ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಶೋಷಿತ ಸಮುದಾಯಗಳ ವಿಮೋಚನಕಾರ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ರವರ ನಿರಂತರ ಹೋರಾಟದ ಫಲವಾಗಿ ಶೋಷಿತ ಸಮುದಾಯಗಳಿಗೆ ಸಂವಿಧಾನಿಕ ಹಕ್ಕುಗಳು ದೊರಕಿವೆ. ಆದರೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ರಾಜ್ಯದಲ್ಲಿ ದಲಿತರು, ಬಡವರಿಗೆ ಇನ್ನೂ ಕನಿಷ್ಠ ಮೂಲಭೂತ ಸೌಲಭ್ಯಗಳಾದ ಭೂಮಿ ಮತ್ತು ವಸತಿ, ಉದ್ಯೋಗಗಳು ಮರೀಚಿಕೆಯಾಗಿವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕ‌ರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರು, ಬಡವರಿಗೆ ಭೂಮಿ, ವಸತಿ, ಬ್ಯಾಕ್ ಲಾಗ್, ಉದ್ಯೋಗ, ಉದ್ಯೋಗ ನೇಮಕಾತಿಯ ವಿಶೇಷ ಘಟಕ ಯೋಜನೆಯ ಏಕಗವಾಕ್ಷಿ ನೀತಿಗಾಗಿ ಕದಸಂಸದಿಂದ ಜುಲೈ 3 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ದಲಿತ ಜನಾಗ್ರಹ ಸಮಾವೇಶ ಮತ್ತು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂವಿಧಾನ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವ ಸಲುವಾಗಿ ದಲಿತ ಸಂಘರ್ಷ ಸಮಿತಿಯು ಕಾಂಗ್ರೆಸ್‌ನ್ನು ಬೆಂಬಲಿಸುವ ಮೂಲಕ ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು ನಿರಂತರವಾಗಿ ಶ್ರಮಿಸಿರುವುದನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರ ಹಂಚಿಕೆಯಲ್ಲಿ ಪಾಲುದಾರರನ್ನಾಗಿಸಿಕೊಳ್ಳಬೇಕು. ಹಾಗೆಯೇ ಕಾಂಗ್ರೆಸ್ ಸರ್ಕಾರ ಹಲವು ದಲಿತಪರ ನೀತಿ ಹಾಗೂ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಹ ಪರಿಣಾಮ ಹಾಗೂ ಬಡವರ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ಚಿದ್ದೇವೆ. ಅದು ಆರದಂತೆ ಕಾಪಾಡೋಣ. ದಲಿತರ ಆರ್ಥಿಕ-ಸಾಮಾಜಿಕ ಸಬಲೀಕರಣಕ್ಕೆ ಸರ್ಕಾರ ವಿಶೇಷ ಘಟಕ ಯೋಜನೆ (ಎಸ್.ಸಿ.ಎಸ್.ಪಿ.) (ಟಿ.ಎಸ್.ಪಿ)ಯನ್ನು ಕಾಯ್ದೆ ಮೂಲಕ 2013 ರಂದು ಜಾರಿಗೆ ತಂದು ಸುಮಾರು 3 ಲಕ್ಷಕ್ಕೂ ಮೇಲ್ಪಟ್ಟು ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಸರ್ಕಾರ ಒದಗಿಸಿದೆ. ಅದರೆ ಈ ಅನುದಾನದಿಂದ ಎಷ್ಟು ಪರಿಶಿಷ್ಟರ ಕುಟುಂಬಗಳ ಫಲಾನುಭವಿಗಳು ಬಡತನ ರೇಖೆಯಿಂದ ಹೊರಬಂದಿವೆ? ಎಂಬುದರ ಬಗ್ಗೆ ಅಧಿಕೃತ ಅಂಕಿ ಅಂಶಗಳಿಲ್ಲ. ಈ ವಿಶೇಷ ಘಟಕ ಯೋಜನೆ ಹಣವನ್ನು ಗ್ಯಾರಂಟಿಗಳ ಮೂಲಕ ಹಂಚಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಸಬೂಬು ನೀಡುತ್ತಿರುವುದು ಕಾಯ್ದೆಯ ನೇರ ಉಲ್ಲಂಘನೆಯಾಗಿದೆ. ಭೂಮಿ, ವಸತಿ, ಸರ್ಕಾರಿ ಉದ್ಯೋಗ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಕಡ್ಡಾಯ ಶಿಕ್ಷಣ ಮುಂತಾದವು ನೆನಗುದಿಗೆ ಬಿದ್ದಿವೆ. ಭೂಮಿ ಉಳುವ ಜನರದ್ದು ಕಾರ್ಪೊರೇಟ್ ಕುಳಗಳಿಗಾಗಿ ಭೂಸ್ವಾಧೀನ ನಿಲ್ಲಿಸಿ ಪ್ರತಿ ಭೂರಹಿತ ಕುಟುಂಬಗಳಿಗೆ ಎರಡು ಎಕರೆ ಒದಗಿಸಿ ದಲಿತರು, ಬಡವರು ಗೌರವ ಘನತೆಯಿಂದ ಬದುಕುವುದನ್ನು ಖಾತ್ರಿಗೊಳಿಸಿ ಎಂದು ಆಗ್ರಹಿಸಿ, ಶೋಷಿತ ಸಮುದಾಯಗಳ ಮೇಲೆ ಸರ್ಕಾರದ ನಿರುತ್ಸಾಹ ಧೋರಣೆ ಖಂಡಿಸಿ ಜುಲೈ 3 ರಂದು ದಲಿತರ ಸಮಗ್ರ ಸಬಲೀಕರಣಕ್ಕೆಪ್ರೀಡಂ ಪಾರ್ಕ್ ನಲ್ಲಿ ದಲಿತ ಜನಾಗ್ರಹ ಸಮಾವೇಶ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸರ್ಕಾರದ ನಿಷ್ಕಾಳಜಿಯನ್ನು ವಿರೋಧಿಸಲು ದಲಿತರು, ಬಡವರು, ಬುದ್ಧಿಜೀವಿಗಳು ಸಮರೋಪದಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕ‌ರ್ ವಾದ) ರಾಜ್ಯ ಸಮಿತಿ ಸದಸ್ಯ ಸುಧಾ ವೆಂಕಟೇಶ್, ದಲಿತ ಕಲಾಮಂಡಳಿಯ ಗಾ ನಾ ಅಶ್ವಥ್, ಜಿಲ್ಲಾ ಸಂಘಟನಾ ಸಂಚಾಲಕ ಶ್ರೀನಿವಾಸ್, ಡೇವಿಡ್, ವೆಂಕಟರಾಮ್ ಮತ್ತಿತರರು ಇದ್ದರು.


ಸಿಕೆಬಿ-2 ಸುದ್ದಿಗೋಷ್ಠಿಯಲ್ಲಿ ಮಾವಳ್ಳಿ ಶಂಕರ್ ಮಾತನಾಡಿದರು.