ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಪಕ್ಷಿಗಳು, ಪ್ರಾಣಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ.

ಕಂಪ್ಲಿ; ಪಟ್ಟಣದಲ್ಲಿ ಜೆಸಿಐ ಅಲೂಮ್ನಿ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ಪಕ್ಷಿಗಳಿಗೆ ನೀರುಣಿಸುವ ಅಭಿಯಾನ ಗುರುವಾರ ಜರುಗಿತು.

ಜೆಸಿಐ ಅಲೂಮ್ನಿ ಕ್ಲಬ್ ವಲಯ-24ರ ಉಪಾಧ್ಯಕ್ಷ ಪ್ರಸಾದ್ ಗಡಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಪಕ್ಷಿಗಳು, ಪ್ರಾಣಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿವೆ. ಪ್ರತಿಯೊಬ್ಬರು ತಮ್ಮ ಮನೆ, ಕಚೇರಿ, ಅಂಗಡಿ, ಆಸ್ಪತ್ರೆ, ಸಾರ್ವಜನಿಕ ಸ್ಥಳಗಳ ಸಮೀಪ ನೀರಿನ ಕುಂಡಗಳನ್ನು ಇಟ್ಟು ನೀರಿನ ಆಸರೆ ಒದಗಿಸಬೇಕು ಎಂದು ಮನವಿ ಮಾಡಿದರು.

ಪರಿಸರ ಸಂರಕ್ಷಣೆ ಮತ್ತು ಜೀವಿಗಳ ಮೇಲಿನ ಕಾಳಜಿಯನ್ನು ಬೆಳೆಸುವ ಉದ್ದೇಶದಿಂದ ಜೆಸಿಐ ಅಲ್ಯೂಮ್ನಿ ಕ್ಲಬ್ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಅಭಿಯಾನದ ಭಾಗವಾಗಿ ಪಟ್ಟಣದ ವಿವಿಧ ಸರ್ಕಾರಿ ಹಾಗೂ ಸಾರ್ವಜನಿಕ ಕಚೇರಿಗಳ ಆವರಣದಲ್ಲಿ ಪಕ್ಷಿಗಳಿಗೆ ನೀರು ಕುಡಿಯಲು ಮಣ್ಣಿನ ಕುಂಡಗಳನ್ನು ಇರಿಸಲಾಯಿತು. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡೆಗಳಲ್ಲಿ ನೀರಿನ ಕುಂಡಗಳನ್ನು ವಿತರಿಸುವ ಯೋಜನೆ ಇದೆ ಎಂದು ತಿಳಿಸಿದರು.

ಪಟ್ಟಣದ ಪ್ರಜಾಪತಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಎಪಿಎಂಸಿ ಆವರಣ, ತಾಪಂ ಕಚೇರಿ, ಡಿಪ್ಲೋಮಾ ಕಾಲೇಜು, ಪುರಸಭೆ ಸೇರಿದಂತೆ ವಿವಿಧ ಪ್ರಮುಖ ಕಟ್ಟಡಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪಕ್ಷಿಗಳಿಗಾಗಿ ನೀರಿನ ಕುಂಡಗಳನ್ನು ಅಳವಡಿಸಲಾಯಿತು.

ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಡಾ.ಭರತ್ ಪದ್ಮಶಾಲಿ ಮಾತನಾಡಿ, ಪರಿಸರ ಮತ್ತು ಜೀವ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ. ರಸೂಲ್, ಸಂತೋಷ್ ಸೋಗಿ, ಮಂಜೇಶ್ ದರೋಜಿ, ಸುಹಾಸ್ ಚಿತ್ರಗಾರ್, ಬಡಿಗೇರ ಜಿಲಾನ್‌ಬಾಷ, ಗುರುಶಾಸ್ತ್ರಿ, ವಾಸೀಮ್ ಫಯಾಜ್, ಅಕ್ಕಿ ಜಿಲಾನ್ ಸೇರಿದಂತೆ ಜೆಸಿಐ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.