಳ ಹಿಂದೆ ಹಲ್ಲೆ, ಜಾತಿನಿಂದನೆ ಬಗ್ಗೆ ಪೊಲೀಸರಿಗೆ ದೂರು ದಾಖಲಾಗಿದೆ. ಪ್ರಯೋಜನವೇನೂ ಆಗಿಲ್ಲ. ಆದ್ದರಿಂದ ಹೊಳೆಬೈಲಿನ ದಲಿತ ಕುಟುಂಬಗಳಿಗೆ ಓಡಾಡಲು ರಸ್ತೆ ಒದಗಿಸಬೇಕು. ಅಲ್ಲಿನ ಮೇಲ್ವರ್ಗದ ಮರಾಠಿ ಕುಟುಂಬಗಳ ದೌರ್ಜನ್ಯ ತಡೆದು ಕಾನೂನು ಕ್ರಮ ಜರುಗಿಸಿ ಸೂಕ್ತ ರಕ್ಷಣೆ ಒದಗಿಸಬೇಕು. ಇಲ್ಲಿನ ರಸ್ತೆ ಮಧ್ಯದಲ್ಲಿ ದೊಡ್ಡ ಹಳ್ಳವಿದ್ದು ಇದಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿ ಸ್ವೀಕರಿಸಿದ ತಹಸೀಲ್ದಾರ ಶ್ರೀಕೃಷ್ಣ ಕಾಮಕರ, ಒಂದು ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಭೀಮಸೇನೆಯ ರಾಜ್ಯ ಕೋಶಾಧ್ಯಕ್ಷ ತಿಮ್ಮಪ್ಪ ಮುಕ್ರಿ, ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆಯ ಮಂಜುನಾಥ ಹರಿಕಂತ್ರ, ಮಹೇಶ ಮುಕ್ರಿ, ದಿನೇಶ ಮುಕ್ರಿ, ಮಾದೇವಿ ಮುಕ್ರಿ, ಇಂದಿರಾ ಮುಕ್ರಿ, ಬಲಿಯಮ್ಮ, ವನಿತಾ ಮುಕ್ರಿ, ಲಕ್ಷ್ಮೀ ಮುಕ್ರಿ, ಮಾದೇವಿ, ನಾಗಪ್ಪ ಮುಕ್ರಿ ಇತರರಿದ್ದರು.