ಬೇತಮಂಗಲ
ಸಾಮಾನ್ಯವಾಗಿ ಪೊಲೀಸರು ಎಂದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧ ತಡೆಗಟ್ಟುವುದು ಕರ್ತವ್ಯ. ಆದರೆ ಇಲ್ಲೊಬ್ಬರು ಪೊಲೀಸ್ ಅಧಿಕಾರಿ ತಮ್ಮ ಕರ್ತವ್ಯದ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯ ಮತ್ತೊಂದು ಶ್ಲಾಘನೀಯ ಕಾರ್ಯ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಕ್ಯಾಸಂಬಳ್ಳಿ ಪೊಲೀಸ್ ಠಾಣಾ ಸರಹದ್ದಿನ ರಾಮಪುರ ಬ್ರಿಡ್ಜ್ ಬಳಿ ರಸ್ತೆಯಲ್ಲಿದ್ದ ಬೃಹತ್ ಗುಂಡಿಯೊಂದು ಸಾರ್ವಜನಿಕರ ಹಾಗೂ ವಾಹನ ಸವಾರರ ಸಂಚಾರಕ್ಕೆ ತೀವ್ರ ಆಡಚಣೆ ಉಂಟುಮಾಡುತ್ತಿತ್ತು. ದಿನನಿತ್ಯ ಸಂಚರಿಸುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ.
ಕ್ಯಾಸಂಬಳ್ಳಿ ಪೊಲೀಸ್ ಉಪನಿರೀಕ್ಷಕ ಸಂಗಮೇಶ್ ಸಂಬಂಧಪಟ್ಟ ಇಲಾಖೆಯವರಿಗಾಗಿ ಕಾಯುತ್ತಾ ಕೂರದೆ ತಾವೇ ಖುದ್ದಾಗಿ ಕಣಕ್ಕಿಳಿದು, ಸಿಬ್ಬಂದಿ ಸಹಾಯದೊಂದಿಗೆ ಸಿಮೆಂಟ್ ಹಾಗೂ ಕಾಂಕ್ರೀಟ್ ಮಿಶ್ರಣ ಸಿದ್ಧಪಡಿಸಿ, ರಸ್ತೆ ಗುಂಡಿ ಯಶಸ್ವಿಯಾಗಿ ಮುಚ್ಚಿದ್ದಾರೆ. ಈ ಮೂಲಕ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರಸ್ತೆಯ ಸುರಕ್ಷತೆ ಕಾಪಾಡುವಲ್ಲಿ ಸಂಗಮೇಶ್ ತೋರಿರುವ ಈ ಸಾಮಾಜಿಕ ಕಳಕಳಿ ಇತರರಿಗೆ ಮಾದರಿಯಾಗಿದೆ.