ಮುಖ್ಯರಸ್ತೆ ದುಸ್ಥಿತಿ ವಿರುದ್ಧ ಜನಾಕ್ರೋಶ

| Published : May 08 2024, 01:07 AM IST

ಮುಖ್ಯರಸ್ತೆ ದುಸ್ಥಿತಿ ವಿರುದ್ಧ ಜನಾಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಜಲ್ಲಿ ಕಲ್ಲುಗಳನ್ನು ಹರಡಿ ತಿಂಗಳುಗಳೇ ಕಳೆದರೂ ಡಾಂಬರು ಹಾಕದೆ ನಿರ್ಲಕ್ಷ್ಯ ವಹಿಸಿರುವ ನಗರಸಭೆ ವಿರುದ್ಧ ಮಂಗಳವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ: ಇಲ್ಲಿನ ಕೊಂಗಾಡಿಯಪ್ಪ ಮುಖ್ಯರಸ್ತೆ ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಜಲ್ಲಿ ಕಲ್ಲುಗಳನ್ನು ಹರಡಿ ತಿಂಗಳುಗಳೇ ಕಳೆದರೂ ಡಾಂಬರು ಹಾಕದೆ ನಿರ್ಲಕ್ಷ್ಯ ವಹಿಸಿರುವ ನಗರಸಭೆ ವಿರುದ್ಧ ಮಂಗಳವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಸಾಮಾಜಿಕ ಕಾರ್ಯಕರ್ತ ಸಫೀರ್‌ ಆರಂಭಿಸಿದ ಹೋರಾಟಕ್ಕೆ ಸುತ್ತಮುತ್ತಲ ವರ್ತಕರು, ಕೆಲ ಮುಖಂಡರು ದನಿಗೂಡಿಸಿದರು. ನಗರೋತ್ಥಾನ ಯೋಜನೆಯಡಿ ರಸ್ತೆ ಡಾಂಬರೀಕರಣ ಕಾಮಾಗಾರಿ ಪ್ರಾರಂಭವಾಗಿದ್ದು, ರಸ್ತೆಗೆ ಜಲ್ಲಿ ಕಲ್ಲು ಹಾಕಿ ಕಾಮಗಾರಿಗೆ ಚಾಲನೆ ನೀಡಿದ ಗುತ್ತಿಗೆದಾರ ಡಾಂಬರು ಹಾಕದೆ ಬಿಟ್ಟಿದ್ದಾರೆ. ಕಾಮಗಾರಿ ವಿಳಂಬದಿಂದ ಸ್ಥಳೀಯ ವರ್ತಕರಿಗೆ ಧೂಳು ಮತ್ತು ಟ್ರಾಫಿಕ್ ಸಮಸ್ಯೆಯಾಗಿದ್ದು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿದರು.

ಸಫೀರ್‌ ಮಾತನಾಡಿ, ದೊಡ್ಡಬಳ್ಳಾಪುರ ನಗರದಲ್ಲಿನ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗಾಗಿ ನಗರೋತ್ಥಾನ ಅನುದಾನದಲ್ಲಿ 17 ಕೋಟಿ ರುಪಾಯಿ ಅನುದಾನ ಬಿಡುಗಡೆಯಾಗಿದೆ, ಈ ಅನುದಾನದ ಹಣದಲ್ಲಿ ರುಮಾಲೆ ಛತ್ರದಿಂದ ತೇರಿನ ಬೀದಿವರೆಗಿನ ರಸ್ತೆ ಅಭಿವೃದ್ಧಿ ಒಂದು ಪ್ರಮುಖ ಕಾಮಗಾರಿಯಾಗಿದೆ. 8 ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಿದ್ದು, ರಸ್ತೆಗೆ ಜಲ್ಲಿಕಲ್ಲು ಸುರಿದ ಗುತ್ತಿಗೆದಾರ ಡಾಂಬರು ಹಾಕದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾಜಿ ನಗರಸಭಾ ಸದಸ್ಯರಾದ ಜಿ.ಸತ್ಯನಾರಾಯಣ್ ಮಾತನಾಡಿ, ಗಣೇಶ ದೇವಸ್ಥಾನದಿಂದ ತೇರಿನ ಬೀದಿವರೆಗಿನ ರಸ್ತೆ ನಗರದ ಪ್ರಮುಖ ವಾಣಿಜ್ಯ ರಸ್ತೆಯಾಗಿದೆ. ಅದರೆ, ಅಪೂರ್ಣಗೊಂಡಿರುವ ಕಾಮಾಗಾರಿಯಿಂದ ಅಂಗಡಿಗಳಲ್ಲಿ ಧೂಳು ಅವರಿಸುತ್ತಿದೆ. ಇದರಿಂದ ವರ್ತಕರು ಸೇರಿದಂತೆ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ. ಮೊದಲೇ ಕಿರಿದಾದ ರಸ್ತೆ ಈಗ ಕಾಮಾಗಾರಿ ವಿಳಂಬದಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ.ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಹೋದರೆ ವರ್ತಕರೊಂದಿಗೆ ನಗರಸಭೆಗೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು.

ವರ್ತಕ ಭರತ್ ಮಾತನಾಡಿ, 8 ತಿಂಗಳ ಹಿಂದೆ ರಸ್ತೆಗೆ ಜಲ್ಲಿಕಲ್ಲು ಸುರಿದು ಹೋದ ಗುತ್ತಿಗೆದಾರರು ಮತ್ತೆ ಬಂದಿಲ್ಲ, ರಸ್ತೆ ಯಾವ ಸ್ಥಿತಿಗೆ ತಲುಪಿದೆ ಎಂದು ತಿಳಿಯಲು ನಗರಸಭೆ ಅಧಿಕಾರಿಗಳು ಸಹ ಇಲ್ಲಿಗೆ ಬಂದಿಲ್ಲ. ಕಾಮಗಾರಿ ವಿಳಂಬದಿಂದ ಧೂಳಿನ ಸಮಸ್ಯೆ ಹೆಚ್ಚಾಗಿದ್ದು ಅಂಗಡಿಯಲ್ಲಿ ವ್ಯಾಪಾರ ಮಾಡುವುದಕ್ಕೂ ಸಮಸ್ಯೆಯಾಗಿದೆ. ಪೊಲೀಸರು ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ಕಾಮಗಾರಿ ವಿಳಂಬ ಕುರಿತು ಪ್ರತಿಕ್ರಿಯೆ ನೀಡಿದ ಹೇಮಾವತಿಪೇಟೆ ನಗರಸಭಾ ಸದಸ್ಯ ಭಾಸ್ಕರ್, ಹಣ ಬಿಡುಗಡೆಯಾಗದ ಕಾರಣ ಕಾಮಗಾರಿ ವಿಳಂಬವಾಗಿದೆ, ನಗರಸಭಾ ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದು, ಇನ್ನೊಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

7ಕೆಡಿಬಿಪಿ1- ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಮುಖ್ಯರಸ್ತೆ ದುಸ್ಥಿತಿ ಹಾಗೂ ಟ್ರಾಫಿಕ್ ಸಮಸ್ಯೆ ಬಗ್ಗೆ ಸ್ಥಳೀಯ ವರ್ತಕರು, ಮುಖಂಡರು ಪ್ರತಿಭಟನೆ ನಡೆಸಿದರು.