ಬಿಜೆಪಿಯವರು ರಾಮರಾಮ ಎಂದು ರಾಮಮಂದಿರ ನಿರ್ಮಾಣ ಮಾಡಿ ರಾಮನ ಹುಂಡಿ ಹೊಡೆದರಲ್ಲ

ಕೊಪ್ಪಳ: ಬಳ್ಳಾರಿಯ ನಾಗೇಂದ್ರ ಸಚಿವ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಬೇಕು. ಅವರೇನು ಅಪರಾಧಿಗಳಲ್ಲ, ಬರಿ ಆರೋಪಿ ಅಷ್ಟೇ ಎಂದು ಸಚಿವ ಶಿವರಾಜ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

ತಾಲೂಕಿನ ಮುನಿರಾಬಾದನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಯಾಕೇ ಹೋರಾಟ ಮಾಡುತ್ತಾರೆ. ಅವರಲ್ಲಿ ಎಷ್ಟು ನಾಯಕರು ಬೇಲ್ ಮೇಲೆ ಇಲ್ಲ ಎಂದು ಕುಟುಕಿದರು.

ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರಿಗೆ ಈ ಕುರಿತು ಪ್ರಶ್ನೆ ಮಾಡುವ ಅಧಿಕಾರವೇ ಇಲ್ಲ. ಅವರೇ ಯಾವ ಯಾವ ಕೇಸ್ ನಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲವೇ, ಅದಿರು ಹಗರಣ ಬಗ್ಗೆ ಜನರಿಗೆ ಗೊತ್ತಿಲ್ಲವೇ ಎಂದರು.

ಬಿಜೆಪಿಯವರು ತಾವು ಮಾಡಿದ್ದೆಲ್ಲ ಒಳ್ಳೆಯದು, ಕಾಂಗ್ರೆಸ್ ನವರು ಮಾಡಿದರೆ ಕೆಟ್ಟದ್ದಾ? ಬಿಜೆಪಿಯವರು ರಾಮರಾಮ ಎಂದು ರಾಮಮಂದಿರ ನಿರ್ಮಾಣ ಮಾಡಿ ರಾಮನ ಹುಂಡಿ ಹೊಡೆದರಲ್ಲ, ಇದಕ್ಕೆ ಏನು ಹೇಳುತ್ತಾರೆ ಎಂದರು.

ನೆಹರು ಕಾಲದಿಂದ ಪ್ರಿಯಾಂಕ ಖರ್ಗೆ ಕಾಲದವರೆಗೂ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಕ್ಕೆ ತಿರುಗೇಟು ನೀಡಿದ ಅವರು, ನೆಹರು ಅವರ ಪಾದದ ಧೂಳಿನ ಕುರಿತು ಮಾತನಾಡಲು ಅವರಿಗೆ ಹಕ್ಕಿಲ್ಲ. ಕಾಗೆ ಕೋಗಿಲಿಗೆ ಬುದ್ದಿ ಹೇಳಿದಂತಾಗುತ್ತದೆ ಎಂದರು.

ಸದನ ನಡೆಯಲು ಬಿಡಲ್ಲ ಎನ್ನಲು ಇವರ್ಯಾರು, ಸದನದಲ್ಲಿ ಚರ್ಚೆ ಮಾಡಲಿ ಪ್ರಶ್ನೆ ಮಾಡಲಿ, ರೈತರು, ರಾಜ್ಯದ ಅಭಿವೃದ್ಧಿ ಚರ್ಚೆಯಲ್ಲಿ ಭಾಗವಹಿಸಲಿ ಎಂದರು.