ಹಾವೇರಿ: ಜಗತ್ತಿನಲ್ಲಿಯೇ ಭಾರತ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಎಲ್ಲರಿಗೂ ಆರೋಗ್ಯ, ಶಿಕ್ಷಣ, ಉದ್ಯೋಗ, ವಸತಿ, ಉತ್ತಮ ಪರಿಸರ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಹೆಣಗಾಡುತ್ತಿದೆ. ಬಡತನ, ನಿರುದ್ಯೋಗ ಅಸಮಾನತೆಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಮಿತಿಮೀರಿದ ಜನಸಂಖ್ಯೆ. ಇದನ್ನು ನಿಯಂತ್ರಿಸದಿದ್ದರೆ ಮನೋದೈಹಿಕ ಸಮಸ್ಯೆಗಳೂ ಉಲ್ಬಣಿಸುತ್ತವೆ ಎಂದು ಉಪನ್ಯಾಸಕ ರವಿ ಸಾದರ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಕೋ ಕ್ಲಬ್ ಮತ್ತು ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ನಡೆದ ಜನಸಂಖ್ಯೆ ಸ್ಫೋಟ ಹಾಗೂ ಯೋಗ ಮತ್ತು ಸ್ವಾಸ್ಥ್ಯ ವಿಷಯ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜನಸಂಖ್ಯೆ ಏರಿಕೆಗೆ ಅನೇಕ ಕಾರಣಗಳಿವೆ. ಅವುಗಳಲ್ಲಿ ನಮ್ಮ ಜನರಲ್ಲಿರುವ ಮೂಢನಂಬಿಕೆಗಳು ಹಾಗೂ ಗಂಡು ಮಕ್ಕಳ ಹಪಾಹಪಿ ಪ್ರಮುಖವಾದ ಕಾರಣಗಳು. ಹೆಣ್ಣು ಭ್ರೂಣ ಹತ್ಯೆ ಇಂದಿಗೂ ಜೀವಂತವಾಗಿರುವುದೇ ಇದಕ್ಕೆ ಸಾಕ್ಷಿ. ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾದರೆ ಎಲ್ಲರಿಗೂ ಸಕಲ ಸೌಲಭ್ಯಗಳನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಜನರು ''''''''ಚಿಕ್ಕ ಕುಟುಂಬ ಚೊಕ್ಕ ಕುಟುಂಬ'''''''' ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ನಂತರ ಮತದಾರರ ಸಾಕ್ಷರತಾ ಕ್ಲಬ್ ನ ಉದ್ದೇಶಗಳನ್ನು ವಿವರಿಸುತ್ತ 18 ವರ್ಷ ತುಂಬಿದ ಪ್ರತಿಯೊಬ್ಬರೂ ಅಗತ್ಯ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇಂದಿನ ಯುವಕರೇ ನಾಳಿನ ಉತ್ತಮ ಪ್ರಜೆಗಳಾದ್ದರಿಂದ ಜವಾಬ್ದಾರಿ ಅರಿತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.ಇಕೋ ಕ್ಲಬ್ ಸಂಚಾಲಕ ಶೇಖರ ಭಜಂತ್ರಿ ಮಾತನಾಡಿ, ಯೋಗ ಮತ್ತು ಸ್ವಾಸ್ಥ್ಯ ವಿಷಯದ ಕುರಿತು ವಿವರಿಸಿದರು. ಇಕೋ ಕ್ಲಬ್ ಅಡಿಯಲ್ಲಿ ಪರಿಸರಕ್ಕೆ ಸಂಬಂಧಿಸಿದ ನಿಸರ್ಗ ಮತ್ತು ಮನುಷ್ಯರಿಗೆ ಇರುವ ಸಂಬಂಧ, ಶುದ್ಧ ಪರಿಸರದ ಮಹತ್ವ, ಪರಿಸರದ ಅಳಿವು ಉಳಿವು ಮತ್ತು ರಕ್ಷಣೆ, ಮನುಷ್ಯರ ಆರೋಗ್ಯ ಮತ್ತು ಉತ್ತಮ ಬದುಕಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮನುಷ್ಯರು ಮತ್ತು ಪರಿಸರಕ್ಕೆ ಅವಿನಾಭಾವ ಸಂಬAಧವಿದೆ. ಪರಿಸರವನ್ನು ತೊರೆದು ಮನುಷ್ಯ ಬದುಕುಲಾರ. ಆದರೆ ಅಭಿವೃದ್ಧಿಯ ನೆಪದಲ್ಲಿ ನಿಸರ್ಗದ ಮೇಲೆ ಇನ್ನಿಲ್ಲದಂತೆ ದಾಳಿ ನಡೆಯುತ್ತಿದೆ. ಇದರಿಂದ ರೋಸಿ ಹೋದ ಪರಿಸರ ತನ್ನ ಸಮತೋಲನಕ್ಕಾಗಿ ವ್ಯತಿರಿಕ್ತವಾಗಿ ನಡೆದುಕೊಳ್ಳುವುದನ್ನು ನೋಡುತ್ತಿದ್ದೇವೆ. ತುರ್ತಾಗಿ ಪರಿಸರದ ಆರೋಗ್ಯವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪರಿಸರದ ಆರೋಗ್ಯವೇ ನಮ್ಮ ಆರೋಗ್ಯ. ನಾವು ಪ್ರತಿನಿತ್ಯ ಯೋಗ, ವ್ಯಾಯಾಮಗಳನ್ನು ಮಾಡುತ್ತಾ ದೇಹವನ್ನು ಸದೃಢಗೊಳಿಸಿಕೊಳ್ಳಬೇಕು. ಆರೋಗ್ಯ ಚೆನ್ನಾಗಿದ್ದರೆ ಎಂತಹ ಕನಸಿನ ಬದುಕನ್ನಾದರೂ ಕಟ್ಟಬಹುದು. ಜನಸಂಖ್ಯೆಯನ್ನು ನಿಯಂತ್ರಿಸಿದರೆ ಪರಿಸರದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಲಭ್ಯವಿರುವ ಸಂಪನ್ಮೂಲಗಳನ್ನು ಎಲ್ಲರಿಗೂ ಸಮನಾಗಿ ಹಂಚಲು ಸಾಧ್ಯವಾಗುತ್ತದೆ. ಪರಿಸರ ನಮಗೆ ಅನಿವಾರ್ಯವಾಗಿರುವುದರಿಂದ ಯುವಶಕ್ತಿ ಅದನ್ನು ಕಾಪಾಡಲು ಮುಂದೆ ಬರಬೇಕೆಂದು ಕಿವಿಮಾತು ಹೇಳಿದರು.
ದೀಕ್ಷಿತ ಬಣಕಾರ ಪ್ರಾರ್ಥಿಸಿದರು. ಉಪನ್ಯಾಸಕ ಬೀರಪ್ಪ ಕುರುಬರ ಸ್ವಾಗತಿಸಿದರು. ಶೈನ್ ಏಂಜಲ್ ಮತ್ತು ದೀಕ್ಷಿತಾ ನಿರೂಪಿಸಿದರು. ಉಪನ್ಯಾಸಕಿ ಹೊಳಲಮ್ಮ ವಂದಿಸಿದರು.