ಸಾರಾಂಶ
ಬಹಿರಂಗ ಸಭೆಯಲ್ಲಿ ಉದ್ರೇಕ ಭಾಷಣಗಳನ್ನು ಮಾಡಿ ಒಬ್ಬ ಅಮಾಯಕನ ಹತ್ಯೆಗೆ ಕಾರಣರಾದವರ ವಿರುದ್ಧ ಚಾರ್ಜ್ ಶೀಟ್ ಹಾಕಿ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ ಜರುಗಿಸಬೇಕಿದೆ ಎಂದು ಕೆಪಿಸಿಸಿ ಸಂಯೋಜಕ ಫಾರೂಕ್ ಉಳ್ಳಾಲ್ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಳ್ಳಾಲ
ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಆತನ ಸಹಚರನ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೆ ಪೊಲೀಸ್ ಇಲಾಖೆಯೇ ಮೂಲ ಕಾರಣ. ಬಹಿರಂಗ ಸಭೆಯಲ್ಲಿ ಉದ್ರೇಕ ಭಾಷಣಗಳನ್ನು ಮಾಡಿ ಒಬ್ಬ ಅಮಾಯಕನ ಹತ್ಯೆಗೆ ಕಾರಣರಾದವರ ವಿರುದ್ಧ ಚಾರ್ಜ್ ಶೀಟ್ ಹಾಕಿ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ ಜರುಗಿಸಬೇಕಿದೆ ಎಂದು ಕೆಪಿಸಿಸಿ ಸಂಯೋಜಕ ಫಾರೂಕ್ ಉಳ್ಳಾಲ್ ಆಗ್ರಹಿಸಿದರು.ಉಳ್ಳಾಲ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿ ಪ್ರಿಯ ಜಿಲ್ಲೆಯಲ್ಲಿ ನಡೆದ ಈ ಹತ್ಯೆ ಸೌಹಾರ್ದ ಬಯಸುವ ಎಲ್ಲರ ಮೇಲೆ ನಡೆದ ಹಲ್ಲೆ ಹಾಗೂ ಹತ್ಯೆಯಾಗಿದೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಹಾಗೂ ಹತ್ಯೆಯಾದ ಅಬ್ದುಲ್ ರಹಿಮಾನ್ ಕುಟುಂಬದ ಜೊತೆ ಸದಾ ನಾವು ಇರುತ್ತೇವೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಫಾ ಮಲಾರ್ ಮಾತನಾಡಿ, ಯಾವುದೇ ಕೊಲೆ ನಡೆದರೂ ಅದನ್ನು ಕಾಂಗ್ರೆಸ್ ಖಂಡಿಸುತ್ತದೆ. ಕೊಂದವರಿಗೆ ಪ್ರತೀಕಾರ ಕಾನೂನಾತ್ಮಕವಾಗಿ ಶಿಕ್ಷೆಯ ಮೂಲಕ ನಡೆಯಬೇಕೆ ಹೊರತು ಕೊಲೆಯ ಮೂಲಕ ಅಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು.ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಯುತ್ ಕಾಂಗ್ರೆಸ್ ಅಧ್ಯಕ್ಷ ರಶೀದ್, ನಗರ ಸಭೆ ಕೌನ್ಸಿಲರ್ ಅಯೂಬ್ ಮಂಚಿಲ ಉಪಸ್ಥಿತರಿದ್ದರು.