ಅರ್ಹರು ಮತದಾರರ ಪಟ್ಟಿಯಿಂದ ಹೊರಗಿರದಂತೆ ಜಾಗರೂಕತೆ ವಹಿಸಬೇಕು ಹಾಗೂ ಅರ್ಹರಿಗೆ ಮತದಾನದ ಹಕ್ಕನ್ನು ಒದಗಿಸುವಲ್ಲಿ ನಾವು ವಿಫಲರಾಗಬಾರದು.

ಕನ್ನಡಪ್ರಭ ವಾರ್ತೆ ಕಾರವಾರ

ಅರ್ಹರು ಮತದಾರರ ಪಟ್ಟಿಯಿಂದ ಹೊರಗಿರದಂತೆ ಜಾಗರೂಕತೆ ವಹಿಸಬೇಕು ಹಾಗೂ ಅರ್ಹರಿಗೆ ಮತದಾನದ ಹಕ್ಕನ್ನು ಒದಗಿಸುವಲ್ಲಿ ನಾವು ವಿಫಲರಾಗಬಾರದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಮನವಿ ಮಾಡಿದರು.

ಕಾರವಾರ ಹಾಗೂ ಅಂಕೋಲಾದಲ್ಲಿ ಭಾನುವಾರ ನಡೆದ ಎಸ್‌ಐಆರ್ ಭಾಗ- 2 ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಎಸ್‌ಐಆರ್ ಫಾರ್ಮ ಭರ್ತಿ ಮಾಡಿಕೊಟ್ಟ ಮೇಲೆ ನಮ್ಮ ಕರ್ತವ್ಯ ಮುಗಿದಿಲ್ಲ. ಈಗ ಎರಡನೇ ಹಂತ ಇದೆ. ಮತದಾರರ ಯಾದಿಯಲ್ಲಿ ತಪ್ಪಿ ಹೋಗಿರುವ ಅರ್ಹ ಮತದಾರರನ್ನು ಗುರುತಿಸಿ ಅವರನ್ನು ಪಟ್ಟಿಗೆ ಸೇರ್ಪಡೆ ಮಾಡುವಂತೆ ಮಾಡಲು ಅ.8 ರ ತನಕ ಕಾಲಾವಕಾಶ ಇದೆ. ಹೀಗಾಗಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ಕೆಲವು ಅರ್ಹರು ಹಿಂದೆ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಈಗ ಹಬ್ಬಗಳು ಇರುವುದರಿಂದ ಅವರು ಊರಿಗೆ ಬರಬಹುದು. ಹಾಗೆ ಬಂದಾಗ ಅವರನ್ನು ಸಂಪರ್ಕಿಸಿ ಮತದಾನದ ಹಕ್ಕನ್ನು ಅವರಿಗೆ ಒದಗಿಸಿಕೊಡಬೇಕು ಎಂದು ರೂಪಾಲಿ ಎಸ್.ನಾಯ್ಕ ವಿನಂತಿಸಿದರು.

ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಎಸ್ಐಆರ್‌ನಲ್ಲಿ ನಾವು ಕೊನೆಯ ಹಂತದಲ್ಲಿದ್ದೇವೆ. ಇಲ್ಲಿಯ ತನಕ ಎಲ್ಲರೂ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.

ಬಿಎಲ್ ಎ 1 ರಾಘು ಭಟ್ ಮಾತನಾಡಿ, ಮುಂದಿನ ಹಂತದಲ್ಲಿ ಬಿಎಲ್ ಎ 2 ಗಳ ಜವಾಬ್ದಾರಿ ಬಗ್ಗೆ ವಿವರಿಸಿದರು. ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು, ಬಿಎಲ್ ಎ 2 ಗಳು ಉಪಸ್ಥಿತರಿದ್ದರು.

ಕಾರವಾರ ನಗರ ಹಾಗೂ ಗ್ರಾಮೀಣ ಮಂಡಲದ ಸಭೆ ಕಾರವಾರದ ಬಿಜೆಪಿಯಲ್ಲಿ ಕಚೇರಿಯಲ್ಲಿ ಹಾಗೂ ಅಂಕೋಲಾ ಮಂಡಲದ ಸಭೆ ಅಂಕೋಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ನಗರ ಅಧ್ಯಕ್ಷ ನಾಗೇಶ್ ಕುರಡೇಕರ್, ರಾಜ್ಯ ಪ್ರಕೋಷ್ಠ ಸದಸ್ಯ ಸುನಿಲ್ ಸೋನಿ, ನಗರ ಪ್ರಭಾರಿ ರಾಜು ಭಂಡಾರಿ, ಜಿಲ್ಲಾ ಮಾಧ್ಯಮ ಸಹ ಸಂಚಾಲ ಕಿಶನ ಕಾಂಬಳೆ, ಮನೋಜ್ ಭಟ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಸ್ವಾಗತಿಸಿದರು ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ್ ವಂದಿಸಿದರು.

ಅಂಕೋಲಾ ಮಂಡಲ ಸಂಜಯ ನಾಯ್ಕ, ಚಂದ್ರಕಾಂತ ನಾಯ್ಕ, ಸೂರಜ್ ನಾಯ್ಕ, ಜಿಲ್ಲಾ ಪದಾಧಿಕಾರಿಗಳು, ವಿವಿಧ ಜವಾಬ್ದಾರಿ ಇದ್ದ ಕಾರ್ಯಕರ್ತರಿದ್ದರು.