ಕಾವೇರಿ ಆರತಿ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ: ಎಲ್.ಎನ್. ಭರತ್ ರಾಜ್ ಆರೋಪ

| Published : Apr 28 2025, 11:46 PM IST

ಕಾವೇರಿ ಆರತಿ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ: ಎಲ್.ಎನ್. ಭರತ್ ರಾಜ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು, ಮಾಗಡಿ ಇತರೆ ಪಟ್ಟಣಗಳಿಗೆ ಭಾರೀ ಗಾತ್ರದ ಕೊಳವೆಗಳ ಮೂಲಕ ನೀರು ಹೋಗಲು ಜಮೀನು ನೀಡಿದ ಗ್ರಾಮಗಳಿಗೆ ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲದ ಸರ್ಕಾರ ಇದಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜನರು ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರ ಕಾವೇರಿ ಆರತಿ ಹೆಸರಲ್ಲಿ ಸಾರ್ವಜನಿಕರ ಹಣ ಲೂಟಿ ಹೊಡೆಯಲು ಹೊರಟಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ ರಾಜ್ ಆರೋಪಿಸಿದರು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ರಾಜ್ಯ ಸರ್ಕಾರದ ಕಾವೇರಿ ಆರತಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಕುಡಿಯಲು ಶುದ್ಧ ಕಾವೇರಿ ಸಿಗುತ್ತಿಲ್ಲ. ರೈತರ ಜಮೀನುಗಳಿಗೆ ವ್ಯವಸಾಯ ಮಾಡಲು ಸಮರ್ಪಕ ನೀರು ಹರಿಸಲು ವಿಫಲವಾಗಿರುವ ಸರ್ಕಾರ ಕಾವೇರಿ ಆರತಿ ಹೆಸರಲ್ಲಿ ಸಾರ್ವಜನಿಕರ 92 ಕೋಟಿ ರು. ಹಣವನ್ನು ದುಂದುವೆಚ್ಚ ಮಾಡುತ್ತಿರುವ ಹಿಂದೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಹಣದ ಲೂಟಿ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.

ಆಸ್ಪತ್ರೆ, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಪೂರೈಸಲು ಹಣ ನೀಡದ ಸರ್ಕಾರ, ಗ್ಯಾರಂಟಿ ಯೋಜನೆಗಳಿಗೆ ಹಣ ಬಳಕೆಯಾಗುತ್ತಿರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಗಂಗಾ ಆರತಿ ಹೆಸರಿನಲ್ಲಿ ಇಡೀ ಗಂಗಾ ನದಿಯೇ ಕಲುಷಿತವಾಗಿದೆ ಎಂದು ವೈಜ್ಞಾನಿಕವಾಗಿ ವರದಿ ಬಂದಿದೆ. ಅದೇ ರೀತಿಯಲ್ಲಿ ಕಾವೇರಿ ನದಿ ಸಹ ಕಲುಷಿತ ಮಾಡಲು ಹೊರಟಿರುವ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೈಗಾರಿಕೆಗಳಿಂದ ಬರುವ ಕಲುಷಿತ ನೀರು ನದಿಗಳಿಗೆ ಸೇರ್ಪಡೆಯಾಗುತ್ತಿದೆ. ನಾಲ್ವಡಿ ಕೃಷ್ಣದೇವರಾಯರು ಕೆಆರ್ ಎಸ್ ಅಣೆಕಟ್ಟೆ ನಿರ್ಮಾಣ ಮಾಡಿದ್ದು ಜಿಲ್ಲೆಯಲ್ಲಿ ಕೃಷಿಗೆ ನೀರು ಕೊಟ್ಟು ಆಹಾರ ಧಾನ್ಯಗಳನ್ನು ಬೆಳೆಯುವ ಉದ್ದೇಶದಿಂದ. ಆದರೆ ಅವರ ಉದ್ದೇಶವನ್ನೇ ಸರ್ಕಾರಗಳು ಹಾಳು ಮಾಡಿವೆ ಎಂದು ದೂರಿದರು.

ಬೆಂಗಳೂರು, ಮಾಗಡಿ ಇತರೆ ಪಟ್ಟಣಗಳಿಗೆ ಭಾರೀ ಗಾತ್ರದ ಕೊಳವೆಗಳ ಮೂಲಕ ನೀರು ಹೋಗಲು ಜಮೀನು ನೀಡಿದ ಗ್ರಾಮಗಳಿಗೆ ಕುಡಿಯುವ ನೀರು ಕೊಡಲು ಯೋಗ್ಯತೆ ಇಲ್ಲದ ಸರ್ಕಾರ ಇದಾಗಿದೆ ಎಂದು ಕಿಡಿಕಾರಿದರು.

ಗ್ರಾಮೀಣ ಭಾಗದ ಜನರಿಗೆ ಮೂಲ ಸೌಕರ್ಯ ಕಲ್ಪಿಸದ ಸರ್ಕಾರ ಕಾವೇರಿ ಆರತಿ ಮಾಡುವುದು ಸಮಂಜಸವಲ್ಲ. ಅದನ್ನು ಕೂಡಲೇ ರದ್ದು ಪಡಿಸಬೇಕು. ತಾಲೂಕಿನಲ್ಲಿ ನಡೆಯುವ ಕಾಮಗಾರಿಗಳು ಬಹುತೇಕ ಕಳಪೆಯಿಂದ ಕೂಡಿವೆ. ರಾಜಕಾರಣಿಗಳು, ಅಧಿಕಾರಿಗಳ ಅಕ್ರಮ ಕೂಟವೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಜಿಲ್ಲಾ ಘಟಕದ ಅಧ್ಯಕ್ಷೆ ಡಿ.ಕೆ.ಲತಾ, ಕಾರ್ಯದರ್ಶಿ ಸುಶೀಲಾ, ಮುಖಂಡರಾದ, ಜಯಶೀಲಾ, ಕರ್ನಾಟಕ ಪ್ರಾಂತ ರೈತ ಸಂಘದ ಗುರುಸ್ವಾಮಿ, ಎ.ಎಲ್.ಶಿವಕುಮಾರ್, ಚಿಕ್ಕಸ್ವಾಮಿ, ಹಿಪ್ಜುಲ್ಲಾ, ವಿಷಕಂಠ, ಮಹದೇವಮ್ಮ, ಮಹದೇವು ಉಪಸ್ಥಿತರಿದ್ದರು.